‘ನೆಲದ ಸಿರಿ’ ಮಾಜಿ ಮುಖ್ಯಮಂತ್ರಿ, ರಾಜಕಾರಣಿ ಎಸ್.ಎಂ. ಕೃಷ್ಣ ಅವರ ಜೀವನಗಾಥೆ. ಈ ಕೃತಿಯನ್ನು ಜಗದೀಶ್ ಕೊಪ್ಪ ಅವರು ನಿರೂಪಣೆ ಮಾಡಿದ್ದಾರೆ. ಕೃತಿಯ ಕುರಿತು ತಿಳಿಸುತ್ತಾ ‘ರಾಷ್ಟ್ರ ರಾಜಕಾರಣದಲ್ಲಿ ಒಬ್ಬ ಜನಪ್ರತಿನಿಧಿ ಸಾರ್ವಜನಿಕ ಬದುಕಿನಲ್ಲಿ ಹೇಗಿರಬೇಕೆಂದು ತೋರಿಸಿಕೊಟ್ಟವರಲ್ಲಿ ಶ್ರೀ ಎಸ್.ಎಂ.ಕೃಷ್ಣರವರು ಪ್ರಮುಖರು. ತಾವು ನಂಬಿದ ತತ್ವ, ಸಿದ್ದಾಂತಗಳ ಕುರಿತಾಗಿ ವೈಯಕ್ತಿಕ ಭಿನ್ನಾಭಿಪ್ರಾಯಗಳಿದ್ದರೂ ಸಹ ಎದುರಾಳಿ ಪಕ್ಷಗಳ ನಾಯಕರ ಜೊತೆ ಹೇಗೆ ನಡೆದುಕೊಳ್ಳಬಹುದು ಎಂಬುದಕ್ಕೆ ಕರ್ನಾಟಕ ರಾಜಕಾರಣದಲ್ಲಿ ಎಸ್.ನಿಜಲಿಂಗಪ್ಪ ಮಾದರಿಯಾಗಿದ್ದರು. ಅವರ ಮಾರ್ಗದಲ್ಲಿ ನಡೆದ ರಾಜ್ಯದ ಮಹನೀಯರಲ್ಲಿ ಕೃಷ್ಣರವರು ಸಹ ಮುಖ್ಯರಾಗಿದ್ದಾರೆ. ಮಂಡ್ಯ ಜಿಲ್ಲೆಯಲ್ಲಿ ಸಾಮಾಜಿಕ ಸೇವೆಯನ್ನು ಮೂಲ ಗುರಿಯಾಗಿಸಿಕೊಂಡು ಬಾಳಿದ ಭವ್ಯ ಇತಿಹಾಸವಿರುವ ಕುಟುಂಬದಿಂದ ಬಂದ ಕೃಷ್ಣರವರು ಬಾಲ್ಯದಿಂದಲೂ ಪಡೆದ ಒಳ್ಳೆಯ ಶಿಕ್ಷಣ, ಸಂಗೀತ, ಕ್ರೀಡೆ, ಸಾಹಿತ್ಯ ಇವುಗಳ ಕುರಿತಾದ ಅಭಿರುಚಿಗಳಿಂದಾಗಿ ನಾಡಿನ ಶ್ರೇಷ್ಠ ರಾಜಕಾರಣಿಯಾಗಿ ಗುರುತಿಸಿಕೊಂಡರು. ಸುದೀರ್ಘ ಅರವತ್ತು ವರ್ಷಗಳ ಕಾಲ ರಾಜ್ಯ ಮತ್ತು ರಾಷ್ಟ್ರ ರಾಜಕಾರಣದಲ್ಲಿ ತೊಡಗಿಸಿಕೊಂಡಿದ್ದ ಎಸ್.ಎಂ.ಕೃಷ ಅವರು ಎಂದಿಗೂ ತುಟಿ ಮೀರಿದ ಮಾತು ಅಥವಾ ಹದ್ದು ಮೀರಿದ ವರ್ತನೆಗಳಿಂದ ಎಂದಿಗೂ ಗುರುತಿಸಿಕೊಂಡವರಲ್ಲ. ಇದು ಅವರ ವ್ಯಕ್ತಿತ್ವಕ್ಕೆ ಹಿಡಿದ ಕೈಗನ್ನಡಿ. ಕಳೆದ ಐವತ್ತೈದು ವರ್ಷಗಳಿಂದ ಅಂದರೆ ನನ್ನ ಹನ್ನೆರೆಡನೆಯ ವಯಸ್ಸಿನಿಂದ ಅವರನ್ನು ಹತ್ತಿರದಿಂದ ನೋಡಿಕೊಂಡು ಬಂದ ನಾನು ಕೃಷ್ಣರವರು ತೊಂಬತ್ತೆರೆಡು ವರ್ಷಗಳನ್ನು ಮುಗಿಸಿದ ಸಂದರ್ಭದಲ್ಲಿ ಈ ಕೃತಿಯ ಮೂಲಕ ಅವರ ವ್ಯಕ್ತಿತ್ವ ಮತ್ತು ಸಾಧನೆಯನ್ನು ಕಟ್ಟಿಕೊಡಲು ಪ್ರಯತ್ನಿಸಿದ್ದೀನಿ ಎಂದಿದ್ದಾರೆ ಲೇಖಕ ಎನ್. ಜಗದೀಶ್ ಕೊಪ್ಪ.
ಮಂಡ್ಯ ಜಿಲ್ಲೆ ಮದ್ದೂರು ತಾಲ್ಲೂಕಿನ ಕೊಪ್ಪ ಗ್ರಾಮದಲ್ಲಿ 1956 ರಲ್ಲಿ ರೈತ ಕುಟುಂಬದಲ್ಲಿ ಜನನ. ಬೆಂಗಳೂರು ವಿ.ವಿ.ಪುರಂ ಕಾಲೇಜಿನಿಂದ ಬಿ.ಎ. ಪದವಿ, ಮೈಸೂರು ವಿಶ್ವವಿದ್ಯಾನಿಲಯದಿಂದ ಅರ್ಥಶಾಸ್ತ್ರದಲ್ಲಿ ಎಂ.ಎ. ಪದವಿ ಹಾಗೂ ಹಂಪಿ ಕನ್ನಡ ವಿಶ್ವವಿದ್ಯಾನಿಯದಿಂದ ‘ ಜಾಗತೀಕರಣ ಮತ್ತು ಗ್ರಾಮ ಭಾರತ’ ಪೌಢಪ್ರಬಂಧಕ್ಕೆ ಡಾಕ್ಟರೇಟ್ ಪದವಿ ಪಡೆದರು. 1981 ರಲ್ಲಿ ಪತ್ರಿಕೋದ್ಯಮ ಪ್ರವೇಶಿಸಿದ ಇವರು 2018 ರವರೆಗೆ ಹುಬ್ಬಳ್ಳಿ ನಗರದಲ್ಲಿ ಉದಯಟಿ.ವಿ.ಸಂಸ್ಥೆಯ ಉತ್ತರ ಕರ್ನಾಟಕ ಪ್ರಾದೇಶಿಕ ಕಚೇರಿಯ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿ ಇದೀಗ ಮೈಸೂರು ನಗರದಲ್ಲಿ ನಿವೃತ್ತ ಜೀವನ ನಡೆಸುತ್ತಿದ್ದಾರೆ. 1995 ರಲ್ಲಿ ಸುಮ್ಮಾನದ ಪದ್ಯಗಳು ಕೃತಿಯ ಮೂಲಕ ...
READ MORE