ಲೇಖಕ ಶ್ರೀನಿವಾಸ ಹಾವನೂರರ ಪ್ರಬಂಧಗಳ ಸಂಕಲನ ‘ಒಂದಿಷ್ಟು ಲಘು; ಒಂದಷ್ಟು ಗಂಭೀರ’. ಈ ಕೃತಿಯಲ್ಲಿ ಈತ ಶ್ರೀಸತ್ಯನಾರಾಯಣ, ವಿಷ್ಣುವಿನ ಅವತಾರಗಳು ಹತ್ತು ಮಾತ್ರವೇ, ನೆಂಟಸ್ತಿಕೆ, ಒಕ್ಕಲಗಿತ್ತಿ, ಹೆಸರು, ಅಡ್ಡ ಹೆಸರು, ಅಡ್ನಾಡಿ ಹೆಸರುಗಳು, ಹೆಸರನ್ನೇ ಮರೆತಾಗ, ನಿಂದೆ, ಟೀಕೆ, ವಿಮರ್ಶೆ ಮುಂತಾದ್ದು, ಮನಃ ಶಾಂತಿಯ ಸಪ್ತ ಸೂತ್ರಗಳು, ನನ್ನಷ್ಟಕ್ಕೆ ನಾನು, ಮರಣ ಸಂಭ್ರಮ, ಹಾಲಿನ ಮೇಲಿನ ಕೆನೆ, ವಿದೇಶಗಳಲ್ಲಿ ನಾ ಕಂಡ ನಾರಿಯರು, ಪುಣೆ ಹಾಗೂ ಪುಣೇರಿ, ವಿಮಾನದಲ್ಲಿ ಜಲಬಾಧೆ, ಈ ಮರಾಠೀ ಮಹಿಳೆ, ಸನ್ಯಾಸ ಮತ್ತು ಸಂಸಾರ, ದೊಡ್ಡ ದೊಡ್ಡೋರ ಜಗಳ ಹಾಗೂ ಹೀಗಿದ್ದಾರೆ ಈ ಭೈರಪ್ಪನವರು ಎಂಬ 18 ಲೇಖನಗಳು ಸಂಕಲನಗೊಂಡಿವೆ.
ಕನ್ನಡ ಸಾಹಿತ್ಯಸಂಶೋಧನೆ ಮಾಡಲು ಮೊತ್ತಮೊದಲು ಕಂಪ್ಯೂಟರ್ ಬಳಸಿದವರು ಡಾ. ಶ್ರೀನಿವಾಸ ಹಾವನೂರರು (1928-2010). ಕನ್ನಡ ಸಾಹಿತ್ಯಕ್ಕೆ ಅವರ ಕೊಡುಗೆ ಅಪಾರವಾದುದು, ವೈವಿಧ್ಯಮಯವಾದುದು. ಸಣ್ಣ ಕಥೆ, ಲಲಿತ ಪ್ರಬಂಧ, ಜೀವನ ಚರಿತ್ರೆ, ಸಾಹಿತ್ಯ, ಸಂಸ್ಕೃತಿ, ಇತಿಹಾಸ ವಿಮರ್ಶೆ ಮೊದಲಾದ ಪ್ರಕಾರಗಳಲ್ಲಿ 60ಕ್ಕೂ ಮಿಕ್ಕಿ ಕೃತಿಗಳನ್ನು ಹೊರತಂದರು. ವಿದೇಶದಲ್ಲಿದ್ದ ಕನ್ನಡ ಸಾಹಿತ್ಯವನ್ನು ಮರಳಿ ತಾಯ್ನಾಡಿಗೆ ಕರೆತಂದರು. ಹೊಸಗನ್ನಡ ಅರುಣೋದಯದ ಸಾಹಿತ್ಯವನ್ನು ಮತ್ತೆ ತೆರೆದು ತೋರಿಸಿದರು, ಹಿಂದೆ ಮುಂಬಯಿಯ ಟಾಟಾ ಮೂಲಭೂತ ವಿಜ್ಞಾನ ಸಂಸ್ಥೆಯ ಗ್ರಂಥಪಾಲಕರಾಗಿದ್ದರು. ಮುಂದೆ ಮಂಗಳೂರು ಮತ್ತು ಮುಂಬಯಿ ವಿ.ವಿ.ಯ ಕನ್ನಡ ಅಧ್ಯಯನ ಸಂಸ್ಥೆಯ ಮುಖ್ಯಸ್ಥರಾದರು. ಆಮೇಲೆ ಪುಣೆಯಲ್ಲಿ ಮರಾಠಿ ಕನ್ನಡ ಸ್ನೇಹ ಸಂವರ್ಧನೆಯಲ್ಲಿ ಪಾತ್ರವಹಿಸಿದರು.. ಕೊನೆಗೆ ಕರ್ನಾಟಕ ಸರಕಾರದ ಸಮಗ್ರ ದಾಸ ಸಾಹಿತ್ಯ ಸಂಪಾದಕರಾಗಿ ೫೦ ಸಂಪುಟಗಳ ಪ್ರಕಟಣೆಯ ನೇತೃತ್ವ ವಹಿಸಿದರು. ಕನ್ನಡದ ನಾಡೋಜರೆಂದು ಹೆಸರಾದರು. ...
READ MORE