ಯಶವಂತ ಚಿತ್ತಾಲರ ಮೂರನೆಯ ಪ್ರಬಂಧ ಸಂಕಲನ ’ಅಂತಃಕರಣ’. ಈ ಸಂಕಲನದಲ್ಲಿ ಮೂರು ಭಾಗಗಳಿವೆ. 'ಸಭಾಂಗಣದಲ್ಲಿ’, 'ಓದುವ ಕೋಣೆಯಲ್ಲಿ' ಮತ್ತು 'ಅಂತರಂಗದ ಆಳದಲ್ಲಿ' ಎಂಬ ಭಾಗಗಳಲ್ಲಿ ಒಟ್ಟು ೧೮ ಲೇಖನಗಳಿವೆ.
ಮನುಷ್ಯ ಕಟ್ಟಿಕೊಂಡ ಬದುಕು ಹಾಗೂ ಅದನ್ನು ಅರಿಯುವುದಕ್ಕೆ ಸಾಹಿತ್ಯ ಸಹಕಾರಿ ಆಗುವ ಬಗೆಗೆ ಇಲ್ಲಿನ ಲೇಖನಗಳು ಚರ್ಚಿಸುತ್ತವೆ. ಚಿತ್ತಾಲರ ಹಿಂದಿನ ಪ್ರಬಂಧ ಸಂಕಲನಗಳಾದ 'ಸಾಹಿತ್ಯ, ಸೃಜನಶೀಲತೆ ಮತ್ತು ನಾನು' (1981) ಹಾಗೂ 'ಸಾಹಿತ್ಯದ ಸಪ್ತಧಾತುಗಳು' (2000) ಕೃತಿಗಳಲ್ಲಿನ ಚರ್ಚೆಯನ್ನು ಮುಂದುವರೆಸುತ್ತವೆ. ಹಾಗೂ ಕೆಲವು ಮುಖ್ಯ ವಾದಗಳನ್ನು ಸಮರ್ಥವಾಗಿ ಮಂಡಿಸುತ್ತವೆ.
ಕೃತಿಯ ಕುರಿತು ವಿಮರ್ಶಕ ಪುರುಷೋತ್ತಮ ಬಿಳಿಮಲೆ ಅವರು ’ಕಲಾಕೃತಿಯೊಂದರ ಅನನ್ಯತೆಯನ್ನು ಯಾವ ಕಾರಣಕ್ಕೂ ಬಿಟ್ಟುಕೊಡದ ಚಿತ್ತಾಲರು ಇಲ್ಲಿನ ಎಲ್ಲ ಲೇಖನಗಳಲ್ಲಿ ಮತ್ತೆ ಮತ್ತೆ ಅದರ ಬಗ್ಗೆ ಬರೆಯುತ್ತಾರೆ. ಒಂದು ಮಾಧ್ಯಮ ಇನ್ನೊಂದು ಮಾಧ್ಯಮಕ್ಕೆ ಸೇರಿದ ಕಾರ್ಯವನ್ನು ಕಸಿದುಕೊಳ್ಳುವುದಿಲ್ಲ. ಕಣ್ಣಿಗೆ ಸಾಧ್ಯವಿದ್ದದ್ದು ಮೂಗಿಗೂ ಹೇಗೆ ಸಾಧ್ಯವಾದೀತು, ಸಾಧ್ಯವಿದ್ದಿದ್ದರೆ ನಮಗೇಕೆ ಕಣ್ಣು ಇರುತ್ತಿತ್ತು? (ಪು. 15) ಎಂದು ಪ್ರಶ್ನಿಸುವ ಅವರು, ಭಾಷೆಯ ಮೂಲಕ ಸಾಹಿತ್ಯ ಕೃತಿಗಳಲ್ಲಿ ಈ ಅನನ್ಯತೆ. ಪ್ರತೀತಗೊಳ್ಳುವ ಪರಿಯನ್ನು ತಾಳ್ಮೆಯಿಂದ ವಿವರಿಸುತ್ತಾರೆ. ಹಾಗೆ ವಿವರಿಸುವಾಗ ಸಂಭವಿಸುವ ಈ ಚೋದ್ಯಕ್ಕೆ ತನಗೇ ತಾನೇ ಚಕಿತಗೊಳ್ಳುತ್ತಾರೆ, ಸಂಭ್ರಮಿಸುತ್ತಾರೆ ಮತ್ತು ಕುತೂಹಲಿಯಾಗುತ್ತಾರೆ’ ಎಂದು ವಿಶ್ಲೇಷಿಸಿದ್ದಾರೆ.
ತಮ್ಮ ಸಣ್ಣಕತೆಗಳ ಮೂಲಕ ಆಧುನಿಕ ಕನ್ನಡ ಕಥಾಸಾಹಿತ್ಯದ ಮೇರೆಗಳನ್ನು ವಿಸ್ತರಿಸಿದವರು ಯಶವಂತ ಚಿತ್ತಾಲ. ಅವರೊಬ್ಬ ಮಹತ್ವದ ಲೇಖಕ. ನವ್ಯ ಸಾಹಿತ್ಯದ ಪ್ರಮುಖ ಕತೆಗಾರ ಚಿತ್ತಾಲರು ಕತೆ ಹೇಳುವುದರಲ್ಲಿ ಸಿದ್ಧಹಸ್ತರು. ಕತೆಗಳ ಮೂಲಕ ಬರವಣಿಗೆ ಆರಂಭಿಸಿದ ಯಶವಂತರ ಮೊದಲ ಕತೆ 'ಬೊಮ್ಮಿಯ ಹುಲ್ಲು ಹೊರೆ'. ಅವರ ಮೊದಲ ಕತೆಯನ್ನು ಕನ್ನಡದ ಮಹತ್ವದ ಕತೆಗಳಲ್ಲಿ ಒಂದು ಗುರುತಿಸಲಾಗುತ್ತದೆ. ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲ್ಲೂಕಿನ ಹನೇಹಳ್ಳಿಯವರಾದ ಯಶವಂತ ಅವರು 1928ರ ಆಗಸ್ಟ್ 3ರಂದು ಜನಿಸಿದರು. ತಂದೆ ವಿಠೋಬ, ತಾಯಿ ರುಕ್ಕಿಣಿ. ಖ್ಯಾತ ಕವಿ ಗಂಗಾಧರ ಚಿತ್ತಾಲರು ಅವರ ಹಿರಿಯ ಸಹೋದರ. ಹನೇಹಳ್ಳಿ, ಕುಮಟೆ, ಧಾರವಾಡ, ಮುಂಬಯಿಗಳಲ್ಲಿ ...
READ MORE