“ಮುಳುಗಡೆಯ ನೆನಪುಗಳು” ಅಂಕಣಗಳ ಸಂಗ್ರಹ. ಕೊನೆಯ ಲೇಖನ “ಮುಳುಗಡೆ ಎಂಬ ಶಾಪ ಯಾರಿಗೂ ಬೇಡ”, ಈ ಲೇಖನದ ಕೊನೆಯಲ್ಲಿ ತಾವು ಬಿಟ್ಟು ಬಂದ ಹಳ್ಳಿಗೆ ಅನೇಕ ವರ್ಷಗಳ ನಂತರ ಹೋದಾಗ ಅಲ್ಲಿನವರೆಲ್ಲ ತೋರಿಸುವ ಪ್ರೀತಿ, ಅಭಿಮಾನ, ಆದರ ಕಂಡು ಕರಗುವ ಪ್ರಭಾಕರ ಕಾರಂತರು “ನಮ್ಮನ್ನು ನಮ್ಮೂರಿನಿಂದಲೇ ದೂರ ಮಾಡಿದ ಮುಳುಗಡೆ ಎಂಬ ಶಾಪ ಇನ್ಯಾರಿಗೂ ಬೇಡವೇ ಬೇಡ,” ಎಂದು ಮರುಗುತ್ತಾರೆ. ಮುಳುಗಡೆಯಿಂದಾಗಿ ಪಲ್ಲಟಗೊಂಡು, ತಮ್ಮೆಲ್ಲ ಬೇರುಗಳನ್ನು ಕಿತ್ತುಕೊಂಡು ಹೋಗಿ ಕಾಣದ ಊರಿನಲ್ಲಿ ಪುನಃ ಹೊಸದಾಗಿ ಬೇರೂರಿಕೊಂಡು ಹೊಸ ಬದುಕನ್ನು ಕಟ್ಟಿಕೊಳ್ಳುವವರ ಕಷ್ಟ ಕೋಟಲೆಗಳನ್ನು ಸಮೀಪದಿಂದ ನೋಡಿರುವುದರಿಂದ ಕಾರಂತರು ವಿಷಾದದಿಂದ ಹೇಳುವಂತೆಯೇ ಮುಳುಗಡೆ ಒಂದು ಅಸಹಿತ ಎನ್ನುವ ಭಾವಕ್ಕೆ ’ಮುಳುಗಡೆಯ ನೆನಪುಗಳು” ಹತ್ತಿರವಾಗುತ್ತದೆ.
ಪ್ರಭಾಕರ ಕಾರಂತರು ಸಾಮಾಜಿಕ ಕಾರ್ಯಕರ್ತರಾಗಿ, ಪತ್ರಕರ್ತರಾಗಿ, ಸಹೃದಯೀ ಸಾಹಿತ್ಯ ಪ್ರೇಮಿಯಾಗಿ ಬೆಳೆದವರು. ಪಲ್ಲಟಗೊಂಡ ಬದುಕು, ಆಗಿನ ತುಮುಲಗಳು, ಜೊತೆಗೆ ಅವರ ಬಹುಮುಖಿ ಚಟುವಟಿಕೆಗಳು ಅವರ ಅನುಭವದ ಹರವನ್ನು, ಆಳವನ್ನು ಹೆಚ್ಚಿಸಿದೆ. ಹೊಸಕೊಪ್ಪದಂತ ಪುಟ್ಟ ಹಳ್ಳಿಯಲಲ್ಲಿ ಜನಿಸಿದ ಅವರು ಹಿಡಿದು ಕಗ್ಗಾಡಿನ ನಡುವಿನ ಗೀರ್ಲುವಿನ ಹಳ್ಳಿಗನೊಬ್ಬನಾಗಿ ಬಾಳಿದರು. ಎಲ್ಲರ ಬಳಿಯೂ ಯಾವುದೇ ಅಹಂಕಾರ ಅಥವಾ ಕೀಳರಿಮೆಗಳಿಲ್ಲದೇ ಒಡನಾಡಿದ್ದಾರೆ. ಅವರ ಬದುಕಿನಲ್ಲಿನ ಪ್ರಾಮಾಣಿಕತೆ, ಉತ್ತಮ ಸಾಮಾಜಿಕ ಬದುಕಿನ ಬಗ್ಗೆ ಅವರಿಗಿರುವ ತೀವ್ರ ಕಳಕಳಿ, ನಿಷ್ಠೆಗಳು ಅವರ ಬರಹಗಳಲ್ಲೂ ಸಹಜವಾಗಿ ಬಂದಿದೆ. ’ಶೀರ್ನಾಳಿ, ಬೇರು ಪ್ರೀತಿ, ವಿಮರ್ಶಕರ ಅಧ್ವಾನಗಳು’ ಅವರ ಕೃತಿಗಳು. ...
READ MORE