‘ಆಳ ನೀಳ’ ಸಂತೋಷ್ ಅನಂತಪುರ ಅವರ ಪ್ರಬಂಧ ಸಂಕಲನವಾಗಿದೆ. ಕೃತಿ ಕುರಿತು ಎಸ್. ದಿವಾಕರ್ ಅವರು ಹೀಗೆ ಹೇಳುತ್ತಾರೆ; ಸೂಕ್ಷ್ಮವಾಗಿ ಓದಿದಾಗ ಇಲ್ಲಿನ ಕೆಲವು ಪ್ರಬಂಧಗಳು ವ್ಯಕ್ತಿತ್ವವಿಕಸನಕ್ಕಿಂತ ಮಿಗಿಲಾಗಿ ಸಾಮಾನ್ಯಜ್ಞಾನದ ಪ್ರಾಮುಖ್ಯತೆಯನ್ನು ಪ್ರತಿಪಾದಿಸುವಂತಿವೆ. ಸಾಮಾನ್ಯಜ್ಞಾನ ಎಂದರೇನು? ಕೆ. ವಿ. ಅಕ್ಷರ ಒಂದೆಡೆ ಬರೆದಿರುವಂತೆ “ಸಾಮಾನ್ಯಜ್ಞಾನ ಕಾಮನ್ಸೆನ್ಸ್ - ಎಂಬುದು ಪ್ರಚ್ಛನ್ನ ರೂಪದಲ್ಲಿ ಅಡಗಿ ಕುಳಿತಿರುವ ಒಂದು ನಿರ್ದಿಷ್ಟ 'ಸಿದ್ಧಾಂತ'; ಅದೇನೂ ಸಾರ್ವಕಾಲಿಕ ಸರ್ವಗ್ರಾಹ್ಯ ಸತ್ಯವಲ್ಲ. ಹಲವೊಮ್ಮೆ ಅದು ಸವಕಳಿಯಾಗಿರುವ ಒಂದು ಹಳೆಯ ಸಿದ್ಧಾಂತದ ಪಳೆಯುಳಿಕೆಯಾಗಿ ನಮ್ಮ ಮನಸ್ಸಿನಲ್ಲಿ ಉಳಿದಿರುವ ಒಂದು ಅವಶೇಷ; ಮತ್ತು ಅದು ಎಲ್ಲವನ್ನೂ ಹೊಸತಾಗಿ ಪ್ರಶ್ನಿಸಿ ಚರ್ಚಿಸಲು ಬಯಸದಿರುವ ನಮ್ಮ ಬೌದ್ಧಿಕ ಸೋಮಾರಿತನಕ್ಕೆ ಕೂಡಾ ಒಂದು ನೆಪ. ಇನ್ನು ಇಲ್ಲಿನ ‘ಬೆಳಕ ದಾಟಿಸುವ ಹಣತೆಯೂ.. ಒಳ್ಳೆಯವರಾಗುವ ವ್ಯಸನವೂ....' ಎಂಬ ಪ್ರಬಂಧದ ವಿಶೇಷವೆಂದರೆ ಅದು ಒತ್ತಿ ಹೇಳುವ ಆತ್ಮಜ್ಞಾನದ ಮಹತ್ವ “ಕಾಲವೇ ನಮ್ಮನ್ನು ಬಂಧಿಯಾಗಿಸುತ್ತದೆನ್ನುವ ವಿವೇಕವೂ ಇಲ್ಲದೆ ಬೇರೆಯವರು ನಮ್ಮ ಬಗ್ಗೆ ಏನು ಯೋಚಿಸುತ್ತಾರೆ ಎಂದು ಚಿಂತಿಸುವುದರಲ್ಲೇ ಹೆಚ್ಚಿನ ಕಾಲವನ್ನು ಕಳೆಯುತ್ತೇವೆ. ಇನ್ನೊಬ್ಬರ ಯೋಚನೆಯೊಳಗೆ ನಾವು ಹೇಗಿರಬೇಕು ಎನ್ನುವುದರೊಳಗೇ ನಾವು ನಾವಾಗಿ ಹೇಗಿರಬೇಕೆನ್ನುವ ವಿಚಾರವೇ ಮಾಸಿ ಹೋಗಿರುತ್ತದೆ.” ಈ ಪ್ರಬಂಧವನ್ನು ಓದುತ್ತಿರುವಾಗ ನನಗೆ ಗೋಪಾಲಕೃಷ್ಣ ಅಡಿಗರ 'ಒಳ್ಳೆತನ ಸಹಜವೇನಲ್ಲ' ಎಂಬ ಕವನ ನೆನಪಾದದ್ದು ಆಕಸ್ಮಿಕವಾಗಿರಲಾರದು. ಒಳ್ಳೆತನವೆನ್ನುವುದು ಕೂಡ ಆತ್ಮಜ್ಞಾನಕ್ಕೆ ಎರವಾಗಿ ಇನ್ನೊಬ್ಬರ ಮೆಚ್ಚುಗೆಯನ್ನು ಗಳಿಸುವ ಉದ್ದೇಶವುಳ್ಳ ಆತ್ಮವಂಚನೆಯಾಗಿರಬಾರದೇಕೆ? ಇಲ್ಲಿನ ಒಂದೊಂದು ಪ್ರಬಂಧದಲ್ಲೂ ಓದುಗರನ್ನು ತಡೆದು ನಿಲ್ಲಿಸಿ, ಅವರು ಕ್ಷಣ ಕಾಲ ಯೋಚಿಸುವಂತೆ ಮಾಡಬಲ್ಲ ವಾಕ್ಯವೃಂದಗಳಿವೆ. ಉದಾಹರಣೆಗೆ, “ಜೀವ ಪ್ರೀತಿಸುವ ಕಲೆಗಳೊಳಗೆ ಮಾತ್ರ ಮುಗ್ಧತೆಯನ್ನು ತುಂಬಿಸಿ ಇಟ್ಟಿದ್ದಾರೇನೋ ಎಂದು ಸ್ಪರ್ಶ ಸಂವೇದನೆಯನ್ನು ಕಳಕೊಂಡ ಜೀವಗಳನ್ನು ಕಂಡಾಗ ಅನಿಸುವುದಿದೆ.
ಲೇಖಕ ಸಂತೋಷ್ ಅನಂತಪುರ ಅವರು ಮೂಲತಃ ಕೇರಳದ ಕಾಸರಗೋಡು ಜಿಲ್ಲೆಯ ಅನಂತಪುರದವರು. ಕೇರಳ ರಾಜ್ಯದಲ್ಲೇ ಪದವಿಪೂರ್ವ ಶಿಕ್ಷಣ ಪೂರೈಸಿ, ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನಲ್ಲಿ ಪತ್ರಿಕೋದ್ಯಮ ಪದವಿ ಹಾಗೂ ಮಂಗಳೂರು ವಿ.ವಿ.ಯಿಂದ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ವಿದ್ಯಾ ಸಂಸ್ಥೆ ಹಾಗೂ ಕಾರ್ಪೋರೇಟ್ ಸಂಸ್ಥೆಗಳಲ್ಲಿ ಕೆಲಸ ಮಾಡಿದ ಅನುಭವ ಅವರಿಗಿದೆ. ಸದ್ಯ, ಬೆಂಗಳೂರಿನಲ್ಲಿ ಇನ್ಫೋಸಿಸ್ ಸಂಸ್ಥೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಕಥೆ-ಕವನ - ಲೇಖನಗಳು ಸೇರಿದಂತೆ ವಿವಿಧ ಸಾಹಿತ್ಯ ಪ್ರಕಾರಗಳು ಸಾಮಾಜಿಕ ಜಾಲತಾಣ ಹಾಗೂ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಜಿಡ್ಡು ಕೃಷ್ಣಮೂರ್ತಿ ಅವರ ಒಂದು ಆಂಗ್ಲ ಕೃತಿ ಹಾಗೂ ಲೇಖನಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಕೃತಿಗಳು: ಕಾಗೆ ...
READ MORE