ಕಥೆಗಾರ ವಿವೇಕ ಶಾನಭಾಗ ಅವರ ನಾಟಕ ಕೃತಿ ʼಸಕ್ಕರೆ ಗೊಂಬೆʼ.ತಮ್ಮ ಕಥೆಗಳು ಕಾದಂಬರಿಗಳ ಮೂಲಕ ಹೊಸದೇ ಭಾವಜಗತ್ತೊಂದನ್ನು ತೆರೆಯುವ ವಿವೇಕ ಶಾನಭಾಗ ಅವರು ಈ ನಾಟಕದಲ್ಲಿ ಆರಿಸಿಕೊಂಡಿರುವ ವಸ್ತು ವಿಶಿಷ್ಟವಾದುದು. ಉದ್ಯಮಿ ತಂದೆಯ ಹಿಡಿತದಿಂದ ಬಿಡಿಸಿಕೊಳ್ಳಬಯಸುವ ಚಿತ್ರ ಕಲಾವಿದ ಮಗ ಮನೆ ಬಿಟ್ಟು ಓಡಿಬಂದಿರುವಲ್ಲಿಂದ ಶುರುವಾಗುವ ನಾಟಕದಲ್ಲಿ, ಮತ್ತೆ ಆತ ಮನೆಯ ಕಡೆ ಮುಖ ಮಾಡುವ ಬೆಳವಣಿಗೆ ಘಟಿಸುತ್ತದೆ. ಇಲ್ಲಿನ ಒಟ್ಟು ತಳಮಳ ತಾಕಲಾಟಗಳು ಕಾಲವನ್ನು ಮೀರಿದ ಸಂವೆದನೆಯೊಂದನ್ನು ಹಿಡಿದಿಡುತ್ತವೆ.
ಈಚಿನ ಕನ್ನಡ ಕಥಾ ಸಾಹಿತ್ಯದಲ್ಲಿ ವಿವೇಕ ಶಾನಭಾಗ ಅವರ ಕಥೆಗಳು ತಮ್ಮ ಒಂದು ವಿಶಿಷ್ಟ ಲಕ್ಷಣದಿಂದ ಗಮನ ಸೆಳೆಯುತ್ತಿವೆ. ಸಕ್ಕರೆ ಗೊಂಬೆ ಪೂರ್ಣವಾಗಿ ಇಂಥ ಉದ್ಯಮಲೋಕದ ಕೇಂದ್ರದಲ್ಲಿಯೇ ಘಟಿಸುವ ಒಂದು ನಾಟಕವಾಗಿದೆ. ಎನ್ಕೆ ಎಂದು ಪರಿಚಿತನಾಗಿರುವ ನಂದಕಿಶೋರ ಬಹುದೊಡ್ಡ ಕೈಗಾರಿಕೋದ್ಯಮಿ, ಗೋಮತಿ ಗ್ರೂಪ್ ಎಂದು ಪ್ರಸಿದ್ಧವಾದ ಸಮುಚ್ಚಯದ ಮಾಲಿಕ. ಈತನ ಮಗ ಸಿದ್ಧಾರ್ಥ ಚಿತ್ರಕಾರ; ಆತ ತಂದೆಯ ಪ್ರಭಾವ-ಪ್ರಭಾವಳಿಯ ಪಾಶದಿಂದ ಬಿಡುಗಡೆಯಾಗಬೇಕೆಂದು ಹವಣಿಸುತ್ತಿದ್ದಾನೆ. ಅದಕ್ಕಾಗಿ ಆತ ಈ ನಾಟಕದ ಆರಂಭದಲ್ಲಿಯೇ ಮನೆ ಬಿಟ್ಟು ಬಂದಿದ್ದಾನೆ; ‘ದಿವ್ಯ’ದ ಹುಡುಕಾಟದಲ್ಲಿ ತೊಡಗಿದ್ದಾನೆ. ಇಲ್ಲಿ ಆತನಿಗೆ ಸಿಗುವ ಒಂದು ಸಂದೇಶ ಮತ್ತೆ ಆತನನ್ನು ಮನೆಯ ಕಡೆ ಮುಖಮಾಡಿಸುತ್ತದೆ; ಅಲ್ಲಿ ಆತನನ್ನು ತನ್ನ ತಂದೆಯನ್ನು ಅರಿಯಲು ತೊಡಗುವ ಮನೋಯಾತ್ರೆಯೊಂದರ ತುಣುಕು ನೋಟಗಳೇ ಈ ನಾಟಕದ ದೃಶ್ಯಾವಳಿಗಳಾಗಿವೆ. ಬಹುತೇಕ ಕಥನ ಸಾಹಿತ್ಯಗಳು ಹಳ್ಳಿ-ಪೇಟೆ, ಬಾಲ್ಯ-ಯೌವನ, ಸಮುದಾಯ-ವ್ಯಕ್ತಿ, ಧರ್ಮ-ವಿಜ್ಞಾನ, ವಸಾಹತೀಕರಣ – ಇಂಥ ವಸ್ತುಗಳನ್ನೇ ಹೆಚ್ಚಾಗಿ ಕೇಂದ್ರೀಕರಿಸಿಕೊಂಡಿದ್ದರೆ, ವಿವೇಕರ ಈಚಿನ ಕಥೆಗಳಲ್ಲಿ ಜಾಗತೀಕರಣಗೊಂಡ ಉದ್ಯಮಲೋಕವೊಂದರ ಚಿತ್ರವು ಅನಾವರಣಗೊಳ್ಳಲು ಆರಂಭವಾಗಿದೆ. ಆ ಲೋಕವನ್ನು ಗ್ರಹಿಸಲು ಹೊಸ ದಾರಿಗಳನ್ನು ಹುಡುಕುವುದು ಈ ಕಥನದ ಹಿಂದಿರುವ ಒಂದು ಸ್ಥಾಯಿ ಉದ್ದೇಶವಾಗಿ ನಮಗೆ ಕಾಣುತ್ತದೆ. ಪ್ರಸ್ತುತ ನಾಟಕವು ಅಂಥ ಒಂದು ಉದ್ದೇಶದ ಇನ್ನೊಂದು ಹೆಜ್ಜೆ ಎಂದು ಕಾಣಿಸಲು ಸಾಧ್ಯವಿದೆ.
ವಿವೇಕ ಶಾನಭಾಗ ಅವರು ಉತ್ತರ ಕನ್ನಡ ಜಿಲ್ಲೆಯವರು. ಕನ್ನಡದ ಪ್ರಮುಖ ಕತೆಗಾರರಲ್ಲಿ ಒಬ್ಬರಾದ ವಿವೇಕ ಅವರು 'ದೇಶಕಾಲ' ಎಂಬ ಸಾಹಿತ್ಯಕ ಪತ್ರಿಕೆಯನ್ನೂ ಏಳು ವರ್ಷ ಕಾಲ ನಡೆಸಿದರು. ಹೊಸ ಬಗೆಯ ಕಥೆ ಕಟ್ಟುವ ಅವರು ಸಣ್ಣ ಊರು ಅಥವಾ ವಿಶಾಲ ಜಗತ್ತುಗಳೆರಡರಲ್ಲಿಯೂ ಮನುಷ್ಯರ ಮನಸ್ಸಿನ ಆಯಾಮ ಗುರುತಿಸಬಲ್ಲರು. ಅವರ ’ಘಾಚರ್ ಘೋಚರ್ ನೀಳ್ಗತೆಯ ಇಂಗ್ಲಿಷ್ ಅನುವಾದ ಜಗತ್ತಿನ ಸಾಹಿತ್ಯ ವಲಯದ ಗಮನ ಸೆಳೆದಿದೆ. ಲಂಡನ್, ಅಮೆರಿಕಗಳಲ್ಲಿ ಪ್ರತ್ಯೇಕ ಆವೃತ್ತಿ ಕಂಡಿರುವ ಈ ಕೃತಿ ಜಗತ್ತಿನ 18 ಭಾಷೆಗಳಿಗೆ ಅನುವಾದಗೊಂಡು ಮಚ್ಚುಗೆ ಗಳಿಸಿದೆ. ಅಂಕುರ, ಲಂಗರು, ಹುಲಿಸವಾರಿ, ಮತ್ತೊಬ್ಬನ ...
READ MORE