‘ಇಹದ ತಳಹದಿ’ ಶುಭಶ್ರೀ ಭಟ್ಟ ಅವರ ಅಂಕಣ ಬರಹಗಳ ಸಂಕಲನವಾಗಿದೆ. ಇದಕ್ಕೆ ಭವ್ಯ ಬೊಳ್ಳೂರು ಅವರ ಬೆನ್ನುಡಿ ಬರಹವಿದೆ; ಶುಭಶ್ರೀ ಭಟ್ಟ ಅವರ ಲೇಖನಗಳಲ್ಲಿ ವಿಶೇಷವಾಗಿ ಸೆಳೆಯುವುದು ಭಾಷೆ, ಬರವಣೆಗೆಯ ಶೈಲಿ. ಪ್ರತಿಯೊಂದು ಲೇಖನವೂ ನಿರಾಯಾಸವಾಗಿ ಓದಿಸಿಕೊಂಡು ಹೋಗುತ್ತದೆ. ಮೊದಲ ಲೇಖನ ರೇಡಿಯೋ ಎಂಬ ಪುಟ್ಟ ಪೆಟ್ಟಿಗೆಯ ಜಗತ್ತಿನಲ್ಲಿ, ರೇಡಿಯೋವನ್ನು ರೂಪಕವಾಗಿ ಇಟ್ಟುಕೊಂಡೇ ಅಮ್ಮನ ಒಳಗುದಿಯನ್ನು ನಾಜೂಕಾಗಿ ಹರವಿಟ್ಟ ಬಗೆಯಂತೂ ಹೃದಯಸ್ಪರ್ಶಿ. ಕವಿ ಮನಸ್ಸುಳ್ಳವರಿಗೆ ಮಲ್ಲಿಗೆಯೆಂದರೆ ಅದು ಬರಿ ಹೂವಲ್ಲ, ಅದೊಂದು ಕನಸು, ಏಕಾಗ್ರತೆ ಎನ್ನುವ ಸತ್ಯ ಇಲ್ಲಿ ಗೋಚರಿಸುತ್ತದೆ. ಎಳೇ ಕಾಗದದೆಲೆಯ ಗೀಟು, ಅವರವರ ಬೆಟ್ಟದಲಿ ಕಲ್ಲುಂಟು ಮುಳ್ಳುಂಟು, ಗಂಡಸಿಗೂ ಗೊತ್ತಾಗಲಿ ಗೌರಿ ದುಃಖ ಲೇಖನಗಳು, ಇವರ ಸೂಕ್ಷ್ಮತೆಗೆ ಹಿಡಿದ ಕೈಗನ್ನಡಿ. ವಸ್ತು-ವಿಷಯವನ್ನು ಅನುಭವದ ಪಾಕದಲ್ಲಿ ಕರಗಿಸಿ, ಸಮಾಜದ ವೈರುಧ್ಯತೆಗೆ ಬೆಟ್ಟು ಮಾಡಿ ತೋರಿಸುವ ಗಟ್ಟಿತನವನ್ನು ಇದರಲ್ಲಿ ಕಾಣಬಹುದು. ಇಲ್ಲಿ ಸ್ತ್ರೀವಾದಿ ದೃಷ್ಟಿಕೋನದ ಬದಲು ಸ್ತ್ರೀಯ ದೃಷ್ಟಿ ಕಾಣಸಿಗುತ್ತದೆ. ಎಲ್ಲೂ ಏಕತಾನತೆ ಮೂಡದಂತೆ, ಯಾವುದೇ ಸಿದ್ಧಾಂತಕ್ಕೆ ಅಂಟಿಕೊಳ್ಳದಂತೆ, ಮನುಷ್ಯ ಸಹಜ ಭಾವನೆಗಳಿಗೆ ತಕ್ಕನಾಗಿ, ವಿಚಾರವನ್ನು ಪ್ರಸ್ತುತಪಡಿಸಿರುವುದನ್ನು ಈ ಕೃತಿಯಲ್ಲಿ ಕಾಣಬಹುದು.
ಶುಭಶ್ರೀ ಭಟ್ಟ ಮೂಲತಃ ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನವರು. ಪ್ರಸ್ತುತ ಶೃಂಗೇರಿಯಲ್ಲಿ ನೆಲೆಸಿರುವ ಇವರು ವೃತ್ತಿಯಲ್ಲಿ ಸಾಫ್ಟವೇರ್ ಇಂಜಿನೀಯರ್ ಆಗಿದ್ದಾರೆ.ಅಜ್ಜಿ-ಅಪ್ಪನಿಂದ ಬಂದ ಓದು ಬರಹದ ಆಸಕ್ತಿಯನ್ನು ಬೆಳೆಸಿಕೊಂಡು ಬಂದಿದ್ದಾರೆ. ರಾಜ್ಯದ ಅನೇಕ ದಿನಪತ್ರಿಕೆ, ವಾರಪತ್ರಿಕೆ, ಮಾಸಪತ್ರಿಕೆಯಲ್ಲಿ ಇವರ ಲೇಖನಗಳು, ಕಥೆಗಳು ಪ್ರಕಟಗೊಂಡಿವೆ. ಕೃಷ್ಣನ ಬಗ್ಗೆ ಅಪಾರ ಒಲವು ಹೊಂದಿದ್ದು,ಇತ್ತೀಚಿಗೆ ಗೋಕುಲ ದಿನಗಳನ್ನು ಮರುಸೃಷ್ಟಿಸುವ ಉದ್ದೇಶದಿಂದ ಕೃಷ್ಣ-ರಾಧೆಯ ಕುರಿತಾದ ಕನ್ನಡದ ಹಲವು ಭಾವಗೀತೆಗಳಿಗೆ ದೃಶ್ಯಕಾವ್ಯವನ್ನು ಕಟ್ಟಿಕೊಡುವ ಹೊಸ ಪ್ರಯತ್ನವಾಗಿ Tale Of Parijatha ಎಂಬ ತಮ್ಮದೇ ಯೂಟ್ಯೂಬ್ ಚಾನೆಲ್ ಕಟ್ಟಿಕೊಂಡು ಸಕ್ರಿಯರಾಗಿದ್ದಾರೆ. ಕೃತಿ : ಹಿಂದಿನ ನಿಲ್ದಾಣ ...
READ MORE