ಡಾ. ರಾಜಶೇಖರ ಇಚ್ಚಂಗಿ ಅವರು ಸಂಶೋಧನಾತ್ಮಕವಾಗಿ ಬರೆದ ಬರಹಗಳ ಕೃತಿ-ಬೆಳಗಾವಿ ಜಿಲ್ಲೆ ಸಾಂಸ್ಕೃತಿಕ ವೈವಿಧ್ಯ. ಕವಿಳಾಸಪುರ ಮತ್ತು ಬಸವಣ್ಣನವರ ವಂಶಾವಳಿ ಹೊಸ ಶೋಧ, ಬೆಳಗಾವಿ ಜಿಲ್ಲೆಯ ಸಾಂಸ್ಕೃತಿಕ ಕ್ಷೇತ್ರಗಳು, ಬೆಳಗಾವಿ ಜಿಲ್ಲೆಯ ಅಪ್ರಕಟಿತ ಶಾಸನಗಳು, ಬೆಳಗಾವಿ ಜಿಲ್ಲೆಯ ಪ್ರಾಚೀನ ಹಸ್ತಪ್ರತಿಗಳ ಶೋಧ, ಬೆಳವಡಿಯ ಮಲ್ಲಮ್ಮ ರಾಣಿ, ವಂಟಮುರಿಯ ರಾಜಾಲಕಮಗೌಡ ಬಸವಪ್ರಭು ಸರದೇಸಾಯಿ, ಲಾವಣಿ ಸಾಹಿತ್ಯದಲ್ಲಿ ಕಿತ್ತೂರು ಸಂಸ್ಥಾನ, ಶಿ.ಶಿ. ಬಸವನಾಳರು ಮತ್ತು ಸಮಕಾಲೀನ ಪರಿಸರ, ಬೆಳಗಾವಿ ಜಿಲ್ಲೆಯ ಕಾವ್ಯಪರಂಪರೆ ಹಾಗೂ ಡಾ.ಎಂ. ಅಕಬರ ಅಲಿ, ಡಾ.ಶಿ.ಚ. ನಂದೀಮಠ ಬದುಕು-ಬರಹ, ಬೆಳಗಾವಿ ಜಿಲ್ಲೆಯ ಉದಯೋನ್ಮುಖ ಲೇಖಕರು, ವಿದ್ವತ್ ಲೋಕದ ಸಾಧಕ: ಪಂ. ಸದಾಶಿವ ಶಾಸ್ತ್ರಿಗಳು, ಕನ್ನಡ ಸಾಹಿತ್ಯದಲ್ಲಿ ಹುಕ್ಕೇರಿ ತಾಲೂಕಿನ ಹೆಜ್ಜೆಗಳು, ಪ್ರಥಮ ಸ್ವಾತಂತ್ಯ್ರ ಸಂಗ್ರಾಮದ ರೂವಾರಿ ಸಂಗೊಳ್ಳಿ ರಾಯಣ್ಣ ಹೀಗೆ ವೈವಿಧ್ಯಮಯ ಅಧ್ಯಾಗಳನ್ನು ಈ ಕೃತಿ ಒಳಗೊಂಡಿದೆ.
ಕೃತಿಗೆ ಮುನ್ನುಡಿ ಬರೆದ ಬೆಳಗಾವಿಯ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಪ್ರಸಾರಾಂಗ ಸಹಾಯಕ ನಿರ್ದೇಶಕಿ ಡಾ. ಮೈತ್ರೇಯಿಣಿ ಗದಿಗೆಪ್ಪಗೌಡರ ಅವರು ‘ಸಂಸ್ಕೃತಿ -ಸಂಶೋಧನೆ ಮತ್ತು ಬಹುತ್ವದ ಚಿಂತನೆಗಳನ್ನು ಒಳಗೊಂಡಂತೆ ಭಿನ್ನ ಆಯಾಮದ ಚಿಂತನಾ ಲೇಖನಗಳು ಈ ಕೃತಿಯಲ್ಲಿ ಗಮನ ಸೆಳೆಯುತ್ತವೆ. ಹಸ್ತಪ್ರತಿ, ಶಾಸನಗಳು, ಶಾಸ್ತ್ರೀಯ ಚಿಂತನೆಗಳ ಶಾಸ್ತ್ರ-ಸಾಹಿತ್ಯದ ಒಳಹೊರಗನ್ನು ತೆರೆದಿಡುವ ಲೇಖನಗಳು ಓದುಗರಿಗೆ ವಿಸ್ತೃತ ಆಯಾಮವನ್ನು ಒದಗಿಸಿವೆ. ಅನೇಕ ವೈಚಾರಿಕ ಚಿಂತನೆಗಳಿಗೆ ಇಂಬು ನೀಡಿದೆ. ಇಚ್ಚಂಗಿ ಅವರ ಅಧ್ಯಯನದ ಶಿಸ್ತು, ಬದ್ಧತೆಯನ್ನು ತೋರುತ್ತದೆ. ಅಧ್ಯಯನ, ಅಧ್ಯಾಪನ, ಸಂಶೋಧನೆ ಇವು ನಿರಂತರ ಪ್ರಕ್ರಿಯೆಗಳು ಹಾಗೂ ಅವುಗಳ ಮಹತ್ವವನ್ನು ಈ ಕೃತಿ ತೋರುತ್ತದೆ. ಸಾಹಿತ್ಯ-ಸಂಶೋಧನಾರ್ಥಗಳಿಗೆ ಈ ಕೃತಿಯು ಉತ್ತಮ ಪರಾಮರ್ಶನ ಗ್ರಂಥವಾಗಿದೆ’ ಎಂದು ಪ್ರಶಂಸಿಸಿದ್ದಾರೆ.
ಲೇಖಕ ರಾಜಶೇಖರ ಇಚ್ಚಂಗಿ ಅವರು ಗದಗ ಜಿಲ್ಲೆಯ ಬಟ್ಟೂರದವರು. ಅವರು 1957 ಜೂನ್ 01ರಂದು ಜನಿಸಿದರು. ಸ್ನಾತಕೋತ್ತರ ಪದವಿ ಪಡೆದಿರುವ ಇವರು ವೃತ್ತಿಯಿಂದ ಪ್ರಾಧ್ಯಾಪಕರು. ‘ಪಾರ್ಶ್ವನಾಥ ಪುರಾಣ-ಒಂದು ತೌಲನಿಕ ಅಧ್ಯಯನ’ ಮಹಾಪ್ರಬಂಧಕ್ಕೆ ಪಿಎಚ್.ಡಿ ಪದವಿ ಗಳಿಸಿದ್ದಾರೆ. ಕೃತಿಗಳು: ಚಿತ್ರ ಸಂಚಯ; ಬೆಟಗೇರಿ ಕೃಷ್ಣಶರ್ಮ, ಶಂಬಾಜೋಶಿ, ಅಣ್ಣಾ ಹಜಾರೆ, ಪಂಡಿತ ಸದಾಶಿವ ಶಾಸ್ತ್ರಿಗಳು- ವ್ಯಕ್ತಿ ಚಿತ್ರ ಕೃತಿಗಳನ್ನು ಪ್ರಕಟಿಸಿದ್ದಾರೆ. ‘ಕನ್ನಡ-ಕರ್ನಾಟಕ’, ‘ಕೆಲವು ಚಿಂತಕರು’ ಅವರ ವಿಮರ್ಶಾ ಕೃತಿಯಾಗಿದ್ದು ‘ಸಂಸ್ಕೃತಿ ಶೋಧ’ ಅವರ ಸಂಶೋಧನಾ ಕೃತಿ. ‘ಅಡವಿಸಿರಿ’, ‘ಹಿರಣ್ಯ ಗಂಗೋತ್ರಿ’, ‘ಅರ್ಪಣ’, ‘ಬೆಳಗಾವಿ ಬೆಡಗು’ ಅವರ ಸಂಪಾದಿತ ಕೃತಿಗಳು. ಬೆಳಗಾವಿ ಜಿಲ್ಲೆಯ ಸಾಂಸ್ಕೃತಿಕ ವೈವಿಧ್ಯ. ಅವರ ಮಹತ್ವದ ಕೃತಿ. ಅವರಿಗೆ ಕರ್ನಾಟಕ ಇತಿಹಾಸ ...
READ MORE