ಸುನಂದಾ ಬೆಳಗಾಂವಕರ ಅವರ ಪ್ರಬಂಧ ಸಂಕಲನ ಕೈತುತ್ತು. ಮಾನವ ಜನ್ಮಕ್ಕೆ ಬಂದ ಮೇಲೆ ನಾವು ಅನೇಕ ಋಣಗಳಿಂದ ಬಂಧಿತರಾಗಿರುತ್ತೇವೆ. ಮಾತೃ ಋಣ, ಪಿತೃ ಋಣ, ಅನ್ನದ ಋಣ, ಆಚಾರ್ಯ ಋಣ..ಭೂಮಿ ಋಣ ಹೀಗೆ ನಮ್ಮ ಶರೀರ ಮನಸ್ಸುಗಳು ಇಂಥ ಋಣಗಳ ಭಾರವನ್ನು ಸದಾ ಹೊತ್ತು ತಿರುಗುತ್ತವೆ. ಇವುಗಳನ್ನು ಸುಲಭವಾಗಿ ಕಳಚಿಕೊಳ್ಳುವುದು ಸಾಧ್ಯವೇ? ಇಲ್ಲ. ಎಷ್ಟೋ ಬಾರಿ ಇವುಗಳಿಂದ ಮುಕ್ತಿ ಪಡೆಯುವ ಹಂಬಲ ನಮ್ಮನ್ನು ಕಾಡುತ್ತಲೇ ಇರುತ್ತದೆ.ಇಂಥ ಋಣಸಂದಾಯದ ಅಗತ್ಯತೆಯ ಅನನ್ಯ ಸ್ವರೂಪ ಚಿತ್ರಣವನ್ನು ಹೊತ್ತು ತಂದು ನಮಗೆಲ್ಲ ಕೈತುತ್ತು ಎಂಬ ಪ್ರಬಂಧಸಂಕಲನದ ಅತಿ ಸುಂದರ ಬರಹಗಳಲ್ಲಿ ಉಣಬಡಿಸಿದ್ದಾರೆ ನಮ್ಮ ಮೆಚ್ಚಿನ ಸಾಹಿತಿ ಸುನಂದಾ ಬೆಳಗಾಂವಕರ್.
ಇಪ್ಪತ್ತನೆ ಶತಮಾನದ ಪೂರ್ವಾರ್ಧದ ಸಮಕಾಲೀನ ಲೇಖಕಿಯರಲ್ಲಿ ಒಂದು ಗಣನೀಯ ಹೆಸರೆಂದರೆ ಸುನಂದಾ ಬೆಳಗಾಂವಕರ. ಧಾರವಾಡದ ಮಹಿಷಿ ಕುಟುಂಬದವರು. ವಿವಾಹದ ನಂತರ ಆಫ್ರಿಕಾ ಖಂಡದ ಝಾಂಬಿಯ ದೇಶದಲ್ಲಿ ತಮ್ಮ ಪತಿಯೊಡನೆ ಮೂವತ್ತು ವರ್ಷ ಕಳೆದು, ಬಳಿಕ ಭಾರತಕ್ಕೆ ಹಿಂತಿರುಗಿದರು. ಸುನಂದಾ ಬೆಳಗಾವಕರರವರು ಬರೆದ ‘ಕಜ್ಜಾಯ(ಪ್ರಬಂಧ)’ ಸುಧಾ ವಾರಪತ್ರಿಕೆಯಲ್ಲಿ ಧಾರಾವಾಹಿಯಾಗಿ ಪ್ರಕಟವಾಗಿ ಅಪಾರ ಜನಪ್ರಿಯತೆಯನ್ನು ತಂದುಕೊಟ್ಟಿತು. ಇದಲ್ಲದೆ ಅವರು ‘ಶಾಲ್ಮಲಿ’ ಎನ್ನುವ ಕಾವ್ಯಸಂಕಲನ, ‘ನಾಸು’, ‘ಝವೇರಿ’ ಎನ್ನುವ ಕಾದಂಬರಿಗಳನ್ನು ಬರೆದಿದ್ದಾರೆ. ಸುನಂದಾ ಬೆಳಗಾಂವಕರ ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಅವರ ‘ನಾಸು’ ಕಾದಂಬರಿಗೆ 1990 ರಲ್ಲಿಕರ್ನಾಟಕ ವಿದ್ಯಾವರ್ಧಕ ಸಂಘದ ರತ್ನಮ್ಮ ಹೆಗ್ಗಡೆ ಪ್ರಥಮ ಬಹುಮಾನ ಲಭಿಸಿದೆ. 2017ರಲ್ಲಿ ನಿಧನ ಹೊಂದಿದರು. ...
READ MORE