‘ಗಂಡು ಮೆಟ್ಟಿನ ರಾಣಿ’ ಮಂಜುನಾಥ ಕಳಸಣ್ಣವರ ದಿಟ್ಟ ಚೆನ್ನಮ್ಮನ ಗಟ್ಟಿ ಕಥೆಯನ್ನೊಳಗೊಂಡ ಕಾದಂಬರಿಯಾಗಿದೆ. ಕಿತ್ತೂರು ಇತಿಹಾಸವನ್ನು ಕುರಿತು ಈವರೆಗೆ ಬಂದಿರುವ ಕಾದಂಬರಿಗಳನ್ನು ಗಮನಿಸಿದಾಗ, ಕಣ್ಣು ಹಾಯಿಸಿದಾಗ ಈ ಮಂಚೆ ಬಂದಿರುವುಗಳಿಗಿಂತ ಉತ್ಕೃಷ್ಟ ಮಟ್ಟದ ,ವಾಸ್ತವಿಕ ಐತಿಹಾಸಿಕ ತಳಹದಿ ಯ ಮೂಲಕ ರಾಣಿ ಚೆನ್ನಮ್ಮಾಜಿ ಮತ್ತು ಸಮಕಾಲಿನ ಪಾತ್ರಗಳನ್ನು ಜೀವಂತವಾಗಿರಿಸುವ ಎಲ್ಲಾ ಯತ್ನಗಳು ಮಂಜುನಾಥ ಅವರಿಂದ ನಡೆದಿದೆ. ಸುಮಾರು ಏಳು ವರ್ಷಗಳ ನಿರಂತರ ಅಧ್ಯಯನ ಪ್ರವಾಸ ಕಲಿಕೆಯ ಮೂಲಕ ಗಂಡು ಮೆಟ್ಟಿನ ರಾಣಿ ದಿಟ್ಟ ಚೆನ್ನಮ್ಮನ ಗಟ್ಟಿ ಕಥೆ ಹೊರಹೊಮ್ಮಿದೆ. ಇಲ್ಲಿಯವರೆಗಿನ ಕಿತ್ತೂರು ಇತಿಹಾಸ ಸಂಶೋಧನೆಯ ಲೋಪವೆಂದರೆ ಕಿತ್ತೂರು ಎಂದರೆ ಕೇವಲ ಚೆನ್ನಮ್ಮ ಮತ್ತು ಬ್ರಿಟಿಷರ ಮಧ್ಯೆ ನಡೆದ ಕಾಳಗ ಎಂಬಂತಾಗಿರುವುದು. ಇದು ಸತ್ಯವೂ ಹೌದು ಇದಷ್ಟೇ ಎನ್ನುವುದು ಅಸತ್ಯವೂ ಹೌದು. ಇಲ್ಲಿಯವರೆಗಿನ ಸಂಶೋಧನೆಯಲ್ಲಿ ಅರಮನೆ ಮತ್ತು ಗುರುಮನೆ ಸಂಬಂಧ, ಕಿತ್ತೂರು ಸಂಸ್ಥಾನ ಮತ್ತು ಪುಣಾ ಪೇಶ್ವೆಗಳ ಕುರಿತು ಸಂಶೋಧನೆ, ಕಿತ್ತೂರು ಇತಿಹಾಸದಲ್ಲಿ ಧಾರವಾಡ ಜಿಲ್ಲಾದಿಕಾರಿ ಕಛೇರಿ ಹೆಡ್ ಕ್ಲರ್ಕ್ ಹಾವೇರಿ ವೆಂಕಟರಾವ್ ನ ಪಾತ್ರ ಕುರಿತು ವಾಸ್ತವವಾಗಿ ಬರದೇ ಇರುವುದು, ಕಿತ್ತೂರು ಸಂಸ್ಥಾನ ಜೊತೆಗೆ ಸಮಕಾಲಿನ ಸಂಸ್ಥಾನಗಳ ಸಂಬಂಧ,ಕಿತ್ತೂರು ಸಂಸ್ಥಾನದ ದಿಗ್ವಿಜಯದಲ್ಲಿ ನಿರ್ಲಕ್ಷಗೊಳಗಾದ ಸೈನಿಕರು, ಕಿತ್ತೂರು ಮತ್ತು ಪೋರ್ಚುಗೀಸರ ಸಂಬಂಧ, ಕಿತ್ತೂರು ಇತಿಹಾಸದಲ್ಲಿ ನೀಗ್ರೋ ಸೈನಿಕರು ರಾಣಿ ಚೆನ್ನಮ್ಮನ ಸೊಸೆಯಂದಿರಾದ ವೀರಮ್ಮ ಮತ್ತು ಜಾನಕೀಬಾಯಿಯ ಪಾತ್ರಗಳು ಇನ್ನು ಮುಂತಾದ ಆಯಾಮಗಳಲ್ಲಿ ಕಿತ್ತೂರಿನ ಇತಿಹಾಸದ ಕುರಿತು ಸಂಶೋಧನೆ ಆಗದೇ ಇರುವುದು ಖೇದದ ವಿಷಯ. ಅನ್ನೋದಕ್ಕಿಂತ ಐತಿಹಾಸಕ ಕಾದಂಬರಿಕಾರರು ಸಮಗ್ರ ದೃಷ್ಟಿಕೋನದ ಕೊರತೆ ಎಂದು ಹೆಳಬಹುದು. ಇವೆಲ್ಲವುಗಳಿಗೆ ಪ್ರಾಮಾಣಿಕವಾಗಿ ನ್ಯಾಯ ಒದಗಿಸುವ ಕೆಲಸವನ್ನು ಮಂಜುನಾಥ್ ಕಳಸನ್ನವರ ಅವರು ಮಾಡಿದ್ದಾರೆ.