ಪ್ರೀತಿ, ಪ್ರೇಮ, ಯೌವನದ ಆಕರ್ಷಣೆಯಾದರೆ,ಈ ವಿವಾಹವೂ ವಿಚ್ಛೇದನದಲ್ಲಿ ಮುಕ್ತಾಯವಾಗುತ್ತದೆ. ನೈಜಪ್ರೇಮಿಗಳು ಸಂಗಾತಿಗಾಗಿ ಯಾವುದೇ ತ್ಯಾಗಕ್ಕೂ ಸಿದ್ಧವಾಗಿರುತ್ತಾರೆ.ಏನೇ ಕಷ್ಟವನ್ನು ಸಹಿಸಲು ತಯಾರಿರುತ್ತಾರೆ.ಅಂತಹದೇ ಪ್ರೇಮಕತೆ ಕಾದಂಬರಿ "ಸಪ್ತಧಾರೆ".ಶ್ರೀಮಂತ ಉದ್ಯಮಿ ರಾಮಲಿಂಗಂ ಮಗಳು ಅಂಜಲಿ ಮತ್ತು ಪ್ರೋಫೆಸರ್ ಅನಂತರಂಗಮೂರ್ತಿಯವರ ಮಗ ವಾಸು ಪರಸ್ಪರ ಯೌವನದ ಆಕರ್ಷಣೆಗೆ ಒಳಗಾಗುತ್ತಾರೆ.ಇವರ ಪ್ರೇಮದ ಸುಳಿವು ದೊರೆತ ರಾಮಲಿಂಗಂ ಮಗಳ ಮದುವೆಯ ನಿಶ್ಚಿತಾರ್ಥವನ್ನು ಅವಳ ಸೋದರಮಾವ ಚೆಲುವಯ್ಯನೊಡನೆ ಮಾಡುವ ತಯಾರಿ ನಡೆಸುತ್ತಾರೆ.ಅಂಜಲಿ ವಾಸುಗೆ ವಿಷಯ ತಿಳಿಸಿ, ಓಡಿ ಹೋಗಿ ಮದುವೆಯಾಗುವ ಒತ್ತಡ ಹೇರುತ್ತಾಳೆ.ಪ್ರೇಮಾಂಧನಾದ ವಾಸು ಅಕ್ಕನ ಬುದ್ಧಿಮಾತಿಗೂ ಕಿವಿಗೊಡದೆ ಮನೆ ಬಿಟ್ಟು ಹೋಗಿ ಮದುವೆಯಾಗುತ್ತಾನೆ.ವಾಸು ಸಂಪಾದಿಸುವ ಹಣ ಯಾವೂದಕ್ಕೂ ಸಾಲದೇ,ಕಾಸು ಕಾಸಿಗೂ ಪರದಾಡುವ ಸ್ಥಿತಿ ಬಂದಾಗ ಅಂಜಲಿಗೆ ತಂದೆಯ ಸಂಪತ್ತಿನ ನೆನಪಾಗುತ್ತದೆ.ಆಗಾಗ ಬಂದು ಭೇಟಿಯಾಗುವ ಅವಳ ತಾಯಿ ಮತ್ತು ಅಜ್ಜಿ, ಹಣದ ಸಹಾಯ ನೀಡಿದರೂ,ಹಣದ ಆಮೀಷಕ್ಕೆ ಬಲಿಯಾಗದೆ ತನ್ನ ದೊಡ್ಡತನ ಮೆರೆಯುವಲ್ಲಿ ವಾಸು ಯಶಸ್ವಿಯಾಗುತ್ತಾನೆ.ರಾಮಲಿಂಗಂ ಮಗಳಿಗೆ ದೊಡ್ಡ ಬಂಗಲೆ ಖರೀದಿಸಿ ಕೊಟ್ಟು "ವಾಸವನ್ನು ಅಲ್ಲಿಗೆ ಬದಲಾಯಿಸಿದರೆ, ನಿನ್ನ ಗಂಡ ನಿನ್ನ ಮೇಲಿನ ಪ್ರೀತಿಯಿಂದ ನಿನ್ನ ಹಿಂದೆ ಬರುತ್ತಾನೆ" ಎಂಬ ಉಪದೇಶ ಕೊಡುತ್ತಾರೆ.ಹಣದಾಹವಿಲ್ಲದ ವಾಸು ಪತ್ನಿಯ ಬಂಗಲೆಗೆ ಬರದೇ, ತಾನಿದ್ದ ಮನೆ ಖಾಲಿ ಮಾಡಿ ಪತ್ನಿಗೆ ಪತ್ರ ಬರೆದು ಊರು ಬಿಟ್ಟು ಹೋಗುತ್ತಾನೆ.ಮೂರು ತಿಂಗಳ ನಂತರ ಹಿಂತಿರುಗುವೇ, ಹೊಂದಾಣಿಕೆ ಸಾಧ್ಯವಾದರೆ ತನ್ನೊಡನೆ ಸಂಸಾರ ಮಾಡು,ಇಲ್ಲ ತಾನು ವಿಚ್ಛೇದನ ನೀಡುವೆ ಎಂದು ಪತ್ರದಲ್ಲಿ ಉಲ್ಲೇಖಿಸಿರುತ್ತಾನೆ.ತವರು ಮನೆಗೆ ಮರಳಿದ ಅಂಜಲಿಗೆ ತಾಯಿ, ತಂದೆ, ಅಜ್ಜಿ ಗಂಡನನ್ನು ಬಿಟ್ಟು ಬೇರೆ ಮದುವೆಯಾಗುವಂತೆ ಹೇಳುತ್ತಾರೆ.ಅಂಜಲಿ ತವರು ಮನೆಯವರ ಮಾತು ಕೇಳಿದಳೇ? ಗಂಡನಿಗೆ ವಿಚ್ಛೇದನ ನೀಡಿದಳೇ? ಪತಿಯ ಮೇಲಿನ ಪ್ರೀತಿಗಿಂತತಂದೆಯ ಸಂಪತ್ತಿನ ಮೇಲಿನ ಪ್ರೀತಿ ಹೆಚ್ಚಾಯಿತೇ? ತನ್ನ ಪ್ರೀತಿ ಯೌವನದ ಆಕರ್ಷಣೆಯಲ್ಲ ನೈಜ ಪ್ರೀತಿ ಎಂದು ಅಂಜಲಿ ಸಾಬೀತು ಪಡಿಸಿದಳೇ? ಹೀಗೆ ಹಲವು ಪ್ರಶ್ನೆಗಳನ್ನು ಹುಟ್ಟುಹಾಕುತ್ತಾ ಮುಂದೆ ಸಾಗುವ ಕಾದಂಬರಿ ಅವೆಲ್ಲ ಪ್ರಶ್ನೆಗಳಿಗೂ ಉತ್ತರ ಕೊಡುತ್ತದೆ.
©2025 Book Brahma Private Limited.