ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ. ಕೆ. ಶಿವರಾಮ ಕಾರಂತರ ಕೃತಿ-ಮೈಲಿಕಲ್ಲಿನೊಡನೆ ಮಾತುಕತೆ. ಇದು ಹರಟೆಗಳ ಸಂಕಲನ. ಒಂದು ಅರ್ಥದಲ್ಲಿ ಇವು ಲಘುಪ್ರಬಂಧಗಳು. ಒಟ್ಟು 13 ಲಲಿತ ಪ್ರಬಂಧಗಳಿವೆ. ಸ್ವದೇಶಾಭಿಮಾನಿ, ಜಯಂತಿ ಹಾಗೂ ಅಂತರಂಗ ಇತರೆ ಪತ್ರಿಕೆಗಳಲ್ಲೂ ಇವು ಪ್ರಕಟವಾಗಿವೆ. ಜನತೆಯ ಸಂಸ್ಕೃತಿಯನ್ನು ಲೇಖಕರು ಮೈಲಿಕಲ್ಲುಗಳು ಎಂದು ಅರ್ಥೈಸಿದ್ದಾರೆ. ಇವುಗಳ ಆಥ್ವನ್ನು ಕೆಣಕುವ ಮೂಲಕವೇ ಅರ್ಥ ಮಾಡಿಸುವುದು ಈ ಬರಹಗಳ ಉದ್ದೇಶ.
ನಮ್ಮೂರ ಕೆರೆ, ಮಾಜಿ ಮೈಲಿಕಲ್ಲು, ಕೋಳಿ-ತತ್ತಿ, ಮಿ. ದುಸ್ತುಬಿನ್, ಕಡವಿನ ದೋಣಿ, ಎಂ.ಟಿ. 309571 ಅಥವಾ ಆಶಾಪತ್ರ, ಪರಿತ್ಯಕ್ತ ದೀಪಸ್ತಂಭ, ಅಂಬಲದ ನೆನಪುಗಳು, ಗುಡಿಯಿಲ್ಲದ ಮಹಾಲಿಂಗ, ಕಲ್ಕುಡನ ಗುಹೆ, ಹಿನ್ನಡೆದ ಬಾವುಟ, ಸುಡುಗಾಡು ಸಿದ್ಧ, ಅಶ್ವತ್ಥ ಪ್ರಲಾಪ ಹೀಗೆ ಲಘು ಪ್ರಬಂಧಗಳಿವೆ. ,
ಈ ಕೃತಿಯಲ್ಲಿ ಕಾರಂತರ ವ್ಯಕ್ತಿತ್ವದ ಮತ್ತೊಂದು ಮುಖವನ್ನು ಗುರುತಿಸಬಹುದು. ದೇವರು ಧರ್ಮಶಾಸ್ತ್ರಗಳು ಇವನ್ನು ಕಾರಂತರು ನಂಬುವುದಿಲ್ಲ. ಆದರೆ, ಪರಂಪರೆಯ ಜ್ಞಾನವನ್ನು ತಿರಸ್ಕರಿಸುವುದಿಲ್ಲ. ಪರಂಪರಾಗತ ಮೌಲ್ಯಗಳನ್ನು ಒಪ್ಪಿಕೊಳ್ಳುತ್ತಾರೆ. ಅದರಲ್ಲಿಯ ಹುಳುಕುಗಳ ಬಗ್ಗೆಯೂ ಮಾತನಾಡುತ್ತಾರೆ. ಸಂಕಟಗಳ ಮಧ್ಯೆಯೂ ಬದುಕುವ ಸ್ಥೈರ್ಯ ತೋರುತ್ತಾರೆ. ಇಂತಹ ಮುಖಗಳ ಪರಿಚಯವನ್ನು ಈ ಕೃತಿಯಲ್ಲಿ ಗುರುತಿಸಬಹುದು.
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ಶಿವರಾಮ ಕಾರಂತರು 1944 ರಲ್ಲಿ (ಪುಟ: 111) ಈ ಕೃತಿಯನ್ನು ಮೊದಲ ಬಾರಿಗೆ ಪ್ರಕಟಿಸಿದ್ದರು.
ತಮ್ಮ ಬಹುಮುಖ ಪ್ರತಿಭೆಯಿಂದ ಕನ್ನಡ ಸಾಹಿತ್ಯ ಶ್ರೀಮಂತಗೊಳಿಸಿದ ಕೋಟ ಶಿವರಾಮ ಕಾರಂತರ ಕೊಡುಗೆ ಅನನ್ಯ- ಅಭೂತಪೂರ್ವ. 1902ರ ಅಕ್ಟೋಬರ್ 10ರಂದು ಜನಿಸಿದರು. ತಂದೆ ಶೇಷ ಕಾರಂತ ತಾಯಿ ಲಕ್ಷ್ಮಮ್ಮ. ಕುಂದಾಪುರದಲ್ಲಿ ಪ್ರೌಢಶಾಲಾ ವ್ಯಾಸಂಗವನ್ನು ಮುಗಿಸಿ ಮಂಗಳೂರಿನ ಸರ್ಕಾರಿ ಕಾಲೇಜನ್ನು ಸೇರಿದಾಗಲೆ ಗಾಂಧೀಜಿಯವರ ಅಸಹಕಾರ ಚಳುವಳಿಗೆ ಧುಮುಕಿದರು. ಆಡು ಮುಟ್ಟದ ಸೊಪ್ಪಿಲ್ಲ ಎಂಬಂತೆ ಕಾರಂತರು ಪ್ರವೇಶಿಸದ ಕ್ಷೇತ್ರವಿಲ್ಲ. ಅವರು ಸರ್ಕಾರದಲ್ಲಿ ಅಥವಾ ಇತರರ ಆಶ್ರಯದಲ್ಲಿ ದುಡಿಯಲಿಲ್ಲ. ಒಂಟಿಸಲಗದಂತೆ ನಡೆದರು, ವ್ಯಾಪಾರ ಮಾಡಿದರು, ವಸಂತ, ವಿಚಾರವಾಣಿ ಪತ್ರಿಕೆ ನಡೆಸಿದರು. ಬಾಲವನ ಸ್ಥಾಪಿಸಿದ್ದರು. ಚಲನಚಿತ್ರ , ಯಕ್ಷಗಾನ ಪ್ರಯೋಗಗಳನ್ನು ನಡೆಸಿದ್ದರು, ಹೀಗೆ ...
READ MORE