ಪಿ. ಸಾಯಿನಾಥ್ ಪ್ರಶಸ್ತಿ ಪುರಸ್ಕೃತ ಲೇಖಕ ಟಿ.ಕೆ. ದಯಾನಂದ ಅವರ ಅಂಕಣ ಬರಹಗಳ ಸಂಕಲನ ‘ರಸ್ತೆ ನಕ್ಷತ್ರ’. ಚಿತ್ರ ನಿರ್ದೇಶಕ, ಚಿತ್ರ ಕತೆಗಾರ, ಲೇಖಕ ಟಿ.ಕೆ. ದಯಾನಂದ್ ‘ಕೆಂಡಸಂಪಿಗೆ’ಯಲ್ಲಿ ಬರೆಯುತ್ತಿದ್ದ ಅಂಕಣ ಬರಹಗಳು ಇಲ್ಲಿ ಸಂಕಲನಗೊಂಡಿವೆ. ಈ ಅಂಕಣ ಅತ್ಯಂತ ವಿಭಿನ್ನವಾದದ್ದು. ಸಂಜೆಯ ಹೊತ್ತು ರಸ್ತೆಯಲ್ಲಿ ಪ್ರತ್ಯಕ್ಷವಾಗುತ್ತಿದ್ದ ದಯಾನಂದ ಅವರು ತನ್ನದೇ ಕರುಳಬಳ್ಳಿಗಳಂತಿದ್ದವರ ಜೊತೆ ಮಾತನಾಡಿ ಫೋಟೋ ತೆಗೆದು, ನಡುರಾತ್ರಿಯ ಹೊತ್ತು ಅದನ್ನು ಕಂಪ್ಯೂಟರಿನಲ್ಲಿ ಕುಟ್ಟಿ ಮೇಲ್ ಮಾಡಿದರೆ ಮಧ್ಯಾಹ್ನದ ನಂತರ ಈ ಜೀವಗಳು ಕನ್ನಡ ಅಂತರ್ಜಾಲ ಲೋಕದಲ್ಲಿ ಇದು ತಮ್ಮದೇ ರಸ್ತೆ ಎಂಬಂತೆ ಸಹಜವಾಗಿ ಕಂಗೊಳಿಸುತ್ತಿದ್ದವು. ಇವರ ಮಾತುಗಳನ್ನು ಓದಿದರೆ ಅದನ್ನು ಕೇಳಿದಂತಾಗುತ್ತಿತ್ತು. ಕೇಳಿದರೆ ನೋಡಿದಂತೆ ಅನಿಸುತ್ತಿತ್ತು. ಈ ಜೀವಗಳ ಮೈಮೇಲೆ ದಯಾನಂದ ಬಂದು ಮಾತನಾಡುತ್ತಿದ್ದರೋ ಅಥವಾ ಈ ಜೀವಗಳೇ ಸದರಿ ಲೇಖಕರ ಮೈಮೇಲೆ ಬರುತ್ತಿತ್ತೋ ಗೊತ್ತಿಲ್ಲ. ಇದನ್ನೆಲ್ಲ ಓದಿದ ಓದುಗರು ಉಂಡು ಕುಡಿದು ಅಂದಿನ ಲೆಕ್ಕಾಚಾರ ಮುಗಿಸಿ ಮಗ್ಗುಲಾಗುವ ಮುನ್ನ ಅವರ ಮೆದುಳೊಳಗೆ ಈ ಜೀವಗಳು ಕೈಯಾಡಿಸುತ್ತಿದ್ದುದಂತೂ ನಿಜ ಎನಿಸುತ್ತಿತ್ತು. ರಸ್ತೆಯಲ್ಲಿ ಸಿಗುತ್ತಿದ್ದ ವಿಚಿತ್ರ ಬದುಕಗಳ ಕತೆಯನ್ನು ಅಷ್ಟೇ ಸೂಕ್ಷ್ಮವಾಗಿ ಬರೆಯುತ್ತಿದ್ದ ದಯಾನಂದ ಅವರ ಈ ಅಂಕಣ ಎಂತಹವರಲ್ಲೂ ಸೂಕ್ಷ್ಮಪ್ರಜ್ಞೆಯನ್ನು ಜಾಗೃತಗೊಳಿಸುತ್ತಿತ್ತು. ಆ ಅಂಕಣಬರಹಗಳ ಸಂಕಲನವೇ ಈ ಕೃತಿ.
ಕತೆಗಾರ, ಲೇಖಕ ಟಿ.ಕೆ. ದಯಾನಂದ್ ಅವರು ಹುಟ್ಟಿದ್ದು ತುಮಕೂರಿನ ದೊಡ್ಡಹಟ್ಟಿಯಲ್ಲಿ, ಬಿ.ಎ.ವರೆಗೆ ತುಮಕೂರಿನಲ್ಲಿ ವ್ಯಾಸಂಗ ಮಾಡಿದ ಅವರು ಬೆಂಗಳೂರಿನಲ್ಲಿ ಸಮೂಹ ಸಂವಹನ ಸ್ನಾತಕೋತ್ತರ ಪದವಿ ಪೂರ್ಣಗೊಳಿಸಿದ್ದಾರೆ. ವಾರ್ತಾಭಾರತಿ ದಿನಪತ್ರಿಕೆಯಲ್ಲಿ ವರದಿಗಾರರಾಗಿದ್ದರು. ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯಲ್ಲಿ ಸಂಶೋಧಕರಾಗಿ ನಗರದ ಬಡಜನರ ಕುರಿತಂತೆ ಅಧ್ಯಯನ ಮಾಡಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ನಿರ್ದೇಶಕ, ಚಿತ್ರಕಥೆಗಾರ, ಸಂಭಾಷಣಕಾರರಾಗಿಯೂ ಗುರುತಿಸಿಕೊಂಡಿದ್ದಾರೆ. ಕೆಂಡಸಂಪಿಗೆ ಅಂತರ್ಜಾಲ ಪತ್ರಿಕೆಯಲ್ಲಿ ಅಂಕಣವಾಗಿ ಪ್ರಕಟಗೊಂಡ 'ರಸ್ತೆ ನಕ್ಷತ್ರ' ಇವರ ಮೊದಲ ಕೃತಿ, ಕರ್ನಾಟಕ ರಾಜ್ಯದ ಮಲ ಹೊರುವವರ ಕುರಿತ ಅಧ್ಯಯನ ಮತ್ತು ಮೀಡಿಯಾ ಆಕ್ಟಿವಿಸಂ ಮೂಲಕ ಅದನ್ನು ಜಗತ್ತಿನೆದುರು ಬಯಲಿಗೆಳೆದುದಕ್ಕಾಗಿ ...
READ MORE