‘ಶತಮಾನಪುರುಷ ಐನ್ ಸ್ಟೈನ್’ ಪಾಲಹಳ್ಳಿ ವಿಶ್ವನಾಥ್ ಅವರ ಕೃತಿ. ಯುವಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಐನ್ಸ್ಟೈನ್ರ ಮಾನವತೆಯ ಲಕ್ಷಣಗಳು ತಿಳಿಯಬೇಕು, ಅದನ್ನವರು ಮೈಗೂಡಿಸಿಕೊಳ್ಳಬೇಕು. ಆರೋಗ್ಯಕರ, ಪ್ರಜಾಪ್ರಭುತ್ವವಾದಿ ಸಮಾಜ ನಿರ್ಮಾಣ ಮತ್ತು ಸ್ಥಿರತೆಗೆ ಅದು ಭದ್ರ ಬುನಾದಿಯಾಗುತ್ತದೆ. ವಿಜ್ಞಾನದಲ್ಲಿ ಆಸಕ್ತಿ ಮತ್ತು ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳಲು ಸಹಾ ಐನ್ಸ್ಟೈನ್ ಪ್ರೇರಕ ಶಕ್ತಿ, ಅವರು ಎಂದೂ ಬತ್ತದ ಸೆಲೆ. ಅಂಥವರಿಂದ ಪಡೆದ ಸ್ಫೂರ್ತಿಯು ಚಿರಂತನವಾಗಿ ಉಳಿಯುತ್ತದೆ....” ಖ್ಯಾತ ಹಿರಿಯ ವಿಜ್ಞಾನಿ, ಸಂಶೋಧಕರಾದ ಈ ಗ್ರಂಥದ ಲೇಖಕರು ಭೌತಶಾಸ್ತ್ರದಲ್ಲಿ ಪ್ರಬುದ್ಧರು ಮತ್ತು ಓದುಗರಿಗೆ ಕ್ಲಿಷ್ಟವಾದ ವಿಚಾರಗಳನ್ನು ಸುಲಭಗ್ರಾಹ್ಯವಾಗುವಂತೆ ಮುಟ್ಟಿಸುವುದರಲ್ಲಿ ನಿಷ್ಣಾತರು.
ಇಂತಹ ಗ್ರಂಥ ರಚನೆಗೆ ಕೈಹಾಕಲು ಅವರಿಗಿಂತಲೂ ಹೆಚ್ಚು ಸೂಕ್ತವಾದ ವ್ಯಕ್ತಿಗಳು ಅಲಭ್ಯವೆಂದೇ ಹೇಳಬೇಕು. ಕೃತಿಯ ಲೇಖಕರಾದ ಹಿರಿಯ ಖಭೌತವಿಜ್ಞಾನಿ ಪ್ರೊ. ಪಾಲಹಳ್ಳಿ ವಿಶ್ವನಾಥ್ ಅವರು ತಮ್ಮ ಅಪಾರ ಅನುಭವದ ಲಾಭ ಕನ್ನಡ ಜನತೆಗೂ ದಕ್ಕಲೆಂದು ಜನಪ್ರಿಯ ಶೈಲಿಯಲ್ಲಿ ಅನೇಕ ಕೃತಿಗಳನ್ನು ರಚಿಸಿದ್ದಾರೆ. ಪ್ರಸ್ತುತ ಕೃತಿ, ಐನ್ಸ್ಟೈನ್ರ ಜೀವನದಲ್ಲಿ ಪ್ರಭಾವ ಬೀರಿದ ಕಳೆದ ಶತಮಾನದ ಯೂರೋಪಿನ ಪ್ರಬುದ್ಧ ಭೌತವಿಜ್ಞಾನಿಗಳ ಬಗ್ಗೆಯೂ ತಿಳಿಸಿರುವುದರಿಂದಾಗಿ, ಹೆಚ್ಚಿನ ಮಹತ್ವ ಪಡೆದಿದೆ.
ವಿಜ್ಞಾನ ಲೇಖಕ, ಅಂಕಣಕಾರ ಪಿ.ಆರ್. ವಿಶ್ವನಾಥ್ ಅವರು ಮೂಲತಃ ಬೆಂಗಳೂರಿನವರು. 1942ರಲ್ಲಿ ಜನಿಸಿದ ಪಿ.ಆರ್. ವಿಶ್ವನಾಥ್ ಅವರು ಪಾಲಹಳ್ಳಿ ವಿಶ್ವನಾಥ್ ಎಂದೇ ಪ್ರಸಿದ್ಧರಾದವರು. ಮೈಸೂರು ವಿಶ್ವವಿದ್ಯಾಲಯದಲ್ಲಿ ಎಂ.ಎಸ್.ಸಿ ಪೂರೈಸಿದ ಅವರು ಆ್ಯನ್ ಆರ್ಬರ್ ಮಿಶಿಗನ್ ವಿಶ್ವವಿದ್ಯಾಲಯದಲ್ಲಿ ಪಿಎಚ್.ಡಿ ಪಡೆದರು. ಆನಂತರ ಮುಂಬಯಿಯ ಟಾಟಾ ಮೂಲಭೂತ ಸಂಶೋಧನಾ ಸಂಸ್ಥೆ (ಟಿ.ಐ.ಎಫ್.ಆರ್)ಯಲ್ಲಿ ಭೌತಶಾಸ್ತ್ರ ಪ್ರಾಧ್ಯಾಪಕರಾಗಿ ವೃತ್ತಿ ಆರಂಭಿಸಿದರು. ಬೆಂಗಳೂರಿನ ಭಾರತೀಯ ಖಭೌತ ಸಂಸ್ಥೆ (ಐ.ಐ.ಎ) ಸಂದರ್ಶಕ ಪ್ರಾಧ್ಯಾಪಕರು; ಕ್ಯಾಲಿಫೋರ್ನಿಯ ಮತ್ತು ಮೇರಿಲ್ಯಾಂಡ್ ವಿಶ್ವವಿದ್ಯಾಲಯಗಳಲ್ಲಿ ಸಂದರ್ಶಕ ಪ್ರಾಧ್ಯಾಪಕರು, ಭಾರತ ಮತ್ತು ಅಮೆರಿಕದಲ್ಲಿ ಹಲವಾರು ಭೌತವಿಜ್ಞಾನ ಮತ್ತು ಖಗೋಳ ವಿಜ್ಞಾನದ ಪ್ರಯೋಗಗಳಲ್ಲಿ ಭಾಗಿಯಾಗಿದ್ದರು. ...
READ MORE