ದೇವಯಾನಿ ಎಂಬ ಕಾವ್ಯನಾಮದಿಂದಲೇ ಖ್ಯಾತರಾಗಿರುವ ಲೇಖಕಿ ಶುಭಾ ಎ.ಆರ್ ಅವರ ‘ಬದುಕಿನೊಂದು ತಿರುವಿನಲಿ’ ಕೃತಿಯು ಅನುವಾದಿತ ಕಥೆಗಳಾಗಿವೆ. ಈ ಕೃತಿಗೆ ವಾಸುದೇವ ನಾಡಿಗ್ ಅವರು ಬೆನ್ನುಡಿ ಬರೆದಿದ್ದಾರೆ. ‘ತಮ್ಮ ಅನುವಾದ ಮತ್ತು ಓದಿನ ಮೂಲಕ ಅಪರೂಪದ ಕಥನಗಳನ್ನು ಶೋಧಿಸುವ ಶುಭಾ ಇಲ್ಲಿ ಒಬ್ಬ ಸಮರ್ಥಅನುವಾದಕಿಯಾಗಿ ನಿಲ್ಲುತ್ತಾರೆ. ಭಿನ್ನ ಭೌಗೋಳಿಕ, ಭಾಷಿಕ ಮತ್ತು ಸಾಂಸ್ಕೃತಿಕ ನೆಲೆಗಟ್ಟನ್ನು, ಕನ್ನಡಕ್ಕೆ ತರುವುದು ಸರಳವಲ್ಲ. ಇಂಗ್ಲೀಷ್ ಭಾಷೆಯ ಒಳ ಲಯ ಮತ್ತು ಅದರ ಮೊನಚನ್ನು ಬಲ್ಲ ಶುಭಾ ಸಲೀಸಾಗಿ ಕನ್ನಡಕ್ಕೆ ತಾಕಿಸಬಲ್ಲರು. ಇಲ್ಲಿನ ಕತೆಗಳಲ್ಲಿ ಮನುಷ್ಯನ ಆಳವಾದ ದಾಹ, ಹುಡುಕಾಟ, ವಿಸ್ಮಯ, ಆಕಸ್ಮಿಕಗಳ ಮೇಲಾಟ, ಮಾತುಗಾರಿಕೆಯ ಮೂಲಕ ತಲುಪಬಲ್ಲ ಗಮ್ಯವನ್ನು ಕಾಣಬಹುದು. ಓದುಗರನ್ನು ಕೊನೆಯವರೆಗೂ ತುದಿಗಾಲಲ್ಲಿ ನಿಲ್ಲಿಸುವಂತೆ ಹಿಡಿದಿಡುವ ಇಲ್ಲಿನ ಕತೆಗಳು ಕನ್ನಡ ನುಡಿ ಪರಂಪರೆಗೆ ಹೊಸ ಸ್ಪರ್ಶವನ್ನು ತಂದು ಕೊಟ್ಟಿದೆ. ಅನುವಾದ ಸಾಹಿತ್ಯ ಕೇವಲ ಯಾಂತ್ರಿಕೆಯಲ್ಲ. ಅದು ಹೊರಜಗತ್ತನ್ನು ನಮ್ಮೊಳಗೆ ತುಂಬಿಕೊಳ್ಳಲು ಇರುವ ಜೀವಂತಿಕೆಯ ಸೇತುವೆ ಎಂಬುದನ್ನು ಶುಭಾ ಅವರು ಅನುವಾದಿಸಿರುವ ಇಲ್ಲಿನ ಕತೆಗಳು ಮತ್ತೆ ಮತ್ತೆ ಸಾಬೀತುಪಡಿಸುತ್ತವೆ. ಶುಭಾ ಅವರ ಪ್ರಯತ್ನ ಸಾಹಿತ್ಯಾಸಕ್ತರನ್ನು ತಲುಪಲಿ’ ಎಂಬುದಾಗಿ ಹಾರೈಸಿದ್ದಾರೆ.
ಲೇಖಕಿ ಶುಭಾ ಎ. ಆರ್. ಅವರು ಮೂಲತಃ ಬೆಂಗಳೂರಿನವರು. ಸರ್ಕಾರಿ ಪ್ರೌಢಶಾಲೆಯಲ್ಲಿ ಗಣಿತ ವಿಜ್ಞಾನ ಶಿಕ್ಷಕಿ. ವಿಜ್ಞಾನ ಪಠ್ಯಪುಸ್ತಕವೂ ಸೇರಿದಂತೆ ಶಿಕ್ಷಣ ಇಲಾಖೆಯಲ್ಲಿ ಹಲವಾರು ಪುಸ್ತಕಗಳ ರಚನೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಮಕ್ಕಳಿಗಾಗಿ ‘ಧರೆಯನುಳಿಸುವ ಬನ್ನಿರಿ’ ಎಂಬ ವೈಜ್ಞಾನಿಕ ನಾಟಕ, ‘ತುಂಡು ಭೂಮಿ- ತುಣುಕು ಆಕಾಶ’,(ಕಥಾ ಸಂಕಲನ), ‘ತುಟಿ ಬೇಲಿ ದಾಟಿದ ನಗು’ (ಕವನ ಸಂಕಲನ) ಮುಂತಾದ ಕೃತಿಗಳನ್ನು ರಚಿಸಿದ್ದಾರೆ. ...
READ MORE