ಸೌಹಾರ್ದ ಕರ್ನಾಟಕ (ಸಂಪುಟ - 1) ಚಂದ್ರಕಾಂತ ವಡ್ಡು ಅವರ ಸಂಪಾದಿತ ಕೃತಿಯಾಗಿದೆ. "ಸಮಾಜದ ಪ್ರಚಲಿತ ಕೋಮು ತಿಕ್ಕಾಟದ ವಿದ್ಯಮಾನಗಳು ಈ ನೆಲದಲ್ಲಿ ಸಮುದಾಯಗಳ ನಡುವೆ ನೆಲೆಯೂರಿದ್ದ ಸಾಮರಸ್ಯದ ಬದುಕನ್ನು ಅಣಕಿಸುವಂತಿವೆ. ಇಂತಹ ಸಂದರ್ಭ, ಸಂಘರ್ಷಗಳ ಬಿಸಿಯಲ್ಲಿ ವೃತ್ತಿ ರಾಜಕಾರಣಿಗಳು ಮೈಕಾಯಿಸಿಕೊಳ್ಳುವುದನ್ನು ಅರ್ಥ ಮಾಡಿಕೊಳ್ಳಬಹುದು. ಎಲ್ಲಾ ಧರ್ಮಗಳಲ್ಲಿರುವ ಸಣ್ಣ ಸಂಖ್ಯೆಯ ಮತಾಂಧರ ಕುಬ್ಜತನ, ಅಂತಹ ಮನೋಧರ್ಮ ಪ್ರತಿನಿಧಿಸುವ ಸಂಘಟನೆಗಳ ಆರ್ಭಟ, ಕಿಡಿಗೇಡಿಗಳ ಆಟಾಟೋಪ ಹೊಸದೇನಲ್ಲ. ನನ್ನ ಮಸ್ತಕದಲ್ಲಿ ಈ ಪುಸ್ತಕದ ಸ್ವರೂಪ ಹರಳುಗಟ್ಟುವ ಸಮಯದಲ್ಲೇ ‘ಸೌಹಾರ್ದ ಕರ್ನಾಟಕ’ ಶೀರ್ಷಿಕೆ ಹೊಳೆದು, ಲೇಖನಗಳಿಗೆ ಆಹ್ವಾನ ಹೋಗಿ, ಸಾಮರಸ್ಯ ಬದುಕಿನ ಬರಹಗಳು ಒಂದೇ ಸಮನೆ ಹರಿದುಬರತೊಡಗಿದಾಗ ಸಂಭ್ರಮದ ಜೊತೆಗೆ ಗೊಂದಲವೂ ಹುಟ್ಟಿತು. ಇಮೇಲು ಪೆಟ್ಟಿಗೆ ತುಂಬಿ ತುಳುಕುವಷ್ಟು ಸಂಖ್ಯೆಯ ಲೇಖನಗಳಲ್ಲಿ ಯಾವುದನ್ನು ಆಯುವುದು ಯಾವುದನ್ನು ಬಿಡುವುದು ಎಂಬ ಸವಾಲು ಬೇರೆ. ಈ ಮಧ್ಯೆ ‘ಸೌಹಾರ್ದ ಕರ್ನಾಟಕ’ದ ಮಹತ್ವವನ್ನು ತಡವಾಗಿ ಅರಿತ ಅನೇಕರು, ‘ಈಗ ಲೇಖನ ಕಳಿಸಬಹುದೇ...?’ ಎಂದು ಆಸಕ್ತಿ ತೋರುತ್ತಲೇ ಇದ್ದರು. ಅಂತಹವರಿಗೆ ತಮಾಷೆಯಾಗಿ ‘ದೇವರ ಮೇಲೆ ಭಾರ ಹಾಕಿ ಕಳಿಸಿ, ನೋಡೋಣ’ ಎಂದೆ. ಯಾವ ದೇವರು ಎಷ್ಟು ಭಾರ ಹೊತ್ತುಕೊಂಡನೋ ಗೊತ್ತಿಲ್ಲ! ಕೊನೆಗೆ ಯಾವ ಅರ್ಹ ಲೇಖನಕ್ಕೂ ಅವಕಾಶ ತಪ್ಪದಿರಲಿ ಎಂಬ ಕಾರಣಕ್ಕೆ ಸಂಕಲನದ ಎರಡು ಸಂಪುಟಗಳು ಹೊರಬರುತ್ತಿವೆ. ಸೌಹಾರ್ದ ಬದುಕಿನ ಅಸ್ತಿತ್ವವನ್ನು ನೆನಪಿಸುವ, ಗುರುತಿಸುವ, ಗಟ್ಟಿಗೊಳಿಸುವ, ಮನನ ಮಾಡಿಕೊಳ್ಳುವ, ದಿಟ್ಟದನಿಯಲ್ಲಿ ಸಾರುವ 48 ಲೇಖಕರ ಅನುಭವಗಳ ಗುಚ್ಛವಿದು ಎಂದು" ಸಂಪಾದಕ ಚಂದ್ರಕಾಂತ ವಡ್ಡು ಹೇಳಿದ್ದಾರೆ.
ಚಂದ್ರಕಾಂತ ವಡ್ಡು ಅವರು ಮೂಲತಃ ತೋರಣಗಲ್ಲು ಬಳಿಯ ವಡ್ಡು ಗ್ರಾಮದವರು. ಹಿರಿಯ ಪತ್ರಕರ್ತರು. ಸಮಾಜಮುಖಿ ಎಂಬ ಮ್ಯಾಗ್ಝಿನ್ ಸಂಪಾದಕರು. ಕೃತಿಗಳು: ಅಮ್ಮನ ನೆನಪು- ಭಾಗ-1 ಹಾಗೂ ಅಮ್ಮನ ನೆನಪು-ಭಾಗ-2, ಅಂತಃಕರಣದ ಗಣಿ, ನಾರಿಹಳ್ಳದ ದಂಡೆಯಲ್ಲಿ, ಸೌಹಾರ್ದ ಕರ್ನಾಟಕ, ಮುಝಫರ್ ಮತ್ತಿತರ ಇಪ್ಪತ್ತು ಕಥೆಗಳು, ಸಮಕಾಲೀನ ...
READ MORE