‘ಪ್ರಾಣೇಶ್ ಪ್ರಪಂಚ’ ಹೆಸರೇ ಸೂಚಿಸುವಂತೆ ಹಾಸ್ಯ ಕಲಾವಿದ ಗಂಗಾವತಿ ಪ್ರಾಣೇಶ್ ಅವರ ಪ್ರಬಂಧಗಳ ಸಂಕಲನ. ಹಾಸ್ಯ ಚಟಾಕಿಗಳನ್ನು ಸಿಡಿಸುತ್ತಾ ಕನ್ನಡದ ಮನೆ-ಮನಗಳಲ್ಲಿ ಹೆಸರುವಾಸಿಯಾಗಿರುವ ಗಂಗಾವತಿ ಪ್ರಾಣೇಶ್, ನಗಿಸುತ್ತಾ, ನಗುವಿನ ಮೂಲಕವೇ ಬದುಕಿನಲ್ಲಿ ಪಾಲಿಸಬೇಕಾದ ಆಚಾರ-ವಿಚಾರಗಳನ್ನು ಹೇಳಿ, ಅರಿವು ಮೂಡಿಸುವುದು ಅವರ ಕಾಳಜಿ.
ಪ್ರಾಣೇಶ್ ಅವರದ್ದು ಎರವಲು ಹಾಸ್ಯವಲ್ಲ. ನಮ್ಮ ನಡುವಿನ ಸಹಜ ಘಟನೆ- ಪ್ರಸಂಗಗಳಲ್ಲಿ ಅವರು ಹಾಸ್ಯವನ್ನು ಕಾಣುತ್ತಾರೆ. ಅದನ್ನು ಅಷ್ಟೇ ಸಹಜವಾಗಿ ಪ್ರಸ್ತುತಪಡಿಸುತ್ತಾರೆ. ನಗಿಸುವವನಿಗೆ ಆಂಗಿಕ ಭಾಷೆಯಷ್ಟೇ, ನುಡಿಗಟ್ಟು, ಸಹಜತೆ, ಪ್ರಾದೇಶಿಕತೆ ಹಾಗೂ ಸಮಯಪಾನೆ ಬಹಳ ಮುಖ್ಯ. ಪ್ರಾಣೇಶ್ ಈ ಎಲ್ಲ ಸಂಗತಿಗಳನ್ನು ಸಲೀಸಾಗಿ ಮೈಗೂಡಿಸಿಕೊಂಡಿದ್ದಾರೆ. ಎಂಥ ಪ್ರಸಂಗಕ್ಕೂ ಖಾಸಗಿತನ ಹಾಗೂ ವೈಯಕ್ತಿಕ ಸ್ಪರ್ಶವನ್ನು ಕೊಟ್ಟು ಆಪ್ತವಾಗಿಸುತ್ತಾರೆ. ಇಂಥ ಹಾಸ್ಯ ಕಲಾವಿದ ಅಂಕಣ ಬರೆದರೆ ಹೇಗಿರುತ್ತದೆ ಎಂಬುದನ್ನು ಈ ಕೃತಿಯ ಮೂಲಕ ಕಾಣಬಹುದು.
ಪ್ರಾಣೇಶ್ ಮೂಲತಃ ಕೊಪ್ಪಳ ಜಿಲ್ಲೆಯ ಗಂಗಾವತಿಯವರು. ಸೆಪ್ಟಂಬರ್ 8, 1961ರಲ್ಲಿ ಗಂಗಾವತಿಯಲ್ಲಿ ಜನಿಸಿದ ಪ್ರಾಣೇಶ್ ತಮ್ಮ ಪ್ರಾಥಮಿಕ ಶಿಕ್ಷಣವನ್ನು ಯಲಬುರ್ಗಿಯಲ್ಲೂ, ಬಿ.ಕಾಂ. ಪದವಿಯನ್ನು ಗಂಗಾವತಿಯಲ್ಲೂ ಪೂರೈಸಿದರು. ಪ್ರಾಣೇಶ್ ಅವರ ತಂದೆ ಸ್ವಾತಂತ್ರ್ಯ ಯೋಧ ಬಿ.ವೆಂಕೋಬಾಚಾರ್ಯರು, ಶಾಲಾ ಶಿಕ್ಷಕರಾಗಿದ್ದರು. ತಾಯಿ ಸತ್ಯವತಿ ಬಾಯಿ. ತಾಯಿಯಿಂದ ಸಾಹಿತ್ಯಾಭಿರುಚಿಯನ್ನು ಬೆಳೆಸಿಕೊಂಡವರು. ಹಾಸ್ಯಕ್ಕಷ್ಟೇ ಸೀಮಿತವಾದ ಪ್ರಾಣೇಶ್ ನಗಿಸುವವನ ನೋವುಗಳು, ನಗ್ತಾ ನಲಿ ಅಳ್ತಾ ಕಲಿ, ಪಂಚ್ ಪಕ್ವಾನ್ನ ಮುಂತಾದ ಪುಸ್ತಕಗಳನ್ನು ರಚಿಸಿದ್ದಾರೆ. ಜೊತೆಗೆ ಹಲವಾರು ಕ್ಯಾಸೆಟ್, ಸಿಡಿಗಳನ್ನೂ ಹೊರತಂದಿದ್ದಾರೆ. ಯೂ ಟ್ಯೂಬ್ ನಂತಹ ಅಂತರ್ಜಾಲ ಮಾಧ್ಯಮಗಳಲ್ಲಿ ಅವರ ಹಲವಾರು ಕಾರ್ಯಕ್ರಮಗಳ ತುಣುಕುಗಳು ನಿರಂತರವಾಗಿ ಜನಪ್ರೀತಿಯನ್ನು ಸಂಪಾದಿಸುತ್ತಿವೆ. ...
READ MORE