ಬಿ.ಜನಾರ್ದನ ಭಟ್ ಅವರ ಕವಿರಾಜಹಂಸ ಸಾಂತ್ಯಾರು ವೆಂಕಟರಾಜ ಕೃತಿಯು ವ್ಯಕ್ತಿ ಚಿತ್ರಣವಾಗಿದೆ. ಉಡುಪಿಯ ಸಾಂತ್ಯಾರು ವೆಂಕಟರಾಜ (೧೯೧೩-೧೯೮೮) ಅವರು ನವೋದಯ ಪಂಥಕ್ಕೆ ಸೇರಿದ ಒಬ್ಬ ಹಿರಿಯ ಕವಿ. ಕಾವ್ಯ ಕ್ಷೇತ್ರದ ಹಿರಿಮೆಗಾಗಿ ‘ಕವಿರಾಜ ಹಂಸ’ ಎಂದು ಕೀರ್ತಿವಂತರಾಗಿದ್ದ ವೆಂಕಟರಾಜರ ಹತ್ತಾರು ಕೃತಿಗಳು ಪ್ರಕಟವಾಗಿದ್ದರೂ ಅಪ್ರಕಟಿತವಾದ ಸಂಗ್ರಹಗಳೂ ಇವೆ. ಇವನ್ನೆಲ್ಲಾ ವಿವಿಧ ಮೂಲಗಳಿಂದ ಕಲೆ ಹಾಕಿ, ವ್ಯವಸ್ಥಿತವಾದ ರೀತಿಯಲ್ಲಿ ಅಧ್ಯಯನ ಮಾಡುವುದು ಶ್ರಮದ ಕೆಲಸವೇ. ಆದರೆ, ಆಗಬೇಕಾದ ಕೆಲಸ. ಅದನ್ನು ಸಕಾಲದಲ್ಲಿ, ಕ್ರಮವಾಗಿ ಮಾಡಿ, ಓದುಗರ ಮುಂದೆ ಇರಿಸಿರುವವರು ಜನಾರ್ದನ ಭಟ್ ಅವರು. ಸಾಹಿತ್ಯಾಭಿಲಾಷಿಗಳಿಗೆ ಮಾದರಿಯೂ, ಅಮೂಲ್ಯ ಆಕರವೂ ಆಗಿರುವ ಈ ಗ್ರಂಥ ಸಂಶೋಧನಾ ಬರಹದ ಶಿಸ್ತು, ಕ್ರಮಗಳನ್ನು ಉದ್ದಕ್ಕೂ ಅನುಸರಿಸಿದೆ. ವೆಂಕಟರಾಜರ ಬದುಕಿನ ವಿಸ್ತೃತ ಪರಿಚಯ, ಕಾವ್ಯ, ನಾಟಕಾದಿಗಳ ಅವಲೋಕನ ಗಳಲ್ಲದೆ ಅವರ ಕವಿತೆಗಳು ಹಾಗೂ ಸಂಪಾದಕೀಯ ಬರಹಗಳ ಪಟ್ಟಿ, ಕೆಲವು ಮಾದರಿ ಕವಿತೆ ಹಾಗೂ ಗದ್ಯ ಬರಹಗಳೂ ಇಲ್ಲಿ ಓದುಗನಿಗೆ ಲಭ್ಯವಾಗುತ್ತವೆ. ಸಂಪಾದಕೀಯ ಬರಹಗಳ ಮುಖ್ಯಾಂಶಗಳನ್ನೂ ಇಲ್ಲಿ ನೀಡಿದ್ದು, ಆ ಮೂಲಕ ವೆಂಕಟರಾಜರ ಬರಹಗಳ ಆಶಯ, ಧೋರಣೆಗಳನ್ನು ಗುರುತಿಸಲು ಸಾಧ್ಯವಾಗುತ್ತದೆ. ಮಾದರಿ ಕವಿತೆ ಹಾಗೂ ಗದ್ಯ ವೆಂಕಟರಾಜರ ಶೈಲಿ, ಮನೋಧರ್ಮಗಳ ಪರಿಚಯ ಮಾಡಿಕೊಡುತ್ತವೆ.
ಸಾಹಿತಿ ಡಾ. ಬಿ.ಜನಾರ್ದನ ಭಟ್ ಅವರದು ಬಹುಮುಖ ಪ್ರತಿಭೆ. ಅವರು ಕಾದಂಬರಿಕಾರರಾಗಿ, ಕಥೆಗಾರರಾಗಿ, ವಿಮರ್ಶಕರಾಗಿ, ಅಂಕಣಕಾರರಾಗಿ ತಮ್ಮ ಛಾಪನ್ನು ಮೂಡಿಸಿದ್ದಾರೆ. ಅವರ ಸಾಹಿತ್ಯಾನುಸಂಧಾನ ಬಹುಸೂಕ್ಷ್ಮವಾದುದು. ಬಹುಭಾಷಿಕ, ಬಹುಶ್ರುತ ವಿದ್ವಾಂಸರೂ ಸೃಜನಶೀಲ ಲೇಖಕರೂ ಆಗಿರುವ ಭಟ್ ಅವರದು ಸ್ಪೋಪಜ್ಞತೆಯ ಹಾದಿ. ತಮ್ಮ ಕೃತಿಗಳಲ್ಲಿ ಹೆಚ್ಚಿನ ಸ್ವಂತಿಕೆಯ ಛಾಪನ್ನು ಒತ್ತುತ್ತಾ ಬಂದಿರುವ ಡಾ. ಜನಾರ್ದನ ಭಟ್ ಅವರು ಸಮಕಾಲೀನ ಕನ್ನಡದ ಹೆಸರಾಂತ ಲೇಖಕರಲ್ಲಿ ಒಬ್ಬರು. ಭಟ್ ಅವರ ಹೆಚ್ಚಿನ ಕೃತಿಗಳು ಆಳ ಮತ್ತು ಸಂಕೀರ್ಣತೆಯನ್ನು ಹೊಂದಿರುವುದು ವಿಶೇಷ. ವಿದ್ವತ್ತು ಮತ್ತು ಸೃಜನಶೀಲತೆ ಎರಡನ್ನೂ ಮೈಗೂಡಿಸಿಕೊಂಡಿರುವ ಬೆಳ್ಮಣ ನ ಡಾ. ಬಿ.ಜನಾರ್ದನ ...
READ MORE