‘ಬೆಳಕಿನ ತೆನೆ’ ಲೇಖಕ ಸಿದ್ದು ಸತ್ಯಣ್ಣವರ ಅವರು ಬರೆದಿರುವ ನೋವುಂಡು ಬೆಳಕು ಕಂಡವರ ಕಥನಗಳು. ಈ ಕೃತಿಗೆ ಕೇಶವ ಮಳಗಿ ಅವರ ಬೆನ್ನುಡಿ ಬರಹವಿದೆ. ಕೃತಿಯ ಕುರಿತು ಬರೆಯುತ್ತಾ ‘ಬಂಜರು, ಕಲ್ಲರಾಶಿಗಳ ಮರುಭೂಮಿಯಲ್ಲಿ ಲೋಕಕೆ ಸುಗಂಧವನು ಹಂಚಲೆಂದೇ ಅರಳಿಹೆವು ಎನ್ನುವ ಸಾಮಾನ್ಯರ ಅಸಾಮಾನ್ಯ ಕಥನಗಳು ಇಲ್ಲಿವೆ. ಉತ್ಸಾಹಿ ಬರಹಗಾರ ಮತ್ತು ಅತ್ಯುತ್ಸಾಹಿ ಪತ್ರಕರ್ತ ಸಿದ್ದು ಸತ್ಯಣ್ಣವರ ಈ ʻಬೆಳಕಿನ ತೆನೆʼಗಳ ಸುಗ್ಗಿಕಾರ’ ಎಂದಿದ್ದಾರೆ ಕೇಶವ ಮಳಗಿ. ಜೊತೆಗೆ ದಿನಗೂಲಿಯ, ನಾವು ಸಾಮಾನ್ಯವಾಗಿ ನಿರ್ಗತಿಕರು ಎಂದು ಕರೆಯುವ ನೆಲೆಯಿಲ್ಲದ ತರುಣಿ ತನ್ನ ಛಲ, ಅಪಾರ ಶ್ರದ್ಧೆಯಿಂದ ವಿಶ್ವವಿದ್ಯಾಲಯದ ಡಾಕ್ಟರೇಟ್ ಪದವಿ ಪಡೆದುದು, ಬಳೆ ಮಾರುವ ಕನಸು ಕಣ್ಣಿನ ಬಾಲಕ ಜಿಲ್ಲಾಧಿಕಾರಿಯಾದುದು, ಕೊಳಗೇರಿಯ ಪೋರನೊಬ್ಬ ಭಾರತದ ಕ್ರಿಕೆಟ್ ತಂಡಕ್ಕೆ ಆಯ್ಕೆಯಾಗಿ ಜನರ ಕಣ್ಮಣಿಯಾದುದು, ನಿರಕ್ಷರಿ ಮಹಿಳೆ ಕಲ್ಲುಗಳು ತುಂಬಿದ್ದ ಹೊಲದಲ್ಲಿ ಹೂಬಂಗಾರ ಬೆಳೆದು ವಿಶ್ವಮಾನ್ಯತೆಗೆ ಪ್ರಾಪ್ತವಾದದು. ಇಂತಹ ಯಶೋಗಾಥೆಗಳು ಈ ಕೃತಿಯಲ್ಲಿವೆ. ಇಂದು ತಾವು ಕಟ್ಟಿಕೊಂಡ ಬದುಕಿಗಾಗಿ ಈ ಪುಸ್ತಕದಲ್ಲಿ ಕಥನವಾಗಿ ಅರಳಿದ ಈ ವ್ಯಕ್ತಿಗಳ ಹಿಂದಿನ ಬದುಕು ಸಮಾಜಕ್ಕೆ, ಹೊಸ ತಲೆಮಾರಿಗೆ ಪಾಠವಾಗಬೇಕು ಎಂದಿದ್ದಾರೆ.
ಸದ್ಯ ಧಾರವಾಡದ ನಿವಾಸಿಯಾಗಿರುವ ಕವಿ ಸಿದ್ದು ಸತ್ಯಣ್ಣವರ ಪತ್ರಕರ್ತರೂ ಹೌದು. ಮೂಲತಃ ಗದಗಿನವರಾದ ಸಿದ್ದು ಅವರು ಕರ್ನಾಟಕ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮಹಾನದಿಯ ಹರಿವಿನ ಗುಂಟ’ ಎಂಬ ಪ್ರವಾಸ ಕಥನ ಪ್ರಕಟವಾಗಿದೆ. ಹಾಗೆಯೇ ಕನಸ ಬೆನ್ನತ್ತಿ ನಡಿಗೆ’ ಕವನ ಸಂಕಲನ ಮತ್ತು ’ಹೊಲ ಅಪ್ಪ ಮತ್ತು ನಾನು’ ಎನ್ನುವ ಕೃತಿಗಳು ಪ್ರಕಟಗೊಂಡಿವೆ. ...
READ MORE