ಮಹಾಸತಿ ಆಚರಣೆಗೆ ಸಂಬಂಧಿಸಿದ ಮಾಹಿತಿ ಕಲೆಹಾಕಲು ರಾಜ್ಯದ ಹಲವಾರು ತಾಲ್ಲೂಕುಗಳಲ್ಲಿ ಅಧ್ಯಯನ ನಡೆಸಿ ಈ ಆಚರಣೆ ಕುರಿತು ವಿವರಣೆ ಹಾಗೂ ವಿಶ್ಲೇಷಣೆಗಳು ಸಮಗ್ರವಾಗಿ ಸಂಶೋಧನೆ ನಡೆಸಿರುವ ಕೃತಿ ಮಹಾಸತಿ ಆಚರಣೆ. ಸತಿಯ ಆಚರಣೆಗೆ ಸಂಬಂಧಿಸಿದಂತೆ ಪೂರಕ ಸಾಮಗ್ರಿಯಾಗಿ ಶಾಸನಗಳಿಂದ ದತ್ತವಾದ ದಾಖಲೆಗಳು ಹಾಗೂ ಹದಿನೈದನೆಯ ಶತಮಾನದಿಂದ ಹತ್ತೊಂಬತ್ತನೆಯ ಶತಮಾನ- ದವರೆಗಿನ ವಿದೇಶೀ ಪ್ರವಾಸಿಗರ ಸತಿಯ ಘಟನೆಗಳ ಉಲ್ಲೇಖಗಳು ಮತ್ತು ಮಹಾಸತಿ ಜನಪದ ಗೀತೆಗಳೂ ಸೇರಿ-ಒಂದು ಪೂರ್ಣವಾದ ಮಾಹಿತಿ ಸಮಗ್ರವಾಗಿ ಈ ಕೃತಿಯಲ್ಲಿ ದೊರೆಯುತ್ತದೆ.
ಲೇಖಕರು ಈ ಕೃತಿಯ ಬಗ್ಗೆ ತಿಳಿಸುತ್ತಾ, ’ಮಧ್ಯಕಾಲೀನೋತ್ತರ ಕರ್ನಾಟಕ ರಾಜಕೀಯವಾಗಿ ಪಾಳೆಯಪಟ್ಟುಗಳಾಗಿ ಒಡೆದು ಹೋದ ಮೇಲೆ ಸಣ್ಣ ಸಣ್ಣ ಸೈನ್ಯ ಕಟ್ಟಲು ಜನರನ್ನು ಬಳಸಿಕೊಳ್ಳಲಾಯಿತು. ಊರ ಅಳಿವು, ಗೋಸಂಪತ್ತಿನ ಕೊಳ್ಳೆಗಳು ಹೆಚ್ಚು ಹೆಚ್ಚಾದವು. ಸಾಮಾನ್ಯ ಸೈನಿಕರ, ಊರ ಕಾಯುವವರ ಸಾವಿನ ಸಂಖ್ಯೆ ಮಿತಿಮೀರಿ- ಸಹಗಮನದಂಥ ಕ್ರೂರ ಆಚರಣೆಗೆ ಭಾರತದಲ್ಲಿ ಮತ್ತೆಲ್ಲೂ ಈ ಕಾಲದಲ್ಲಿ ಇಲ್ಲದಷ್ಟು ಕುಮ್ಮಕ್ಕು ಸಿಕ್ಕಿದ್ದು ಸಾಮಾನ್ಯ ಕನ್ನಡ ಭಾಷಿಕ ಸಮುದಾಯಗಳ ಒಂದು ವಿಷಾದ ಚರಿತ್ರೆಯೇ ಸರಿ. ಸಹಗಮನ ಈ ಕಾಲದಲ್ಲಿ ಎಷ್ಟರಮಟ್ಟಿಗೆ ಒಂದು ವಿಧಿಯುಕ್ತ ಆಚರಣೆಯಾಗಿತ್ತೆಂದರೆ, ಏನಕೇನ ಗಂಡ ಸತ್ತರೂ, ಹೆಂಡತಿಯಾದವಳು ಜೊತೆಗೂಡಿ ಸಾಯಬೇಕಾದಂಥ ವಾತಾವರಣ ನಿರ್ಮಾಣವಾಗಿತ್ತು. ಹೋರಾಟದ ಸಾಮಾನ್ಯ ಕುಲಕ್ಕೇ ಸೇರಿದ ಸಮುದಾಯಗಳು ಈ ದಾರುಣ ಘಟನೆಗೆ ಬಲಿಯಾದದ್ದು ಚರಿತ್ರೆಯ ಕರಾಳ ಅಧ್ಯಾಯಗಳಲ್ಲಿ ಒಂದಾಗಿದೆ. ಪುರೋಹಿತಶಾಹಿ ಮತ್ತು ಪಿತೃಪ್ರಧಾನ ವ್ಯವಸ್ಥೆಯು ತರ್ಕಬದ್ಧವಾಗಿ ನಡೆಸಿದ ಹೆಣ್ಣಿನ ಮೇಲಿನ ಈ ಶೋಷಣೆಯ ಸ್ವರೂಪವನ್ನು ವಿವರಗಳೊಡನೆ ತಿಳಿಯುವುದೂ, ನಮ್ಮ ಗತದ ಕರಾಳ ಸೂಕ್ಷ್ಮವನ್ನು ಅರಿಯುವಲ್ಲಿ ನೆರವಾಗುತ್ತದೆ. ಎನ್ನುವ ಲೇಖಕರ ಮಾತುಗಳು ಗತವೈಭವವನ್ನು ವೈಭವಿಸಿ ಹೇಳುವ ಚರಿತ್ರೆಯ ಮಾದರಿ ಎಷ್ಟು ಸುಳ್ಳು ಎನ್ನುವುದನ್ನು ವಿವರಗಳು ಎತ್ತಿಹಿಡಿಯುತ್ತವೆ.
1956ರಲ್ಲಿ ಬೆಳಗಾವಿಯಲ್ಲಿ ಜನಿಸಿದ ಬಸವರಾಜ ಕಲ್ಗುಡಿ ಅವರು ಪ್ರಾಥಮಿಕ, ಮಾಧ್ಯಮಿಕ, ಪ್ರೌಢ ಮತ್ತು ಕಾಲೇಜು ವ್ಯಾಸಂಗವು ಬೆಂಗಳೂರಿನಲ್ಲಿ ನಡೆಸಿದರು. ಎಂ.ಎ. (1975) ಪದವೀಧರರು. ‘ಅನುಭಾವ ಮತ್ತು ಸಾಂಸ್ಕೃತಿಕ ಸಮಸ್ಯೆಗಳು' ಸಂಶೋಧನಾ ಪ್ರಬಂಧಕ್ಕೆ (1983) ಪಿಎಚ್.ಡಿ. ಪದವಿ. ಕರ್ನಾಟಕದಲ್ಲಿಯ ಮಾಸ್ತಿಕಲ್ಲು ಕುರಿತಾಗಿ ಕ್ಷೇತ್ರಕಾರ್ಯ ಮಾಡಿ ಮಂಡಿಸಿದ ಮತ್ತೊಂದು ಸಂಶೋಧನೆ `ಮಹಾಸತಿ ಆಚರಣೆ'. ಅವರ ಅಧ್ಯಯನ ಶಾಸನವನ್ನು ಕುರಿತಾಗಿದ್ದರೂ, ಶಾಸನದ ಪಠ್ಯವನ್ನು ಕನ್ನಡ ಸಂಸ್ಕೃತಿಯ ಶೋಧನೆಗೆ ಪ್ರಮುಖ ಆಕರವಾಗಿ ಬಳಸಿದ್ದಾರೆ. ಸಂಸ್ಕೃತಿ ಕುರಿತಂತೆ ವ್ಯಾಖ್ಯಾನಿಸುವಲ್ಲಿ ಕಲ್ಗುಡಿಯವರು ಸಂಸ್ಕೃತಿಯಲ್ಲಿಯ ಚಲನೆಯ ಪಲ್ಲಟವನ್ನು ಸಮಗ್ರವಾಗಿ ವಿವಿಧ ನೆಲೆಗಳಿಂದ ಶೋಧಿಸುತ್ತಾರೆ. ಕಲ್ಗುಡಿಯವರು ವಚನ ಸಾಹಿತ್ಯ ಕುರಿತ ಸಂಶೋಧನಾತ್ಮಕ ಅಧ್ಯಯನದಲ್ಲಿ ವಿವಿಧ ಜ್ಞಾನಶಿಸ್ತುಗಳನ್ನು ಒಳಗೊಂಡಿದೆ. ಅವರು ವರ್ತಮಾನದ ಹಿನ್ನೆಲೆಯಿಂದ ವಚನ ಸಂಸ್ಕೃತಿಯನ್ನು ವ್ಯಾಖ್ಯಾನಿಸಿದ್ದು, ...
READ MORE