‘ಕಾಲ ಪಲ್ಲಟ’ ಕೃತಿಯು ಶ್ರೀಧರ ಬಳಗಾರ ಅವರ ಅಂಕಣ ಬರಹಗಳ ಸಂಕಲನ. ಈ ಕೃತಿಯ ಉದ್ದಕ್ಕೂ ಧ್ಯಾನಿಸುವ ವಿಚಾರವೆಂದರೆ, ಒಂದು ಕಾಲದಲ್ಲಿ ವಾಸ್ತವವಾಗಿದ್ದ ಕೃಷಿ ಆಧಾರಿತ ಜೀವನ ಕ್ರಮವನ್ನು.ಅಂತಹ ಒಂದು ಗಟ್ಟಿಯಾದ ಮೌಲ್ಯ ವ್ಯವಸ್ಥೆಯೂ ಪಲ್ಲಟವಾದುದ್ದನ್ನು ವಸ್ತುನಿಷ್ಠವಾಗಿ ದಾಖಲಿಸುವ ಪ್ರಯತ್ನವನ್ನು ಲೇಖಕರು ಇಲ್ಲಿ ಮಾಡುತ್ತಾರೆ. ಲೇಖಕ ವಿಶಿಷ್ಠ ಚಿಂತನೆಗಳ ಸಂಕಲನವಾಗಿದೆ.
ಕೃತಿಗೆ ಮುನ್ನುಡಿ ಬರೆದಿರುವ ಸಾಹಿತಿ ಡಾ. ರಾಜೇಂದ್ರ ಚೆನ್ನಿ ಅವರು, ಶ್ರೀಧರ ದಾಖಲೆ ಮಾಡುತ್ತಿರುವುದು ಅವರು ಕಂಡು ಅನುಭವಿಸಿದ ಮತ್ತು ಈಗ ತೀವ್ರ ಹಂಬಲದಿಂದ ನೆನಪಿಸಿಕೊಳ್ಳುವ ಕೃಷಿ ಆಧಾರಿತ ಜೀವನಕ್ರಮವನ್ನು, ಕೃಷಿ ಎಂದಿಗೂ ವ್ಯವಸಾಯವಾಗದೇ ಇಡಿಯಾದ, ಸಾವಯವವಾದ, ಸಮಗ್ರವಾದ ಜೀವನ ಶೈಲಿಯಾಗಿದ್ದ ಕಾಲವನ್ನು, ಇದು ತನ್ನ ಮನೆ, ಕುಟುಂಬ, ಜಾನುವಾರುಗಳು, ಗದ್ದೆ, ತನ್ನ ಸಮುದಾಯ ಇವುಗಳನ್ನೇ ನೆಚ್ಚಿಕೊಂಡು ಅದಕ್ಕೆ ಆಗುವಷ್ಟು ಮಾತ್ರ ಉತ್ಪಾದನೆ ಮಾಡಿಕೊಂಡು, ಹೆಚ್ಚುವರಿಯ ಕನಸು ಕಾಣದ ರೈತನ ಜೀವನಕ್ರಮವಾಗಿತ್ತು. ಬಹುಶಃ ಅನೇಕರಿಗೆ ಇದು ಏರಿಳಿತವಿಲ್ಲದ, ಸ್ಥಗಿತಗೊಂಡ ಜೀವನವಾಗಿ ಕಂಡು ನಿರಾಸೆ ಹುಟ್ಟಿಸುವಂತಿತ್ತು. ಆದರೆ, ಆಧುನಿಕತೆ, ಕೃಷಿಯಲ್ಲಿ ಕ್ರಾಂತಿ ತರುವ ಭರಾಟೆಯಲ್ಲಿ ರಾಸಾಯನಿಕ ಗೊಬ್ಬರಗಳು, ಸಾಲ, ಹೈಬ್ರಿಡ್ ಬೀಜಗಳು. ಹಣ ಮತ್ತು ಆಮಿಷಗಳನ್ನು ಒಡ್ಡಿದ ಸರಕಾರಗಳು ಮತ್ತು ಇಡೀ ಈ ಚಾರಿತ್ರಿಕ ಪ್ರತಿಕ್ರಿಯೆಯ ಹಿಂದಿರುವ ಬಂಡವಾಳಗಳಿಂದಾಗಿ ಹುಟ್ಟಿಕೊಂಡ ಹೊಸ ಜೀವನಕ್ರಮದ ವಿಕಾರಗಳಿಂದ ಅಘಾತಗೊಂಡಿರುವ ಮನಸ್ಸುಗಳಿಗೆ ಆ ಹಿಂದಿನ ಜಗತ್ತೇ ಅಪ್ಯಾಯಮಾನವಾಗಿ ಕಾಣುತ್ತದೆ. ಈ ಕೃತಿ ಒಂದು ಗಟ್ಟಿಯಾದ ಮೌಲ್ಯ ವ್ಯವಸ್ಥೆಯು ಪಲ್ಲಟವಾದದ್ದನ್ನು ವಸ್ತುನಿಷ್ಠವಾಗಿ ದಾಖಲಿಸುವ ಪ್ರಯತ್ನಮಾಡಿದೆ’ ಎಂದು ಅಭಿಪ್ರಾಯಪಟ್ಟಿದ್ದಾರೆ.
ಲೇಖಕ ಶ್ರೀಧರ ಬಳಗಾರ ಅವರ ಊರು ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರದ ಸಮೀಪದಲ್ಲಿರುವ ಬಳಗಾರ. ಕುಮಟಾದ ಕಮಲಾ ಬಾಳಿಗಾ ಶಿಕ್ಷಣ ಮಹಾವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿರುವ ಅವರು, ಅಧೋಮುಖ', 'ಮುಖಾಂತರ', `ಇಳೆ ಎಂಬ ಕನಸು', 'ಒಂದು ಫೋಟೋದ ನೆಗೆಟಿವ್', 'ಅಮೃತಪಡಿ' ಎಂಬ ಕಥಾ ಸಂಕಲನಗಳನ್ನು ಪ್ರಕಟಿಸಿದ್ದಾರೆ. ಜೊತೆಗೆ 'ಕೇತಕಿಯ ಬನ', 'ಆಡುಕಳ' ಎಂಬ ಕಾದಂಬರಿಗಳು, 'ರಥ ಬೀದಿ' ಮತ್ತು 'ಕಾಲಪಲ್ಲಟ' ಅಂಕಣ ಬರಹಗಳು, ಹಾಗೇ ಕೆಲವು ಕಥೆಗಳು ಇಂಗ್ಲಿಷ್, ತಮಿಳು, ಹಿಂದಿಗೆ ಭಾಷಾಂತರಗೊಂಡಿವೆ. ಇನ್ನು ಕರ್ನಾಟಕ ವಿಶ್ವವಿದ್ಯಾಲಯ ಮತ್ತು ರಾಣಿ ಚನ್ನಮ್ಮ ವಿಶ್ವವಿದ್ಯಾಲಯ, ಬೆಳಗಾವಿಯ ಪದವಿ ಪಠ್ಯಕ್ಕೆ (ಕನ್ನಡ) ಸೇರ್ಪಡೆಯಾಗಿವೆ. ...
READ MORE