`ನೂರರ ನೋಟ' ಸ್ವಾತಂತ್ರ್ಯ ಸೇನಾನಿ ಎಚ್. ಎಸ್. ದೊರೆಸ್ವಾಮಿಯವರ ಕುರಿತ ಸಂಕಲನ. ಈ ಸಂಕಲನದ ಉದ್ದಕ್ಕೂ ನಮಗೆ ಹಿರಿಯಜ್ಜ ಅವರ ಅನುಭವದ ಮತ್ತು ಓದಿನ ಆಳವನ್ನು ಪರಿಚಯಿಸುತ್ತಾರೆ. ಸ್ವತಂತ್ರ ಭಾರತದ ಆರಂಭದ ದಿನಗಳಿಗೆ ಇಂದಿನ ಭಾರತವನ್ನು ಹೋಲಿಸುತ್ತಾ ಬಡವ ಬಲ್ಲಿದರ ಪ್ರಗತಿಯಲ್ಲಿ ಎಳ್ಳಷ್ಟೂ ಬದಲಾಗಿಲ್ಲ ಎಂದು ಅಂಕಿಅಂಶಗಳ ಸಮೇತ ಚರ್ಚಿಸುತ್ತಾರೆ. ಹೀಗೆ ಚರ್ಚಿಸುವಾಗ ಮಾನವ ಅಭಿವೃದ್ಧಿ ಮತ್ತು ಭೌತಿಕ ಸಂಪನ್ಮೂಲಗಳ ಅಭಿವೃದ್ಧಿಯನ್ನು ಬಹಳ ಎಚ್ಚರದಿಂದಲೇ ಪ್ರತ್ಯೇಕಿಸುತ್ತಾರೆ. ನಮ್ಮ ಭಾರತ ಸಮಾಜದ ಸುಸ್ಥಿರತೆ ನಿಂತಿರುವುದು ಕೇವಲ ತಲಾದಾಯದ ಮೇಲಲ್ಲ. ನಮ್ಮ ಇಡೀ ವ್ಯವಸ್ಥೆಯ ಸಂಕೀರ್ಣತೆಗಳಾದ ಜಾತೀಯತೆ, ಕೋಮುವಾದ, ಅಸ್ಪೃಶ್ಯತೆಗಳನ್ನು ನಾವು ಎಷ್ಟು ಪ್ರಬುದ್ಧರಾಗಿ ನಿಭಾಯಿಸುತ್ತೇವೆ ಎನ್ನುವುದರ ಮೇಲೆ ಎಂಬುದು ಅವರ ಖಡಾಖಂಡಿತ ಗ್ರಹಿಕೆ. ಚುನಾವಣಾ ರಾಜಕಾರಣದ ಬೆಳವಣಿಗೆಯನ್ನು ಕೂಲಂಕುಶವಾಗಿ ಗಮನಿಸಿರುವ ಹಿರಿಯಜ್ಜ ಬಂಡವಾಳಶಾಹಿ ಮತ್ತು ಜಾತಿವಾದಿಗಳು ಸೃಷ್ಟಿಸಿರುವ ಭ್ರಮೆಗಳನ್ನು ಎಳೆಎಳೆಯಾಗಿ ಬಿಡಿಸಿಡಬಲ್ಲರು. ಸಮಕಾಲೀನ ರಾಜಕಾರಣದ ಬಗ್ಗೆ ಭ್ರಮನಿರಸನ ಹೊಂದಿರುವ ಹಿರಿಯಜ್ಜ ಯುವಜನತೆಯ ನಾಯಕತ್ವದಲ್ಲಿ ನಂಬಿಕೆ ಇಟ್ಟಿದ್ದಾರೆ. ಪ್ರಭುತ್ವದ ಧಮನದ ವಿರುದ್ಧ ಯುವಜನತೆಯ ಆಕ್ರೋಷಕ್ಕೆ ದನಿಗೂಡಿಸುತ್ತಾ ಜಿನ್ನೇಶ್ ಮೆವಾನಿ, ಕನ್ನಯ್ಯ ಕುಮಾರ್, ಅಲ್ವೇಶ್ ಠಾಕೂರ್, ಹಾರ್ಧಿಕ್ ಪಟೇಲ್ ಮುಂತಾದ ಯುವ ನಾಯಕರ ಕುರಿತು 'ಇಂತಹ ಯುವ ನಾಯಕತ್ವದಲ್ಲಿ ಹೊಸ ಮನ್ವಂತರ ಹುಟ್ಟಿಕೊಳ್ಳಲಿದೆ. ಅವರ ಜೊತೆಗೆ ನಾವೆಲ್ಲ ಕೈ ಜೋಡಿಸಬೇಕಿದೆ' ಎನ್ನುತ್ತಾ ಯುವಜನತೆಯ ನಾಯಕತ್ವದತ್ತ ಆಸೆಗಣ್ಣಿನಿಂದ ನೋಡುತ್ತಾರೆ.