ಹೆಚ್ ಪುಷ್ಪಲತಾ ಚಂದ್ರಯ್ಯನವರ ಬದುಕು-ಬರಹದ ನೆನಪಿಗಾಗಿ ಈ ಕೃತಿ ರಚಿತವಾಗಿದೆ. ಭದ್ರಾವತಿಯ ಸಾಮಾಜಿಕ ಹಾಗು ಸಾಂಸ್ಕೃತಿಕ ಮನಸ್ಸುಗಳಲ್ಲಿ ಅವರು ಇನ್ನೂ ಜೀವಂತವಾಗಿಯೇ ಇದ್ದಾರೆ! ಆ ನೆನಪನ್ನು ಶಾಶ್ವತವಾಗಿಸುವ ನಿಟ್ಟಿನಲ್ಲಿ 'ಪುಷ್ಪಗಂಧ' ಕೃತಿ ಮೂಡಿ ಬಂದಿದೆ.
ಪುಷ್ಪಲತಾ ಸಾಹಿತ್ಯ, ಸಂಗೀತ, ರಂಗಭೂಮಿ ಮೊದಲಾದ ಆಸಕ್ತಿಗಳನ್ನು ಹವ್ಯಾಸಗಳನ್ನಾಗಿ ಮಾಡಿಕೊಂಡಿದ್ದರು. ಆದರೆ ಸಮಾಜಪರವಾದ ಕಾರ್ಯಗಳನ್ನು ಮಾತ್ರ ಜೀವನದ ಅವಿಭಾಜ್ಯ ಅಂಗ ಎಂದೇ ಸ್ವೀಕರಿಸಿದ್ದರು. ಆ ನಿಟ್ಟಿನಲ್ಲಿ ಸದಾ ಕಾರ್ಯ ಪ್ರವೃತ್ತರಾಗಿರುತ್ತಿದ್ದರು. ಅನ್ನ ಕೊಡುವ ಸರ್ಕಾರಿ ನೌಕರಿಯನ್ನು ಭಕ್ತಿ ಶ್ರದ್ದೆ ಪ್ರಾಮಾಣಿಕತೆಯಿಂದ ನಿರ್ವಹಿಸುತ್ತಲೆ, ಬದುಕನ್ನು ಕಟ್ಟಿಕೊಡುವ ಸಾಮಾಜಿಕ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳೊಂದಿಗೆ ತನ್ಮಯರಾಗಿ ಒಡನಾಡುತ್ತಿದ್ದರು. ಆದರ, ಆತ್ಮೀಯತೆಗಳು ಅವರಲ್ಲಿ ಸ್ವಭಾವ ಸಹಜವಾಗಿಯೆ ಬಂದಿದ್ದವು
ಪುಷ್ಪಲತಾ ಅವರ ವ್ಯಕ್ತಿತ್ವವನ್ನು ಕಟ್ಟಿಕೊಡುವ ಇನ್ನೂ ಅನೇಕ ಸಂಗತಿಗಳನ್ನು ಈ ಕೃತಿಯ ಲೇಖನಗಳು ಸಾರಿ ಸಾರಿ ಹೇಳುತ್ತವೆ. ಈ ಕೃತಿಯನ್ನು ಪುಷ್ಪಲತಾ ಅವರ ಬದುಕು ಬರಹಗಳನ್ನು ಪರಿಚಯಿಸಿ ಕೊಡುವಂತೆ ಅರ್ಥಪೂರ್ಣವಾಗಿ ರೂಪಿಸಲಾಗಿದೆ. ಇಲ್ಲಿಯ ಬರಹಗಳು ಪುಷ್ಪಲತಾ ಅವರು ತಮಗಿದ್ದ ಸೀಮಿತ ಅವಕಾಶಗಳನ್ನು ಮತ್ತು ಪರಿಮಿತ ಸೌಲಭ್ಯಗಳನ್ನು ಬಳಸಿಕೊಂಡು ಹೇಗೆ ಉತ್ತಮವಾದ ಕೆಲಸಗಳನ್ನು ಮಾಡಿದರು ಎಂಬುದನ್ನು ಸರಳವಾಗಿ ತಿಳಿಸಿಕೊಡುತ್ತದೆ.