ಡಾ.ವಿಕ್ರಮ್ ವಿಸಾಜಿ ಅವರು ಸಂಪಾದಿಸಿರುವ “ಚೆನ್ನಣ್ಣ ವಾಲೀಕಾರ” ವಾಚಿಕೆಯು ಚೆನ್ನಣ್ಣ ವಾಲೀಕಾರ ಅವರ ಸಾಹಿತ್ಯ ವಾಚಿಕೆಯ ಕೃತಿಯಾಗಿದೆ. ಕೆಲ ಮುಖ್ಯ ಬರಹಗಳು ಒಂದೆಡೆ ಸಿಗಲಿ ಎಂಬುದು ಈ ವಾಚಿಕೆಯ ಉದ್ದೇಶವಾಗಿದ್ದು, ಈ ವಾಚಿಕೆಯು ಕಾವ್ಯ, ಕಥೆ, ನಾಟಕ, ಕಾದಂಬರಿ ಮತ್ತು ಜಾನಪದ ಲೇಖನಗಳನ್ನು ಒಳಗೊಂಡಿದ್ದು, ಒಟ್ಟು 5 ಭಾಗಗಳಾಗಿ ವಿಂಗಡಿಸಲಾಗಿದೆ. ವಾಲಿಕಾರರಿಗೆ ಜಾನಪದದ ಬಗೆಗೆ ಅಪಾರವಾದ ತಿಳುವಳಿಕೆ ಇತ್ತು, ಇಲ್ಲಿನ ಲೇಖನಗಳಲ್ಲಿ ಅವರ ಸಂಗ್ರಹ ಗುಣ, ಮಾಹಿತಿ ಪ್ರಧಾನತೆ ಜೊತೆಗೆ ಕೆಲ ವಿಶೇಷವಾದ ಒಳನೋಟಗಳಿವೆ. ಜಾತ್ರೆಗಳ ಕುರಿತು ಇರುವ ಪುರಾಣಕಾಲದ ನಂಬಿಕೆಗಳು, ಜನಪದ ಕಲಾವಿದರ ಜೀವನ ಚಿತ್ರಗಳು, ಕಡ್ಲಿಮಟ್ಟಿ ಕಾಶೀಬಾಯಿ ಕತೆ ಹುಟ್ಟಿಕೊಂಡ ರೀತಿ ಮತ್ತು ದೇವದಾಸಿಯರ ಜೀವನದ ಸುಧಾರಣೆಗೆ ಕೈಗೊಳ್ಳಬೇಕಾದ ಕ್ರಮಗಳು ಹೀಗೆ ಇಂಥ ನೂರಾರು ತಿಳಿವಳಿಕೆಗಳನ್ನು ವಾಲೀಕಾರರು ದಾಖಲಿಸಿದ್ದಾರೆ. ಇವುಗಳ ಪರಿಚಯವಾಗಲೆಂದು ಕೆಲ ಲೇಖನಗಳನ್ನು ಇಲ್ಲಿ ಕೊಡಲಾಗಿದೆ. ಇವೆಲ್ಲವೂ ಕೂಡ ಅವರ ಸಾಹಿತ್ಯಾಧ್ಯಯನಕ್ಕೆ ಕಿಟಕಿಗಳು ಮಾತ್ರ. ಇವುಗಳ ಮೂಲಕ ಅವರ ಸಮಗ್ರ ಸಾಹಿತ್ಯಕ್ಕೆ ಓದುಗರು ಹೋಗಲೆಂಬುದು ಈ ಕೃತಿಯನ್ನು ರೂಪಿಸಿರುವ ಹಿಂದಿನ ಮುಖ್ಯ ಉದ್ದೇಶ.
ಕಲಬುರ್ಗಿಯಲ್ಲಿರುವ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥ ಹಾಗೂ ಪ್ರಾಧ್ಯಾಪಕರಾಗಿರುವ ವಿಕ್ರಮ ವಿಸಾಜಿ ಅವರು ಕವಿ-ವಿಮರ್ಶಕ. ಬೀದರ ಜಿಲ್ಲೆಯ ಭಾಲ್ಕಿಯವರಾದ ವಿಕ್ರಮ ಅವರ ತಂದೆ ಹೆಸರಾಂತ ಕವಿ-ಲೇಖಕರು. ಬಾಲ್ಯದಲ್ಲಿಯೇ ಕವಿತೆ ಬರೆಯುವುದನ್ನು ಆರಂಭಿಸಿದ ವಿಕ್ರಮ ಅವರು ಹೈಸ್ಕೂಲಿನಲ್ಲಿದ್ದಾಗಲೇ ಕವನ ಸಂಕಲನ ಪ್ರಕಟಿಸಿದ್ದರು. ಕಲಬುರ್ಗಿಯ ಗುಲ್ಬರ್ಗ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ (ಎಂ.ಎ) ಪದವಿ ಪಡೆದ ಅವರು ಕಂಬಾರರ ಕಾವ್ಯದ ಮೇಲೆ ಸಲ್ಲಿಸಿದ ಮಹಾಪ್ರಬಂಧಕ್ಕೆ ಪಿಎಚ್.ಡಿ. ಪದವಿ ಪಡೆದಿದ್ದಾರೆ. ಗುಲ್ಬರ್ಗ ವಿಶ್ವವಿದ್ಯಾಲಯದಲ್ಲಿ ಅಧ್ಯಾಪಕರಾಗಿ ವೃತ್ತಿ ಆರಂಭಿಸಿ ಸೊಂಡೂರು, ರಾಯಚೂರು ಸ್ನಾತಕೋತ್ತರ ಕೇಂದ್ರಗಳಲ್ಲಿ ಅಧ್ಯಾಪಕರಾಗಿ ಕಾರ್ಯ ನಿರ್ವಹಿಸಿದ್ದರು. ಕನ್ನಡ ಸಾಹಿತ್ಯ ಪರಿಷತ್ತು ...
READ MORE