ಲೇಖಕಿ ಶೋಭಾ ರಾವ್ ಅವರ ಪ್ರಬಂಧ ಮಾಲೆ ಕೃತಿ ʻಹನಿಕಡಿಯದ ಮಳೆʼ. ಪುಸ್ತಕವು ಮಲೆನಾಡಿನ ಮಳೆ, ಅಲ್ಲಿನ ಜನ ಜೀವನ, ಪ್ರಕೃತಿ ವೈಭೋಗಗಳನ್ನು ಕಣ್ಣಿಗೆ ಕಟ್ಟುವಂತೆ ಕೊಡುತ್ತದೆ. ಪುಸ್ತಕದ ಮುನ್ನುಡಿಯಲ್ಲಿ ಲೇಖಕಿ ಮಾಲಿನಿ ಗುರುಪ್ರಸನ್ನ ಅವರು, “ಈಗಿರುವ ಊರು ಎಷ್ಟೇ ಆಧುನಿಕವಿದ್ದರೂ ಅವಳದಾಗಲಾರದು, ಯಾವುದು ಸ್ವಂತವಲ್ಲವೋ ಅದು ಎಷ್ಟೇ ಸುಖ ಕೊಟ್ಟರೂ ಹಿತ ತರುವುದಿಲ್ಲ. ಎಂತಹಾ ದುಬಾರಿ ಹಾಸಿಗೆಯ ಮೇಲೆ ಮಲಗಿದರೂ ಮೇಲೆ ಹಾಸಿದ ಅಜ್ಜಿಯ ಹಳೆಯ ಹತ್ತಿ ಸೀರೆಯ ಬಿಸುಪೆ ಹಿತವಾಗುವಂತೆ. ಒಂದೂವರೆ ಕಿಲೋಮೀಟರು ದೂರ ನಡೆದು ಕೊಡ ಹೊತ್ತು ಬರುವುದು ನಮಗೆ ಬವಣೆ, ಅವಳಿಗದು ಬದುಕು. ಅವಳು ಅಲ್ಲಿ ಮುಂದೆ ನೆಲೆಸುತ್ತಾಳೋ ಇಲ್ಲವೋ, ಆ ಕನಸನ್ನು ಮಾತ್ರ ಬದುಕಿಡೀ ಮಡಿಲಲ್ಲಿಟ್ಟುಕೊಂಡು ಮುದ್ದು ಮಾಡುತ್ತಿರುತ್ತಾಳೆ. ಶೋಭಾ ಬರೆದ ಹನಿ ಕಡಿಯದ ಮಳೆ ಓದುತ್ತಿದ್ದಾಗ ಆ ಹುಡುಗಿ ಥಟ್ಟನೆ ಮತ್ತೆ ನೆನಪಾದಳು. ಪುಸ್ತಕವನ್ನು ಓದುತ್ತಿರುವಷ್ಟೂ ಹೊತ್ತೂ ಆ ಹುಡುಗಿ ಶೋಭಾ ರೂಪದಲ್ಲಿಯೂ , ಶೋಭಾ ಆ ಹುಡುಗಿಯಾಗಿಯೂ ಕಾಣಿಸಿಕೊಳ್ಳುತ್ತಲೇ ಇದ್ದರು. ಮುಳುಗಡೆ ಎಂಬುದು ಮಲೆನಾಡಿಗೆ ಒಂದು ದೊಡ್ಡ ಶಾಪ. ತನ್ನ ಬುಡವನ್ನು ನೀರೊಳಗೆ ಮುಳುಗಿಸಿಕೊಂಡು ಹೊರಜಗತ್ತನ್ನು ಬೆಳಗಿಸಬೇಕಾದ ಅನಿವಾರ್ಯ ಹಣೆಬರಹ . ಅಲ್ಲಿ ಮುಳುಗುವುದು ಕೇವಲ ಮನೆಗಳಲ್ಲ, ಜೀವಂತಿಕೆ. ಆಲದ ಮರದ ಮೇಲಿದ್ದ ಬ್ರಹ್ಮರಾಕ್ಷಸನನ್ನೂ ಬಿಡದ ಮುಳುಗಡೆಯ ಚಿತ್ರಣವನ್ನು ಶೋಭಾ ಇಲ್ಲಿ ಕಟ್ಟಿಕೊಟ್ಟಿರುವ ರೀತಿ ಕಣ್ಣು ಮಂಜಾಗಿಸುವಂತಿದೆ” ಎಂದು ಹೇಳಿದ್ದಾರೆ.
ಶೋಭಾ ರಾವ್ ಮಲೆನಾಡಿನ ತೀರ್ಥಹಳ್ಳಿಯವರು. ಚಿಕ್ಕಂದಿನಿಂದ ಓದುವ, ಬರೆಯುವ ಹವ್ಯಾಸ. ಕನ್ನಡದ ಹಲವಾರು ಪತ್ರಿಕೆಗಳಿಗೆ ಅಂಕಣಗಳನ್ನು ಬರೆದಿದ್ದಾರೆ. ಅಂಕಣಗಳ ಮೂಲಕ ಶುರುವಾದ ಪಯಣ ಕಾದಂಬರಿಯವರೆಗೆ ಬಂದು ನಿಂತಿದೆ. ಈವರೆಗೆ ಎರಡು ಚಾರಿತ್ರಿಕ ಕಾದಂಬರಿ ಹಾಗೂ ಎರಡು ಪ್ರಬಂಧ ಸಂಕಲನಗಳು ಪ್ರಕಟವಾಗಿವೆ. ಕೃತಿಗಳು: ಮಹಾ ಮಾರಣಹೋಮ!, ಧೃತಿಗೆಡದ ಹೆಜ್ಜೆಗಳು, ಕ್ಷತ್ರಿಯ ಕುಲಾವತಂಸ, ಹನಿ ಕಡಿಯದ ಮಳೆ. ...
READ MORE