ಈ ಕಾದಂಬರಿಯಲ್ಲಿ ಎದೆಯೊಳಗೆ ಪ್ರೀತಿಯನ್ನು ಬಚ್ಚಿಟ್ಟುಕೊಂಡ ಪ್ರೇಮಿಯಿದ್ದಾನೆ. ಆ ಪ್ರೀತಿ ತಿಳಿದರೂ ತಿಳಿಯದಂತೆ ಸುಮ್ಮನೆ ಉಳಿದ, ಇನ್ನೊಬ್ಬನ ಪ್ರೇಮ ನಿವೇದನೆಗೆ ಆಘಾತಗೊಂಡು, ಸೂಕ್ತವಾದ ನಿರಾಕರಿಸಲಾಗದೇ ಆಪತ್ತು ಮೈಗೆಳೆದುಕೊಂಡ ಅವಿವೇಕಿ ಪ್ರೇಯಸಿ ಇದ್ದಾಳೆ. ಒಂದು ಅಪೂರ್ಣ ಪ್ರೇಮ ಕಥೆ ಇದೆ. ಪ್ರೇಮದ ಹೆಸರಲ್ಲಿ ಮಾಡಬಾರದ್ದೆಲ್ಲಾ ಮಾಡಿದ ಅವಕಾಶವಾದಿತನದ ಗೆಳೆತನವಿದೆ. ಆಪ್ತ ಗೆಳೆಯನ ಬೆನ್ನಿಗೆ ಚೂರಿ ಹಾಕಿದ, ಜೊತೆ ಜೊತೆಗೆ ಒಂದು ಪ್ರೀತಿಯನ್ನು ಮುರುಟಿಸಿದ ಕಥೆ ಇದೆ. ತಪ್ಪಿತಸ್ಥನ ಜೊತೆಗೂಡಿ, ಮತ್ತಷ್ಟು ತಪ್ಪುಗಳನ್ನು ಮಾಡಿ ಪಾಪಪ್ರಜ್ಞೆಯ ಲವಲೇಶವೂ ಇಲ್ಲದೇ ಹುಸಿ ಭ್ರಮೆಯಲ್ಲಿ ಬದುಕುವ ಕೆಟ್ಟ ಗೆಳೆಯರ ಗುಂಪಿದೆ. ಈ ಕಾದಂಬರಿ ನೇರವಾಗಿ ಕಥೆಯನ್ನು ಓದುಗರಿಗೆ ತೆರೆದಿಡುತ್ತಾ ಹೋಗುವುದಿಲ್ಲ. ಇಲ್ಲಿ ಕಥಾನಾಯಕನ ವಾಸ್ತವ ಬದುಕಿನ ಜೊತೆ ಜೊತೆಗೆ ಅವನ ಬದುಕಿನ ಗತವೂ ಹಂತ ಹಂತವಾಗಿ ಬಿಚ್ಚಿಕೊಳ್ಳುತ್ತಾ ಹೋಗುತ್ತದೆ. ಅದೂ ಅವನೇ ಫೇಸ್ಬುಕ್'ನಲ್ಲಿ ಬರೆದು ಪ್ರಕಟ ಮಾಡುವ ಧಾರಾವಾಹಿಯ ಮೂಲಕ ಎನ್ನುವುದು ವಿಶೇಷ. ಹಾಗಾಗಿ ಇದು ಕಥೆಯೊಳಗೊಂದು ಕಥೆ. ನಾಲ್ಕು ಸಾಲು ಗೀಚಲಾಗದವನು ಅವಳಿಗಾಗಿ ಬರಹಗಾರನಾದ. ಕಥೆಯ ಅಂತ್ಯಕ್ಕಿಂತ ಮುಂಚೆ ತಾನು ಬರೆದ ಕವನವನ್ನು ಆಕೆಯ ಕೈಗಿಡುವ ಸಂದರ್ಭವಿದೆ. ಅವಳನ್ನು ಅವನು ಕೊನೆಯ ಬಾರಿಗೆ ನೋಡಿದ ಸಂದರ್ಭವೂ ಹೌದು. ಆ ಕವನ ನಿಜಕ್ಕೂ ಮನ ಕಲಕುತ್ತದೆ. ಕಥೆಯಲ್ಲಿ ಬಳಕೆಯಾದ ಭಾಷೆ ನಮ್ಮ ಮಂಗಳೂರು ಕನ್ನಡ. ಹಾಗೂ ಪರಿಸರವೂ ಮಂಗಳೂರು ನಗರದ ಸುತ್ತ ಮುತ್ತಲಿನ ಪ್ರದೇಶ. ಹಾಗಾಗಿ ಓದು ಮತ್ತಷ್ಟು ಖುಷಿಕೊಟ್ಟಿತು.
ಯುವ ಲೇಖಕ ಧೀರಜ್ ಪೊಯ್ಯೆಕಂಡ ಅವರು ಮೂಲತಃ ಬಂಟ್ವಾಳ ತಾಲೂಕಿನ ಅಮ್ಟೂರು ಗ್ರಾಮದ ಪೊಯ್ಯೆಕಂಡದವರು. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವೀಧರರು. ಇವರು ಹವ್ಯಾಸಿ ಬರಹಗಾರ, ಫೋಟೋಗ್ರಾಫರ್ ಹಾಗೂ ಗ್ರಾಫಿಕ್ ಡಿಸೈನರ್ ಕೂಡ ಹೌದು. ಪ್ರಸ್ತುತ ವಿಜಯಕರ್ನಾಟಕದಲ್ಲಿ ಪುರವಣಿ ವಿಭಾಗದಲ್ಲಿ ಕಾರ್ಯನಿರ್ವಹಿಸುತಿದ್ದಾರೆ. ‘ಮಿತಿ’ ಅವರ ಮೊದಲ ಕಾದಂಬರಿ. ಕೃತಿಗಳು: ಮಿತಿ, ಪರಾಶರ, 2035 ...
READ MORE