ಜನಪ್ರಿಯ ಜಾನಪದ ಪುಸ್ತಕ ಮಾಲೆ- 39 ಮಾಲಿಕೆಯಿಂದ ಬಿಡುಗಡೆಗೊಂಡ ಕೃತಿ ಲೇಖಕ ಸುಮುಖಾನಂದ ಜಲವಳ್ಳಿ ಅವರ ‘ಎನ್.ಆರ್. ನಾಯಕ ವ್ಯಕ್ತಿ ಪರಿಚಯ’. ಉತ್ತರ ಕನ್ನಡ ಜನಪದ ಸಾಹಿತ್ಯಕ್ಕೆ ಹೆಸರಾದ ಜಿಲ್ಲೆ. ವಿವಿಧ ಜನವರ್ಗದವರು ಇಲ್ಲಿ ಬಾಳಿಕೊಂಡು ಬಂದಿದ್ದಾರೆ. ವೈವಿಧ್ಯಮಯ ಸಾಹಿತ್ಯ-ಕಲೆ ಇಲ್ಲಿ ಅರಳಿಕೊಂಡು ಬಂದಿವೆ. ಈ ಸಂಪತ್ತನ್ನು ಉಳಿಸಿಕೊಳ್ಳುವುದಕ್ಕಾಗಿಯೇ ಇಡೀ ಬದುಕನ್ನು ಮುಡಿಪಾಗಿಟ್ಟವರು ಡಾ|| ಎನ್.ಆರ್.ನಾಯಕರು. ಅವರು ಕವಿ, ನಾಟಕಕಾರ, ಪ್ರಕಾಶಕರೂ ಹೌದು; ಸಂಘಟಕ, ಸಮಾಜ ಚಿಂತಕ, ಕಾರಸಾಧಕರೂ ಹೌದು; ಪ್ರಾಧ್ಯಾಪಕರಾಗಿ, ಪ್ರಾಚಾರರಾಗಿ ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಸೇವೆಸಲ್ಲಿಸಿದವರೂ ಹೌದು ಎಂಬುದನ್ನು ಇಲ್ಲಿ ವಿವರಿಸಲಾಗಿದೆ. ಸ್ವಾತಂತ್ರ್ಯ ಚಳವಳಿ, ರೈತ ಚಳವಳಿಗೆ ಹೆಸರಾದ ನೆಲ ಉತ್ತರ ಕನ್ನಡದ ಅಂಕೋಲ. ಗಾಂಧೀಜಿ ಸಂಘಟಿತ ಉಪ್ಪಿನ ಸತ್ಯಾಗ್ರಹ ನಡೆಸಿದ ಕೀರ್ತಿ ಅದಕ್ಕಿದೆ. ಡಾ|| ನಾಯಕರ ಕುಟುಂಬದವರು, ಚಳವಳಿಗಾರರಿಗೆ ಸಹಾಯಮಾಡಿ ತಮ್ಮ ದೇಶಪ್ರೇಮವನ್ನು ಹಸುರಾಗಿಸಿದವರು, ನೌಕರಿಯ ಗುಲಾಮತನ ಬೇಡವೆಂದರು. ದುಡಿಮೆಯಲ್ಲಿ ಸುಖಕಂಡರು. ತಾಯಿ ದೇವಮ್ಮ ನಾಯಕರು ವಂದಿಗೆಯವರು. ವಂದಿಗೆಯ ಜನರೆಲ್ಲ ವೀರಯೋಧರೆ, ಅಲ್ಲಿಯ ಮಣ್ಣ ಕಣಕಣಕ್ಕೂ ಸ್ವಾತಂತ್ರ್ಯದ ಹಂಬಲ. ಅವರು ಹುಟ್ಟಿ ಬೆಳೆದ ಇಡೀ ಕುಟುಂಬವೇ ಸ್ವಾಭಿಮಾನದ ಗಣಿಯಾಗಿತ್ತು. ದೊಡ್ಡಪ್ಪ ಚಿಕ್ಕಪ್ಪ, ಸೋದರಮಾವಂದಿರು, ಸೋದರರು- ಎಲ್ಲರೂ ತೊಟ್ಟದೀಕ್ಷೆ ಒಂದೇ; ದೇಶಭಕ್ತಿ, ಅನ್ಯಾಯದ ದಬ್ಬಾಳಿಕೆಯನ್ನು ವಿರೋಧಿಸಿದ ದೇಶಭಕ್ತಿ ಚೈತನ್ಯಶೀಲರು ಈ ಜನ. ನಾಯಕರ ಬಾಲ್ಯಕ್ಕೆ ಸಿಕ್ಕ ಪ್ರಭಾವಳಿ ಇದಾಗಿದೆ ಎಂಬುದನ್ನು ಇಲ್ಲಿ ಕಾಣಬಹುದು.
ಸಾಹಿತಿ ಸುಮುಖಾನಂದ ಜಲವಳ್ಳಿ ಅವರು ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಕವಲಕ್ಕಿ ಗ್ರಾಮದವರು. ಇವರಿಗೆ ಉತ್ತರ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ. ಜಾನಪದ ತಜ್ಞೆ ಶಾಂತಿ ನಾಯಕ , ಡಾ. ಎನ್. ಆರ್. ನಾಯಕ (ಜೀವನ ಚರಿತ್ರೆಗಳು) ಜಲವಳ್ಳಿ ಗ್ರಾಮ ಅಧ್ಯಯನ ಎಂಬುದು ಇವರ ಕೃತಿಗಳು. ...
READ MORE