ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಭಗವಾನ್ ಬುದ್ಧ, ಸಂತ ಕಬೀರ ಮತ್ತು ಫುಲೆಯವರನ್ನು ಗುರುಗಳೆಂದು ಭಾವಿಸಿದ್ದರು. ಅವರಿಗೆ ಫುಲೆಯವರ ಜೀವನ ಚರಿತ್ರೆಯನ್ನು ಬರೆಯಬೇಕೆಂಬ ಆಸೆ ಉತ್ಕಟವಾಗಿತ್ತು. ಆದರೆ ಅವರ ದೇಹ ಪ್ರಕೃತಿಯಿಂದಾಗಿ ಬರವಣಿಗೆ ಸಾಧ್ಯವಾಗಲಿಲ್ಲ ಎಂದು ಒಂದು ಕಡೆ ಹೇಳಿಕೊಂಡಿದ್ದಾರೆ. ಅಸ್ಪೃಶ್ಯರನ್ನು ಮುಟ್ಟುವುದಿರಲಿ, ನೋಡುವುದೇ ಅಪರಾಧವೆಂದು ಭಾವಿಸುತ್ತಿದ್ದ ಕಾಲದಲ್ಲಿ ಅಸ್ಪೃಶ್ಯರೂ ಮನುಷ್ಯರೆಂದು ಒತ್ತಿ ಹೇಳಿ ಅದರ ವಿರುದ್ಧ ಹೋರಾಟ ಮಾಡಿದವರು ಮಹಾತ್ಮ ಫುಲೆ ಅವರು.
ಅಸ್ಪೃಶ್ಯ ಮತ್ತು ಅತಿ ಶೂದ್ರ ಹೆಣ್ಣು ಮಕ್ಕಳಿಗೆ ಶಾಲೆಗಳನ್ನು ಪ್ರಾರಂಭಿಸಿದ ಪ್ರಥಮ ಭಾರತೀಯ ಸುಧಾರಕರು. ಅಸ್ಪೃಶ್ಯರ ಹಕ್ಕು ಬಾದ್ಯತೆಗಳಿಗೆ, ಸ್ತ್ರೀಯರ ಸಮಾನತೆಗೆ ಅವರ ಶಿಕ್ಷಣಕ್ಕೆ, ರೈತ ಮತ್ತು ಕಾರ್ಮಿಕರ ಸಮಸ್ಯೆಗಳಿಗೆ ಧ್ವನಿಯನ್ನು ಮೊಳಗಿಸಿದ ಕೀರ್ತಿ ಅವರದು. ಅದಕ್ಕಾಗಿಯೇ ಮಹಾತ್ಮ ಗಾಂಧೀಜಿಯವರು ಫುಲೆಯವರನ್ನು ‘ನಿಜ ಮಹಾತ್ಮ’ ಎಂದು ಗೌರವಿಸಿದರೆ. ಡಾ. ಅಂಬೇಡ್ಕರರು ನನ್ನ ಗುರುವೆಂದು ಕರೆಯುತ್ತಾರೆ. ಅವರ ವಿಚಾರಗಳನ್ನು ಈ ಕೃತಿಯ ಮೂಲಕ ತಿಳಿಸಿಕೊಡುವ ಕಾರ್ಯ ಶ್ಲಾಘನೀಯ.
ಲೇಖಕ ಜೆ.ಪಿ. ದೊಡಮನಿ ಮೂಲತಃ ಬಾಗಲಕೋಟ ಜಿಲ್ಲೆಯ ಜಮಖಂಡಿ ತಾಲೂಕಿನ ತೇರದಾಳ ಪಟ್ಟಣದವರು. ತೇರದಾಳದ ಸರಕಾರಿ ಹಿರಿಯ ಪ್ರಾಥಮಿಕ ಗಂಡು ಮಕ್ಕಳ ಶಾಲೆ ಹಾಗೂ ಶ್ರೀ ಪ್ರಭುಲಿಂಗ ಹೈಸ್ಕೂಲಿನಲ್ಲಿ ಪ್ರಾಥಮಿಕ, ಮಾಧ್ಯಮಿಕ ಶಿಕ್ಷಣ ಪಡೆದ ಅವರು, ಶ್ರೀ ಶಿವಾನಂದ ಕಾಲೇಜು, ಕಾಗವಾಡ ಹಾಗೂ ಕಲಾ ವಾಣಿಜ್ಯ ಮಹಾವಿದ್ಯಾಲಯ, ರಾಯಬಾಗದಲ್ಲಿ ಪಿ. ಯು. ಸಿ. ಹಾಗೂ 1987ರಲ್ಲಿ ಬಿ. ಎ. (ಕನ್ನಡ ಮೇಜರ್) ಪದವಿ ಪಡೆದರು. ಕರ್ನಾಟಕ ವಿಶ್ವವಿದ್ಯಾಲಯ, ಕನ್ನಡ ಅಧ್ಯಯನ ಪೀಠದಿಂದ 1989ರಲ್ಲಿ ಕನ್ನಡ ಎಂ.ಎ, 1991ರಲ್ಲಿ ಡಿಪ್ಲೋಮಾ ಇನ್ ಜೈನಾಲಜಿ, 1993ರಲ್ಲಿ ವಿಶ್ವವಿದ್ಯಾಲಯದ ಧನಸಹಾಯ ಆಯೋಗ ನಡೆಸಿದ ...
READ MORE(ಹೊಸತು, ಫೆಬ್ರವರಿ 2012, ಪುಸ್ತಕದ ಪರಿಚಯ)
ಜನರ ಒಳಿತಿಗಾಗಿ ಶ್ರಮಿಸಿ ಜೀವನವನ್ನೇ ಸಮಾಜ ಸುಧಾರಣೆಗಾಗಿ ಮುಡುಪಾಗಿಟ್ಟು ಜನಮನ್ನಣೆ ಗಳಿಸಿದವರು ಜ್ಯೋತಿರಾವ್ ಫುಲೆ. ಅಸ್ಪೃಶ್ಯತಾ ನಿವಾರಣೆ, ವಿಧವಾವಿವಾಹ, ಹೆಣ್ಣು ಮಕ್ಕಳಿಗೆ ಶಿಕ್ಷಣ ಸೌಲಭ್ಯ ಮುಂತಾದ ಪ್ರಗತಿಪರ ವಿಚಾರಗಳಿಗೆ ಹೆಚ್ಚಿನ ಮಹತ್ವ ನೀಡಿದ ಅವರು ಸಾಕಷ್ಟು ವಿರೋಧಗಳ ನಡುವೆಯೇ ಅವುಗಳನ್ನು ಸಾಧಿಸಿ ತೋರಿಸಬೇಕಾಯಿತು. ಹಿಂದೂ ಸಮಾಜದಲ್ಲಿನ ಮೌಡ್ಯ ತುಂಬಿದ ಆಚರಣೆಯಿಂದಾಗಿ ಅಸಹನೀಯ ಬಾಳು ಸಾಗಿಸುತ್ತಿದ್ದ ಮಹಿಳೆಯರು, ಕೆಳವರ್ಗದ ತೋಷಿಕ ಜನರು ಕಟ್ಟುಕಟ್ಟಳೆಗಳನ್ನು ಮೀರಿ ಹೊಸ ಹೆಜ್ಜೆಗಳನ್ನಿಡಲು ಧೈರ್ಯ ತಾಳುತ್ತಿರಲಿಲ್ಲ. ಬಲವಾಗಿ ಬೇರೂರಿದ ನಂಬಿಕೆಗಳನ್ನಲುಗುಡಿಸಿ, ಪ್ರಗತಿಯತ್ತ ಜನರನ್ನು ಸಂಘಟಿಸಿ ಮುನ್ನಡೆಸುವುದು ಅಂದಿನ ಕಾಲದಲ್ಲಿ ಸುಲಭವೇನೂ ಆಗಿರಲಿಲ್ಲ. ದೇವಮಂದಿರ, ಮಠಮಾನ್ಯಗಳ ಪಾರಮ್ಯವನ್ನು ಒಪ್ಪಿಕೊಂಡು ಭಯಭಕ್ತಿಯಿಂದ ಅವರ ಮಾತಿನಂತೆ ನಡೆಯುತ್ತಿದ್ದ ಕಾಲವದು. ಪಲ ಅವರ ಸುಧಾರಣಾ ಕಾರ್ಯಕ್ರಮಗಳಿಗೆ ಅಡೆತಡೆಗಳು ದೊಡ್ಡ ಮಟ್ಟದಲ್ಲಿ ಎದುರಾದವು, ಮಹಾತ್ಮರಿಗೆ, ಗುರಿಸಾಧಕರಿಗೆ ಕಷ್ಟಗಳನ್ನೆದುರಿಸುವುದೆಂದರೆ ಹೂವಿನ ಸರ ಎತ್ತಿದಂತೆ, ಜೀವ ಬೆದರಿಕೆ ಬಂದರೂ ಫುಲೆ ಎದೆಗುಂದಲಿಲ್ಲ. ಇವರಿಗೆ ಸಹಧರ್ಮಿಣಿಯಾಗಿ ಸಾವಿತ್ರಿಬಾಯಿ ಫುಲೆಯವರೂ ಜೊತೆಯಾಗಿ ಬಂದಮೇಲೆ ಇನ್ನೂ ಹೆಚ್ಚಿನ ಬಲ ಬಂದಿತ್ತು. ಇಂಥ ಮಹಾನ್ ವ್ಯಕ್ತಿತ್ವದ ಫುಲೆಯವರ ಜೀವನಗಾಥೆಯನ್ನು ಧನಂಜಯ ಕೀರ ಮರಾಠಿಯಲ್ಲಿ ಬರೆದಿದ್ದು ಇದೀಗ ದೊಡಮನಿ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. ಅಂದಿನ ಫುಲೆಯವರಂಥ ನಿಸ್ಪೃಹ ಸಮಾಜಸೇವಕರನ್ನೂ ತಮ್ಮ ಉದ್ದಾರವೇ ಮುಖ್ಯವಾಗಿರುವ ಇಂದಿನ ಸೋಗಿನ ಸಮಾಜೋದ್ಧಾರಕರನ್ನೂ ತುಲನೆ ಮಾಡಲು ಇಂಥ ಜೀವನಚರಿತ್ರೆಯ ಓದು ಅತ್ಯವಶ್ಯಕ.