'ಅನಾಮಧೇಯ ಅಧ್ಯಾಪಕನ ಆತ್ಮಚರಿತ್ರೆ' ಆರತಿ ಪಟ್ರಮೆ ಅವರ ರಚನೆಯ ಕಡಂಬಿಲ ಭೀಮ ಭಟ್ಟರ ಜೀವನ ಕಥನವಾಗಿದೆ. ಬಡತನದಲ್ಲೇ ಹುಟ್ಟಿ ಬೆಳೆದು, ಸಣ್ಣ ವಯಸ್ಸಿನಲ್ಲೇ ದೊಡ್ಡ ಕುಟುಂಬದ ಜವಾಬ್ದಾರಿ ಹೊತ್ತುಕೊಂಡು, ಪ್ರತಿದಿನ ಸರಾಸರಿ ಹತ್ತು ಮೈಲಿ ಕಾಲ್ನಡಿಗೆ ಪ್ರಯಾಣ ಮಾಡುತ್ತಾ ನಲ್ವತ್ತು ವರ್ಷ ಅಧ್ಯಾಪನ ಮಾಡಿದ ಕಡಂಬಿಲ ಭೀಮ ಭಟ್ಟರ ಆತ್ಮಕಥೆಯ ಪುಟಗಳಿವು. ಇವು ಅಂತಿಮವಾಗಿ ಒಬ್ಬ ಶಿಕ್ಷಕನ ಬದುಕಿನ ಪುಟಗಳಾಗಿ ಉಳಿಯುವುದಿಲ್ಲ, ಒಂದು ತಲೆಮಾರಿನ ಸಾಮಾಜಿಕ ಇತಿಹಾಸ, ಶೈಕ್ಷಣಿಕ ವ್ಯವಸ್ಥೆಯ ಚಿತ್ರಣಗಳಾಗಿ ನಮ್ಮೆದುರು ತೆರೆದುಕೊಳ್ಳುತ್ತವೆ. ಇಲ್ಲಿ ಪ್ರಸಿದ್ಧಿಯ ಕಥನವಿಲ್ಲ, ಆತ್ಮಪ್ರಶಂಸೆಯ ಲವಲೇಶವೂ ಇಲ್ಲ. ‘ಬದುಕು ಇರುವುದೇ ಸಂಪಾದನೆಗೆ, ಇಲ್ಲಿ ಪ್ರಾಮಾಣಿಕತೆ, ಆತ್ಮಗೌರವ, ವೃತ್ತಿನಿಷ್ಠೆ ಎಂದೆಲ್ಲ ಮಾತನಾಡುವುದೇ ಒಂದು ದೊಡ್ಡ ತಮಾಷೆ’ ಎಂಬ ಆಧುನಿಕ ಕಾಲದ ಚಿಂತನೆಯ ನಡುವೆ ‘ಅನಾಮಧೇಯ ಅಧ್ಯಾಪಕನ ಆತ್ಮಚರಿತ್ರೆ’ ಒಂದು ಹೊಸ ಸಾಧ್ಯತೆಯನ್ನು ತೆರೆದಿಡಬಲ್ಲುದು.
ಲೇಖಕಿ ಆರತಿ ಪಟ್ರಮೆ ವೃತ್ತಿಯಲ್ಲಿ ಇಂಗ್ಲಿಷ್ ಉಪನ್ಯಾಸಕರು; ಪ್ರವೃತ್ತಿಯಲ್ಲಿ ಯಕ್ಷಗಾನ ಕಲಾವಿದೆ ಹಾಗೂ ಲೇಖಕಿ. ಕರ್ನಾಟಕ ಯಕ್ಷಗಾನ ಅಕಾಡೆಮಿಯ ಸದಸ್ಯರು. ಮೂಲತಃ ದಕ್ಷಿಣ ಕನ್ನಡದವರು. ಉಜಿರೆಯ ಎಸ್ ಡಿ ಎಂ ಕಾಲೇಜಿನಲ್ಲಿ ಪತ್ರಿಕೋದ್ಯಮ, ಇಂಗ್ಲಿಷ್ ಸಾಹಿತ್ಯ ಹಾಗೂ ಮನಃಶಾಸ್ತ್ರದಲ್ಲಿ ಬಿಎ ಪದವಿ ಪೂರೈಸಿ ಮಂಗಳೂರು ವಿಶ್ವವಿದ್ಯಾನಿಲಯದಿಂದ 2005ರಲ್ಲಿ ಇಂಗ್ಲಿಷ್ ಎಂ.ಎ. ಪದವಿ ಪಡೆದರು. ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದಿಂದ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ ಎಂ.ಎ. ಪದವಿಯನ್ನೂ ಪಡೆದಿದ್ದಾರೆ. ‘ವಿಜಯ್ ಟೈಮ್ಸ್’ ಇಂಗ್ಲಿಷ್ ದೈನಿಕದಲ್ಲಿ ಉಪಸಂಪಾದಕಿಯಾಗಿ ವೃತ್ತಿಜೀವನವನ್ನು ಆರಂಭಿಸಿ, ಮುಂದೆ ಉಜಿರೆ ಎಸ್ ಡಿ ಎಂ ಕಾಲೇಜಿನಲ್ಲಿ ...
READ MORE