"ದ್ಯಾಮ್ರ ಯಮ್ನವ್ವ ಮತ್ತು ಇತರ ಕಥೆಗಳು’' ಗೋಲಗೊಂಡ ಅವರ ಪ್ರಥಮ ಕಥಾಸಂಕಲನ. ಕಥೆಗಾರರ ಗ್ರಾಮೀಣ ಪರಿಸರದ ಗಟ್ಟಿಯಾದ ಜೀವನಾನುಭವವು ಹರಳುಗೊಂಡು ಇಲ್ಲಿ ಕಥೆಗಳಾಗಿ ರೂಪ ತಾಳಿವೆ. ಇಲ್ಲಿರುವ ಹತ್ತು ಕಥೆಗಳು ಕಥೆಗಾರರ ವಸ್ತು ವೈವಿಧ್ಯತೆಗೆ, ಕಲ್ಪನಾಶಕ್ತಿಯ ಅಗಾಧತೆಗೆ, ಕಥೆಕಟ್ಟುವ ಆಕರ್ಷಕ ರೀತಿಗೆ, ಭಾಷೆಯ ಹೃದ್ಯತೆ ಹಾಗೂ ಕಲಾತ್ಮಕ ನಿರೂಪಣೆಗೆ ಸಾಕ್ಷಿಯಾಗಿ ನಿಂತಿವೆ. ಮನುಷ್ಯನಲ್ಲಿರುವ ಮೂಢನಂಬಿಕೆ, ಮೋಸ-ವಂಚನೆ, ಸುಳ್ಳು-ಪ್ರತಿಷ್ಠೆ, ಸ್ವಾರ್ಥ, ಕುಡಿತ, ಕಾಮುಕತನ, ಬಡತನ, ಶ್ರಮಿಕತನ ಮೊದಲಾದವುಗಳನ್ನು ಇಲ್ಲಿನ ಕಥೆಗಳಲ್ಲಿ ಗ್ರಾಮ್ಯ ಹಾಗೂ ಗ್ರಾಂಥಿಕ ನೆಲೆಗಳೆರಡರಲ್ಲೂ ಮನಮುಟ್ಟುವಂತೆ ಚಿತ್ರಿಸಿದ್ದಾರೆ. ಕಥೆ ಹೇಳುವ, ಕೇಳುವ ಪರಂಪರೆ ತುಂಬಾ ಪ್ರಾಚೀನವಾದುದು. ಜಾಗತಿಕ ಸಾಹಿತ್ಯ ಚರಿತ್ರೆಯಲ್ಲಿ "ಕಥೆ'ಗೆ ತನ್ನದೆ ಆದ ವಿಶೇಷ ಮನ್ನಣೆಯಿದೆ. ಯಾಕೆಂದರೆ ಕಥೆ ಕೇಳುವ ಕೇಳುಗನಿಗೆ, ಓದುವ ಓದುಗನಿಗೆ, ಮಾತ್ರವಲ್ಲದೆ ಪ್ರತಿಯೊಬ್ಬರನ್ನು ಆಕರ್ಷಿಸಿ, ರಂಜಿಸುವ ಅತ್ಯಂತ ಪ್ರಭಾವಶಾಲಿ ಶಕ್ತಿಯುಳ್ಳದ್ದು. ಕಥೆಗಳನ್ನು ಕೇಳದಿರುವ, ಇಷ್ಟಪಡದಿರುವ ಮಾನವರುಂಟೆ? ಖಂಡಿತವಾಗಿಯೂ ಇರಲಿಕ್ಕಿಲ್ಲ. ಅಂತಹ ಸಮ್ಮೋಹಕ ಶಕ್ತಿ ಅದಕ್ಕುಂಟು. ಹೀಗಾಗಿ ಸಾಹಿತ್ಯದ ಪ್ರಕಾರಗಳಲ್ಲಿ "ಸಣ್ಣಕಥೆ" ಎಂಬ ಹೆಸರಿನಿಂದ ಜನಪ್ರಿಯವಾಗಿದೆ. ಒಟ್ಟಿನಲ್ಲಿ ಇದು ಉತ್ತಮ ಸಣ್ಣಕಥಾ ಸಂಕಲನ. ಸಹೃದಯರಿಗೆ ಹಿಡಿಸಿ ಮೆಚ್ಚುಗೆ ಪಡೆಯುವ ಕಥೆಗಳು ಇಲ್ಲಿವೆ.
ಡಾ. ಶ್ರೀಶೈಲ ಗೋಲಗೊಂಡ ಅವರು ಮೂಲತಃ ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ರೋಣಿಹಾಳದವರು. 1970 ಜುಲೈ 25ರಂದು ಇವರ ಜನನ. ತಮ್ಮ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ರೋಣಿಹಾಳದಲ್ಲಿ, ಕೊಲ್ಹಾರದ ಸಂಗಮೇಶ್ವರದಲ್ಲಿ ಪಿ.ಯು, ವಿಜಯಪುರದ ಎಸ್.ಬಿ. ಕಲಾ ಹಾಗೂ ಕೆ.ಸಿ.ಪಿ. ವಿಜ್ಞಾನ ಮಹಾವಿದ್ಯಾಲಯದಲ್ಲಿ ಪದವಿ ಮತ್ತು 1993ರಲ್ಲಿ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಇಂಗ್ಲಿಷ್ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಕೆಲವು ವರ್ಷ ಇಲಕಲ್ಲ, ಹುನಗುಂದ ಮಹಾ ವಿದ್ಯಾಲಯಗಳು ಮತ್ತು ಸಿ.ವಿ.ಚರಂತಿಮಠ ರೂರಲ್ ಪಾಲಿಟೆಕ್ನಿಕ್ದಲ್ಲಿ ತಾತ್ಕಾಲಿಕ ಇಂಗ್ಲಿಷ್ ಉಪನ್ಯಾಸಕರಾಗಿ, 2005ರಲ್ಲಿ ಹುನಗುಂದ ವಿಜಯ ಮಹಾಂತೇಶ ವಿದ್ಯಾವರ್ಧಕ ಸಂಘದ ವಿಜಯ ಮಹಾಂತೇಶ ಕೃಪಾಪೋಷಿತ ಸಂಗನಬಸಯ್ಯ ರಾಚಯ್ಯ ವಸ್ತ್ರದ, ...
READ MORE