‘ಪ್ರಯೋಗಶೀಲ ಶಿಕ್ಷಣ ಚಿಂತಕ ಗಿಜುಭಾಯ್ ಬಧೇಕ’ ಕೃತಿಯು ಡಾ. ಮಹಾಬಲೇಶ್ವರ ರಾವ್ ಅವರ ಗಿಜುಭಾಯ್ ಬಧೇಕ ಕುರಿತ ಜೀವನಚರಿತ್ರೆಯಾಗಿದೆ. 20ನೆಯ ಶತಮಾನದ ಪೂರ್ವಾರ್ಧದಲ್ಲೇ ಮಕ್ಕಳ ಶಿಕ್ಷಣದ ಬಗ್ಗೆ ಹೊಸ ವಿಚಾರ ಬಯಸಿ ಕ್ರಾಂತಿಕಾರಿ ಹೆಜ್ಜೆಗಳನ್ನಿಟ್ಟು ಬೋಧನ ಕ್ರಮವನ್ನೇ ಬದಲಿಸಿದವರು ಶಿಕ್ಷಣ ಚಿಂತಕ ಗಿಜುಭಾಯ್ ಬಧೇಕ. ವಿಪುಲ ಬಾಲ ಸಾಹಿತ್ಯವನ್ನೂ ಸೃಷ್ಟಿಸಿ ಮಕ್ಕಳ ಮನ ಗೆದ್ದು ಪರಿವರ್ತನ ಪಥದಲ್ಲಿ ಸಾಗಿ ಹಲವು ಅಡೆತಡೆಗಳು ಬಂದರೂ ಧೃತಿಗೆಡದೆ ಯಶಸ್ಸನ್ನು ಗಳಿಸಿದರು. ಪಠ್ಯ ಪುಸ್ತಕಗಳನ್ನಷ್ಟೇ ತರಗತಿಯಲ್ಲಿ ಬೋಧಿಸುವ ಅಂದಿನ ಶಿಕ್ಷಣ ಪದ್ಧತಿಗೆ ವಿರುದ್ಧವಾಗಿ ನಡೆದು ಮಕ್ಕಳ ಸೃಜನಶೀಲ ಚಟುವಟಿಕೆ ಗಳಿಗೆ ಪ್ರೋತ್ಸಾಹ ನೀಡಿದರು. ಈ ಕೃತಿ ಅವರ ಬದುಕಿನ ಸಮಗ್ರ ಚಿತ್ರಣವನ್ನು ನೀಡುತ್ತದೆ. ಕೃತಿಯ ಪರಿವಿಡಿಯ ವಿವರ: ‘ಮೂಛಾಲಿ ಮಾ’ನ ಕತೆ, ಪರಿವರ್ತನ ಯಾತ್ರೆ, ಹೊಸಯುಗದ ಪರಿಹಾರ, ಇದು ಬರಿ ಹಗಲುಗನಸಲ್ಲೋ ಅಣ್ಣಾ!, `ದಿವಾಸ್ವಪ್ನ’ದ ಸಂದೇಶವೇನು?, ಕಥಾನಿರೂಪಣ ಕುಶಲಿ, ಕನಸು ನನಸುಗಳ ನಡುವೆ, ಬಾಲ ಸಾಹಿತ್ಯ ನಿರ್ಮಾತೃ, ದೂರ ಬಹುದೂರ, ಅನುಬಂಧ-1 ಜೀವನ ರೇಖೆ, ಅನುಬಂಧ-2 ಕೃತಿಗಳು, ಅನುಬಂಧ-3 ಬಾಲದರ್ಶನದಿಂದ, ಅನುಬಂಧ-4ಮಕ್ಕಳಿಗಾಗಿ ಗಿಜುಭಾಯ್ ಕತೆಗಳು, ಅನುಬಂಧ- 5 ತಂದೆತಾಯಿಗಳಾಗುವುದು ಸುಲಭವಲ್ಲ, ಅನುಬಂಧ-6 ಆಚಾರ ಸಂಹಿತೆ, ಗ್ರಂಥಋಣ.
ಮಹಾಬಲೇಶ್ವರ ರಾವ್ ಅವರು 1952ರಲ್ಲಿ ಉಡುಪಿ ಜಿಲ್ಲೆಯ ಮಣೂರಿನಲ್ಲಿ ಜನಿಸಿದರು. ಎಂ.ಎ., ಎಂ.ಎಡ್ ಮತ್ತು ಪಿಎಚ್.ಡಿ. ಪದವೀಧರರಾದ ಅವರು ಆರು ವರ್ಷ ಪ್ರೌಢಶಾಲಾ ಕನ್ನಡ ಶಿಕ್ಷಕರಾಗಿ, ಮೂರು ವರ್ಷ ಆಕಾಶವಾಣಿಯ ಭದ್ರಾವತಿ ಹಾಗೂ ಮಂಗಳೂರು ಕೇಂದ್ರಗಳಲ್ಲಿ ಪ್ರಸಾರಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದಾರೆ. ಮಹಾಬಲೇಶ್ವರ ರಾವ್ ಕಳೆದ ನಾಲ್ಕು ದಶಕಗಳಿಂದ ಕನ್ನಡ ಭಾಷಾ ಬೋಧನೆ, ಬರವಣಿಗೆ, ಭಾಷಣ, ಸಾಹಿತ್ಯ ಮೊದಲಾದ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಲೇಖಕರಾಗಿ, ಅನುವಾದಕರಾಗಿ, ಅಂಕಣಕಾರರಾಗಿ ತಮ್ಮದೇ ಛಾಪು ಮೂಡಿಸಿರುವ ಅವರು 14ವರ್ಷ ಪ್ರಾಂಶುಪಾಲರಾಗಿ ಕಾರ್ಯ ನಿರ್ವಹಿಸಿದ್ದಾರೆ. ’ಉದಯವಾಣಿ’, ’ಪ್ರಜಾವಾಣಿ’, ’ತರಂಗ’, ’ಹೊಸತು’ ಮೊದಲಾದ ಕನಡ ದಿನಪತ್ರಿಕೆ, ಮ್ಯಾಗಸೈನ್ಗಳಲ್ಲಿ ಅವರ ನೂರಾರು ಲೇಖನಗಳನ್ನು ಪ್ರಕಟಣೆ ಕಂಡಿವೆ. ...
READ MORE