ಡಾ. ಚಂದ್ರಶೇಖರ ಕಂಬಾರರ 'ಹರಕೆಯ ಕುರಿ' ನಾಟಕವು ರಾಜಕೀಯ ವಸ್ತು ಹೊಂದಿರುವಂತಹದು. ಸ್ವಾತಂತ್ರೋತ್ತರ ಭಾರತದ ರಾಜಕೀಯದಿಂದ ಮಧ್ಯಮ ವರ್ಗದ ಜನತೆ ಸುಲಭವಾಗಿ ಪಾರಾಗುವಂತಿಲ್ಲ ಎನ್ನುವ ವಾಸ್ತವ ಚಿತ್ರಣ ನೀಡುವ ನಾಟಕ. ರಾಜಕೀಯದ ಸಹವಾಸವೇ ಬೇಡ ಎನ್ನುವವರಿಗೆ, ಅವರಿಗೆ ತಿಳಿಯದಂತೆ ಅವರನ್ನು ಆಕ್ರಮಿಸುವ ಮೂಲಕ ರಾಜಕೀಯದ ಸ್ವರೂಪವನ್ನು ನಾಟಕ ತೋರಿಸುತ್ತದೆ.
ಬೆಂಗಳೂರು ನಗರದಲ್ಲಿ ನೌಕರಿ ಮಾಡುತ್ತಿರುವ ಮಧ್ಯಮ ವರ್ಗದ ತರುಣ ದಂಪತಿಗಳು. ಕವಿ ಹೃದಯದ ಪ್ರಕಾಶ ಸರ್ಕಾರಿ ಕಾಲೇಜಿನಲ್ಲಿ ಉಪನ್ಯಾಸಕ. ಸರೋಜ ವಿಧಾನಸೌಧದಲ್ಲಿ ಗುಮಾಸ್ತೆ. ದಂಪತಿಗಳು ಸಂಜೆ ಹೊತ್ತು ಮನೆಯಲ್ಲಿ ಕವಿತೆಯ ನಾಯಕಿಯ ಕುರಿತು ಚರ್ಚೆ ನಡೆಸುತ್ತಾರೆ. ಹೊರಗಡೆ ಚುನಾವಣೆ ಘೋಷಣೆಗಳು ಕೇಳಿ ಬರುತ್ತವೆ.
ಪ್ರಕಾಶ ಮತ್ತು ಸರೋಜ ಈ ನಾಟಕದ ಮುಖ್ಯ ಪಾತ್ರಗಳಲ್ಲ. ಆದರೆ ನಾಟಕ ಆರಂಭಗೊಳ್ಳುವುದು ಇವರ ಮನೆಯಲ್ಲಿ. ವಿರೋಧ ಪಕ್ಷದ ಮುಖಂಡನಾಗಿರುವ ರುದ್ರಪ್ಪನ ಕೈಗೊಂಬೆಯಾಗಿ ಸಿದ್ದಲಿಂಗು ಎಂಬ ಯುವಕ, ಅದೇ ಪಕ್ಷದ ಜನಪ್ರಿಯ ನೇತಾರ ಶ್ರೀಕಾಂತಜಿಯನ್ನು ಕೊಲೆ ಮಾಡಿ ದಂಪತಿಗಳ ಮನೆಯಲ್ಲಿ ಆಶ್ರಯ ಪಡೆಯುತ್ತಾನೆ. ತಮ್ಮ ಅನುಪಸ್ಥಿತಿಯಲ್ಲಿ ತಮ್ಮ ಮನಯೇ ರುದ್ರಪ್ಪನ ಖಾಸಗಿ ಆಫೀಸಾಗಿರುವುದನ್ನು ದಂಪತಿಗಳು ತಿಳಿಯದೇ ಅವನ ರಾಜಕೀಯ ಚದುರಂಗದಾಟದಲ್ಲಿ ಸಿಲುಕಿ ಪರಸ್ಪರ ಮನಸ್ತಾಪಕ್ಕೊಳಗಾಗುತ್ತಾರೆ. ಅಜಾತ ಸ್ಥಳದಿಂದ ದಂಪತಿಗಳ ಮನೆಗೆ ಫೋನಾಯಿಸುವ ಸಿದ್ದಲಿಂಗು, ಅವರ ಮನೆಗೆ ಬಂದು ರುದ್ರಪ್ಪನು ಹೆಣೆದಿರುವ ರಾಜಕೀಯ ಕುತಂತ್ರಗಳನ್ನೆಲ್ಲ ಬಯಲು ಮಾಡುತ್ತಾನೆ. ತಾನೂ ಕೂಡ ರುದ್ರಪ್ಪನ ಕೈಗೊಂಬೆ ಎಂದು ಒಪ್ಪಿಕೊಂಡು ಶ್ರೀಕಾಂತಜಿಯನ್ನು ಕೊಲೆ ಮಾಡಿರುವುದಕ್ಕೆ ಸಮರ್ಥನೆ ನೀಡುತ್ತಾನೆ. ರುದ್ರಪ್ಪನಿಗೆ ಶ್ರೀಕಾಂತಜಿ ಶತ್ರುವಾದರೆ ನನಗೆ ಅವರಿಬ್ಬರೂ ಶತ್ರುಗಳೆಂದು ಹೇಳುತ್ತಾನೆ. ತನ್ನೆಲ್ಲ ಪೂರ್ವಾಪರವನ್ನೆಲ್ಲ ಬಿಡಿಸಿಡುವ ಸಿದ್ದಲಿಂಗು ದಂಪತಿಗಳು ಅಭಿಮಾನ ಪಡುವಂತೆ ಮಾತನಾಡುತ್ತಾನೆ. ಅಲ್ಲದೆ ನೀವಿಬ್ಬರೂ ನನ್ನ ವಿಚಾರಗಳನ್ನು ಮುಂದೆ ನಡೆಯಿಸಿಕೊಂಡು ಹೋಗುವ, ನನ್ನ ವಾರಸುದಾರರು ಎಂದು ಹೇಳುತ್ತಿರುವಾಗಲೇ ರುದ್ರಪ್ಪನ ಬಂಟರಿಂದ ಕೊಲೆಯಾಗುತ್ತಾನೆ.
ಸಾಹಿತ್ಯ, ಸಿನಿಮಾ, ರಂಗಭೂಮಿ, ಸಂಗೀತ, ಜಾನಪದ ವಿದ್ವಾಂಸರಾದ ಚಂದ್ರಶೇಖರ ಕಂಬಾರರು ಜನಿಸಿದ್ದು 1937 ಜನವರಿ 2 ರಂದು, ಬೆಳಗಾವಿ ಜಿಲ್ಲೆಯ ಘೋಡಗೇರಿಯಲ್ಲಿ. ಅವರ ವಿದ್ಯಾಬ್ಯಾಸ ಗೋಕಾಕ್, ಬೆಳಗಾವಿ ಮತ್ತು ಧಾರವಾಡದಲ್ಲಿ ನಡೆಯಿತು. ಗೋಕಾಕ ಮತ್ತು ಬೆಳಗಾವಿಯ ಬ್ರಿಟಿಷರ ಭಯದ ನೆರಳು ಆವರಿಸಿದ್ದ ಪರಿಸರದಿಂದ ಲೇಖಕನಾಗಿ ಮೈಪಡೆದ ಕಂಬಾರರ ಬಾಲ್ಯದ ಆತಂಕಗಳು ಅವರ ಕೃತಿಗಳಲ್ಲಿ ಮತ್ತೆ ಮತ್ತೆ ಕಾಣಿಸಿಕೊಳ್ಳುತ್ತವೆ. ಉನ್ನತ ಶಿಕ್ಷಣಕ್ಕಾಗಿ ಧಾರವಾಡಕ್ಕೆ ಬಂದು ಎಂ.ಎ ಮತ್ತು ಪಿ.ಎಚ್.ಡಿ ಪದವಿಗಳನ್ನು ಪಡೆದರು. ಅಮೆರಿಕಾದ ಚಿಕಾಗೋ ವಿಶ್ವವಿದ್ಯಾಲಯದಲ್ಲಿ (1968-69), ಬೆಂಗಳೂರು ವಿಶ್ವವಿದ್ಯಾಲಯದಲ್ಲಿ (1971-1991) ಅಧ್ಯಾಪಕರಾಗಿ, ಪ್ರವಾಚಕರಾಗಿ ಸೇವೆ ಸಲ್ಲಿಸಿದರು. ಹಂಪಿಯ ...
READ MORE