‘ಮಲಯಾಳಂ ಕಥೆಗಳು’ ಕೆ.ಕೆ ಗಂಗಾಧರನ್ ಅವರ ಅನುವಾದಿತ ಕೃತಿಯಾಗಿದೆ. ಎಂ. ಟಿ ವಾಸುದೇವನ್ ನಾಯರ್ ಅವರ ಈ ಕೃತಿಯ ಮೂಲ ಕರ್ತೃ. ಕೃತಿಗೆ ಬೆನ್ನುಡಿ ಬರೆದಿರುವ ನಾ. ದಾಮೋದರ ಶೆಟ್ಟಿ ಅವರು, ಆರು ದಶಕಗಳ ಸುದೀರ್ಘ ಹಾಗೂ ಆಚೆಯ ಸಾಹಿತ್ಯ ಕೈಂಕರ್ಯದಲ್ಲಿ ಕಾದಂಬರಿ ಹಾಗೂ ಸಣ್ಣ ಕಥೆಗಳ ವರ್ತುಲವನ್ನು ಅಗಾಧಗೊಳಿಸಿ, ಮಲಯಾಳ ಸಾಹಿತ್ಯಕ್ಕೆ ಅಪರಿಮಿತ ಪ್ರಸಿದ್ದಿಯನ್ನು ತಂದುಕೊಟ್ಟವರು ಪದ್ಮಭೂಷಣ ಎಂ.ಟಿ.ವಾಸುದೇವನ್ ನಾಯರ್. ಮನೆಯ ಮಂಡಲದಿಂದ ಹಿಡಿದು ಭೂಮಂಡಲವನ್ನು ವ್ಯಾಪಿಸುವ ವಸ್ತುವಿಸ್ತಾರವನ್ನು ಅವರ ಕಥೆ ಕಾದಂಬರಿಗಳು ಒಳಗೊಂಡಿವೆ. ಒಂದು ತುಂಡು ನೀಲಿ ಕಾಗದ ಸಾಕು; ಸಂಸಾರದ ಉದ್ದಗಲದಲ್ಲಿ ಸಂಚಲನ ಉಂಟುಮಾಡುವುದಕ್ಕೆ. ಒಂದು ಹಳ್ಳಿಯ ಮನೆ ಸಾಕು; ಅಭೂತಪೂರ್ವ ಬದುಕನ್ನು ಕಟ್ಟಿಕೊಡುವುದಕ್ಕೆ. ಒಂದು ಗುಡ್ಡದ ಯಾತ್ರೆ ಸಾಕು; ಗತಕಾಲದ ನೆನಪುಗಳನ್ನು ಮೆಲುಕು ಹಾಕುವುದಕ್ಕೆ ಈ ಕೃತಿಯು ಸಹಕಾರಿಯಾಗುತ್ತದೆ.ಆಧುನಿಕ ಮಲಯಾಳ ಸಾಹಿತ್ಯದ ಸಣ್ಣಕತೆ, ನೀಳ್ಗತೆ ಹಾಗೂ ಕಾದಂಬರಿ ಪ್ರಕಾರಗಳಿಗೆ ರಾಷ್ಟ್ರಮಟ್ಟದಲ್ಲಿ ಗೌರವ ಸಲ್ಲುತ್ತಿದೆ. ಅಂಥ ಮಟ್ಟಕ್ಕೆ ಏರುವುದು ಸಾಧ್ಯವಾದುದು ಬಹು ಮುಖ್ಯವಾಗಿ ಎಂ.ಟಿ.ಅವರ ಕಥನ ಕೌಶಲ್ಯದಿಂದಲೆ. ಮಲಯಾಳದ ಕಸುವನ್ನು ಅದರ ಆಳದಿಂದ ಅರಿಯಬಲ್ಲ ಕೆ.ಕೆ. ಗಂಗಾಧರನ್, ಎಂ.ಟಿ. ವಾಸುದೇವನ್ ನಾಯರ್ ಅವರ ಕೆಲವು ಸಣ್ಣಕತೆ ಹಾಗೂ ನೀಳ್ಗತೆಗಳನ್ನು ಕನ್ನಡಕ್ಕೆ ತಂದುಕೊಟ್ಟು ಎರಡೂ ಭಾಷೆಗಳಿಗೆ ಗೌರವ ಸಲ್ಲಿಸಿದ್ದಾರೆ’ ಎಂದಿದ್ದಾರೆ.
ಕೇರಳದ ಕಾಸರಗೋಡು ಜಿಲ್ಲೆಯ ಪಾತನಡ್ಕ ಎಂಬ ಹಳ್ಳಿಯಲ್ಲಿ ಜನಿಸಿದ ಗಂಗಾಧರನ್ ಅವರು ಬಾಲ್ಯವನ್ನು ಕೊಡಗಿನ ಸೋಮವಾರಪೇಟೆಯ ಸಮೀಪದ ಕಬ್ಬಿಣಸೇತುವೆಯಲ್ಲಿ ಕಳೆದರು. ಕಾಜೂರು, ಸೋಮವಾರಪೇಟೆಗಳಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ ಮಾಡಿದ ಅವರು ಪುತ್ತೂರಿನ ವಿವೇಕಾನಂದ ಕಾಲೇಜಿನಿಂದ ಬಿಎಸ್ಸಿ ಪದವಿ ಪಡೆದರು. ಹಾಸನದ ಕೊಥಾರಿ ಕಾಫಿ ಕ್ಯೂರಿಂಗ್ ವರ್ಕ್ಸ್ನಲ್ಲಿ ವೃತ್ತಿ (1970) ಆರಂಭಿಸಿದ ಅವರು ನಂತರ ಅಂಚೆ ಇಲಾಖೆಯ ರೈಲ್ವೆ ಮೇಲ್ ಸರ್ವಿಸ್ ವಿಭಾಗದಲ್ಲಿ (1974) ಉದ್ಯೋಗ ಪಡೆದರು. ಅರಸೀಕೆರೆ, ತುಮಕೂರು, ಮೈಸೂರು, ಮಡಿಕೇರಿ ಹಾಗೂ ಬೆಂಗಳೂರುಗಳಲ್ಲಿ ಕೆಲಸ ಮಾಡಿದ ಅವರು ನಿವೃತ್ತ (2009)ರಾದರು. ಸದ್ಯ ಬೆಂಗಳೂರಿನ ವಿಶ್ವನೀಡಂನಲ್ಲಿ ನೆಲೆಸಿದ್ದಾರೆ. ...
READ MORE