‘ಹಲವು ಬಣ್ಣದ ಬೆಳಕು’ ನಾಗೇಶ್ ಜೆ. ನಾಯಕ ಅವರ ವಿಮರ್ಶಾ ಲೇಖನವಾಗಿದೆ. ಇದಕ್ಕೆ ಸಂತೆಬೆನ್ನೂರು ಫೈಜ್ನಟ್ರಾಜ್ ಅವರ ಬೆನ್ನುಡಿ ಬರಹವಿದೆ; ಎದೆತುಂಬಿ ಬರೆಯುವ ಭಾವಬಂಧುರದ ಜೀವಕವಿ ನಾಗೇಶ್ ಜೆ ನಾಯಕ. ಕನ್ನಡ ಸಾಹಿತ್ಯದಲ್ಲಿ ಈ ಎರಡು ದಶಕಗಳಿಂದ ಕೇಳಿಬರುತ್ತಿರುವ ಗಟ್ಟಿ ಹೆಸರು. ವೃತ್ತಿ ಪ್ರವೃತ್ತಿ ಎರಡರಲ್ಲೂ ಸಾಧನಾಪರವಶರಾಗುವ ಇವರ ಸಾಹಿತ್ಯ ಮಜಲು ಭಿನ್ನ ನೆಲೆಯನ್ನು ಒಳಗೊಂಡಿದೆ. ಕಾವ್ಯ, ಕತೆ, ಪ್ರಬಂಧ, ಗಝಲ್, ವಿಮರ್ಶೆ, ವ್ಯಕ್ತಿ ಚಿತ್ರಣ ಇತ್ಯಾದಿ ಪ್ರಕಾರಗಳಲ್ಲಿ ಪಳಗಿದ ಕೈಯಿದು. ಬಹುಪಾಲು ನಾಡಿನ ಎಲ್ಲ ಪತ್ರಿಕೆಗಳು ಇವರ ಬರಹಗಳನ್ನು ಮುದ್ರಿಸಿವೆ ಎಂದರೆ ಅತಿಶಯವಾದ ವಿಷಯವೇನಲ್ಲ. ಪ್ರಸ್ತುತ ಸಾಹಿತ್ಯ ಲೋಕದ ನಮ್ಮ ಸಮಕಾಲಿನ ಬರಹಗಾರರಲ್ಲಿ ಮುಂಚೂಣಿಯಲ್ಲಿ ಇವರು ಕಾಣಸಿಗುತ್ತಾರೆ. ನಾಡಿನ ಭಿನ್ನ ಭಿನ್ನ ಬರಹಗಾರರ, ನೂರಾರು ಸಾಹಿತಿಗಳ ಬರಹಗಳನ್ನು ತಮ್ಮ ಅನುಭವದ ಮೂಸೆಯಲ್ಲಿ ವಸ್ತು ನಿಷ್ಠವಾಗಿ ವಿಮರ್ಶೆಯ ತಕ್ಕಡಿಯಲ್ಲಿ ಏರು ಪೇರಾಗದಂತೆ ಸಹೃದಯನೆದುರು ಇಡುವ ಕಲಾಮೇಧಾವಿ ನಮ್ಮ ನಾಗೇಶ್! ಇತ್ತೀಚಿಗೆ ಹಲವಾರು ಹಿರಿಕಿರಿ ಕವಿಗಳ ಒಂದೊಂದು ಕವಿತೆಯನ್ನು ತೆಗೆದುಕೊಂಡು ಅದರ ಒಳ ಹೊರ ಸಾರ ಸಾಹಿತ್ಯ ಲೋಕಕ್ಕೆ ಉಣಬಡಿಸುತ್ತಿರುವ ಶಬ್ದ ಕೈಂಕರ್ಯ ಅನುಪಮವಾದದ್ದು. ಈಗಾಗಲೇ ಬಯಲಕನ್ನಡಿ, ಆತ್ಮಧ್ಯಾನದ ಬುತ್ತಿ, ಗರೀಬನ ಜೋಳಿಗೆ, ಒಡಲ ದನಿ, ಘನದ ಕುರುಹು, ಪರಿಮಳದ ಹಾದಿಯಲ್ಲಿ ಮುಂತಾದ ಕೃತಿರತ್ನಗಳನ್ನು ಕನ್ನಡ ಸಾಹಿತ್ಯ ಜಗಕ್ಕರ್ಪಿಸಿ ಮುಂದೆ ಸಾಗುತ್ತಿರುವ ಕವಿಮಿತ್ರ ನಾಗೇಶ್ ರ ಈ ನೂತನ ಕೃತಿ 'ಹಲವು ಬಣ್ಣದ ಬೆಳಕು' ನಾಡಿನ ಹಲವಾರು ಪ್ರತಿಭೆಗಳ ಹೂರಣ ಹೊತ್ತ ಹೊನ್ನ ಕೃತಿಯೇ ಸೈ। ಸರಳತೆ, ಸಜ್ಜನಿಕೆ, ಹಿತಮಿತ ಮಾತು ಯಾವ ವ್ಯಕ್ತಿಯಲ್ಲಿರುತ್ತದೋ ಆತ ಬರೆಯದಿದ್ದರೂ ಕವಿ ಅನ್ನುತ್ತಾರೆ ದಾರ್ಶನಿಕರು. ಇವೆಲ್ಲ ಗುಣಗಳ ಜೊತೆಯಲ್ಲಿ ಬರೆಯುವ ಹುಕಿ ಹೊತ್ತ ಈ ಕವಿ ನಿಜಕ್ಕೂ ಸಮಾಜದ ಕಣ್ಣು. ನಾಗೇಶರ ಈ ಕೃತಿ ಲೋಕದ ಕಣ್ಣಿಗೆ ಹೊಸ ಹೊಳಹು ನೀಡಲಿ.
ನಾಗೇಶ್ ಜೆ. ನಾಯಕ ವೃತ್ತಿಯಲ್ಲಿ ಶಿಕ್ಷಕರು. 1975 ಫೆಬ್ರವರಿ 23 ರಂದು ಸವದತ್ತಿಯಲ್ಲಿ ಜನಿಸಿದರು. ಕನ್ನಡ ದಿನಪತ್ರಿಕೆಗಳಲ್ಲಿ ಇವರ ಲೇಖನಗಳು ಪ್ರಕಟವಾಗಿವೆ. ‘ನೀನೊಂದು ಮುಗಿಯದ ಸಂಭ್ರಮ, ಪ್ರೀತಿಯಿಂದ ಪ್ರೀತಿಗೆ, ಭರವಸೆಗಳ ಬೆನ್ನೇರಿ, ಪುಟ್ಟ ಪದ್ಯಗಳು, ಕವಿ ಸಮಯ ಮಠದೊಳಗಣ ಬೆಕ್ಕು’ ಮುಂತಾದ ಕೃತಿಗಳು ಪ್ರಕಟಣೆಗೊಂಡಿವೆ. ಬಯಲ ಕನ್ನಡಿ-ವಿಮರ್ಶಾ ಸಂಕಲನ, ಒಡಲ ದನಿ-ಅಂಕಣ ಬರಹಗಳು, ಘನದ ಕುರುಹು-ವ್ಯಕ್ತಿ ಚಿತ್ರಣ, ಚಿನ್ನದ ಚೂರಿ-ಕಥಾ ಸಂಕಲನ ಅವರ ಇತ್ತಿಚಿನ ಕೃತಿಗಳಾಗಿವೆ. ಇವರ ಸಾಹಿತ್ಯ ರಚನೆಗಾಗಿ ಸಂಕ್ರಮಣ ಸಾಹಿತ್ಯ ಪ್ರಶಸ್ತಿ, ಸಂಚಯ ಕಾವ್ಯ ಪುರಸ್ಕಾರ, ಆಜೂರು ಪುಸ್ತಕ ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿ ...
READ MORE