ಸಾಂಸ್ಕೃತಿಕ ರಂಗದ ಕ್ರಾಂತಿಕಾರಿಗಳು-ಈ ಕೃತಿಯನ್ನು ವಿವಿಧ ಲೇಖಕರು ತಮ್ಮ ಚಿಂತನೆಗಳ ಮೂಸೆಯಿಂದ ಬರೆದ ವ್ಯಕ್ತಿ ಚಿತ್ರಣಗಳಿವು. ಬಿ. ಭಾಸ್ಕರ ಮಯ್ಯ, ಶಮೀಂ ಫೈಜಿ, ರಮಜಾನ್ ದರ್ಗಾ, ಕೆ.ಪಿ. ಸ್ವಾಮಿ, ನಗರಕೆರೆ ರಮೇಶ, ಕೆ. ಫಣಿರಾಜ್, ಆರ್.ಪೂರ್ಣಿಮಾ, ಪಾರ್ವತಿ ಜಿ. ಐತಾಳ್, ಸಿದ್ಧನಗೌಡ ಪಾಟೀಲ್ ಹಾಗೂ ಸ. ರಘುನಾಥ -ಈ ಎಲ್ಲ ಲೇಖಕರು ಸಾಂಸ್ಕೃತಿಕ ರಂಗದ ಸುಮಾರು 9 ಜನ ಕ್ರಾಂತಿಕಾರಿಗಳ ಬದುಕು-ಸಾಧನೆಯನ್ನು ವಿವರಿಸಿದ್ದಾರೆ.
(ಹೊಸತು, ನವೆಂಬರ್ 2014, ಪುಸ್ತಕದ ಪರಿಚಯ)
ಕ್ರಾಂತಿ ಮಾಡಲು ಶಸ್ತ್ರಾಸ್ತ್ರಗಳೇನೂ ಬೇಕಿಲ್ಲ. ಹಿಂಸೆಯ ದಾರಿಯೂ ಬೇಡ, ಲೇಖನಿ ಸಾಕು. ಬರಹಗಾರರು ತಮ್ಮ ಕೃತಿಗಳಲ್ಲಿ ಅನ್ಯಾಯವನ್ನು ಖಂಡಿಸಿ ದುರಾಡಳಿತದ ವಿರುದ್ಧ ದನಿಯೆತ್ತಬೇಕು. ಪರಿಣಾಮಕಾರಿ ಬರವಣಿಗೆ ಕ್ರಾಂತಿಕಾರಿಗಳಿಗೆ ಸ್ಫೂರ್ತಿ ಧೈರ್ಯ ತುಂಬುತ್ತದೆ. ಸರಿಯಾದ ದಾರಿಯಲ್ಲಿ ಕ್ರಮಿಸುವಂತೆ ಜನರನ್ನು ಅಣಿನೆರೆಸಲು ಅದು ಶಕ್ತವಾಗಿರಬೇಕು. ಬದಲಾವಣೆಯ ಮೊದಲ ಹೆಜ್ಜೆಯೇ ಅಂತಹ ಸಾಹಿತ್ಯ ನಿರ್ಮಾಣ. ಸಮಾಜವಾದಿ ರಾಷ್ಟ್ರಗಳಲ್ಲಿನ ಯಶಸ್ವೀ ಕ್ರಾಂತಿಗಳೆಡೆ ಕಣ್ಣು ಹಾಯಿಸಿದರೆ ಅಲ್ಲಿ ಸಾಹಿತ್ಯದ ಪಾತ್ರ ಹಿರಿದು. ಸಾಹಿತ್ಯ-ಸಿದ್ಧಾಂತ-ಹೋರಾಟಗಳು ಪರಸ್ಪರ ಪೂರಕ. ಸ್ವಸ್ಥ ಸಮಾಜ ನಿರ್ಮಾಣ ಅದರ ಗುರಿ. ನಮ್ಮ ದೇಶದಲ್ಲೂ ಕ್ರಾಂತಿಕಾರಿ ಬರಹಗಾರರು ಮಿಂಚಿ ತಮ್ಮಿಂದಾದಷ್ಟು ಬೆಳಕನ್ನು ಚೆಲ್ಲಿ ಹೋಗಿದ್ದಾರೆ. ಇವರಲ್ಲಿ ಯಾರು ಹೆಚ್ಚು – ಯಾರು ಕಡಿಮೆ ಎಂಬ ಮಾತೇ ಇಲ್ಲ ! ಅವರ ಬದುಕೇನೂ ಹೂವಿನ ಹಾಸಿಗೆಯಾಗಿರಲಿಲ್ಲ. ಏನೇ ಕಷ್ಟಗಳು ಬಂದರೂ ಪ್ರಾಣಾರ್ಪಣೆ ಮಾಡಬೇಕಾದ ಸಂದರ್ಭ ಎದುರಾದರೂ ಬೆನ್ನು ತಿರುಗಿಸಿದವರಲ್ಲ. ಸಾಹಿತ್ಯದ ಮೂಲಕ ಕ್ರಾಂತಿಯ ಕಹಳೆಯೂದಿ, ಎಡ ಬಲಗಳಲ್ಲಿ ಸಿದ್ಧಾಂತ-ಹೋರಾಟಗಳನ್ನಿರಿಸಿ ಎದೆ ಸೆಟೆಸಿ ಸಾಗಿದವರಿವರು. ಜನಪರ ಸಿದ್ಧಾಂತಗಳಿಗೆ ಸ್ಪಂದಿಸುತ್ತ ಸಾಹಿತ್ಯ ರಚನೆಗೈದು – ಅದನ್ನೇ ಉಸಿರಾಗಿಸಿದ ಒಂಬತ್ತು ಜನರ ಬದುಕಿನ ಚಿತ್ರಣವಿದು. ಇಂದಿನ ಯುವಜನತೆ ಇಂಥ ಪ್ರಗತಿಶೀಲ ಸಾಹಿತಿ-ಹೋರಾಟಗಾರರನ್ನು ಅರಿಯಬೇಕು.
©2025 Book Brahma Private Limited.