ಮಕ್ಕಳಿಗಾಗಿ ಸ್ವಾಮಿ ಸಿದ್ಧೇಶ್ವರರ ಕತೆಗಳು ರೋಹಿತ್ ಚಕ್ರತೀರ್ಥ ಅವರ ಕೃತಿಯಾಗಿದೆ. ವಿಜಯಪುರದ ಜ್ಞಾನಯೋಗಾಶ್ರಮದ ಮಹಾನ್ ಸಂತ ಸ್ವಾಮಿ ಸಿದ್ಧೇಶ್ವರರು ಪ್ರವಚನಗಳಿಗೆ ಪ್ರಸಿದ್ಧರು. ಅವರ ಮಾತುಗಳನ್ನು ಕೇಳಲು ಹತ್ತಾರು ಮೈಲಿಗಳಿಂದ ನಡೆದು ಅಥವಾ ಗಾಡಿಕಟ್ಟಿಸಿಕೊಂಡು ಬಂದು ಕೂರುತ್ತಿದ್ದ ಭಕ್ತರಿದ್ದರು. ಸಿದ್ಧೇಶ್ವರ ಸ್ವಾಮೀಜಿ ತಮ್ಮ ಪ್ರವಚನಗಳ ಮಧ್ಯದಲ್ಲಿ ಹತ್ತಾರು ಆಸಕ್ತಿದಾಯಕ, ಬುದ್ಧಿಪ್ರಚೋದಕ ಕತೆಗಳನ್ನು ಹೇಳುತ್ತಿದ್ದರು. ಅಂಥ ಕತೆಗಳಲ್ಲಿ ಮಕ್ಕಳಿಗೆ ತಿಳಿಹೇಳಬಹುದಾದ ಅತ್ಯಂತ ಸರಳ, ಸುಂದರ ನೀತಿಪಾಠವುಳ್ಳ ಒಟ್ಟು ೩೬ ಕತೆಗಳನ್ನು ಈ ಕೃತಿಯಲ್ಲಿ ಸಂಗ್ರಹಿಸಿಕೊಡಲಾಗಿದೆ. ರೋಹಿತ್ ಚಕ್ರತೀರ್ಥರ ನಿರೂಪಣೆಗೆ ಪ್ರಸಿದ್ಧ ಚಿತ್ರಕಲಾವಿದ ಚಿತ್ರಮಿತ್ರ ಅವರ ರೇಖಾಚಿತ್ರಗಳ ಸಾಂಗತ್ಯವಿದೆ. ಮಕ್ಕಳು ಮಾತ್ರವಲ್ಲದೆ ಹಿರಿಯರೂ ಓದಬಹುದಾದ, ಓದಿ ಮೆಲುಕು ಹಾಕಬಹುದಾದ ಸುಂದರ ನೀತಿಕತೆಗಳ ಗುಚ್ಛ ಇದಾಗಿದೆ.
ರೋಹಿತ್ ಚಕ್ರತೀರ್ಥ, ಓದಿದ್ದು ವಿಜ್ಞಾನ, ಮುಖ್ಯವಾಗಿ ಗಣಿತ. ಬೆಂಗಳೂರಿನಲ್ಲಿ ನಾಲ್ಕು ವರ್ಷ ಉಪನ್ಯಾಸಕರಾಗಿ ಕಾಲೇಜುಗಳಲ್ಲಿ ಪಾಠ ಮಾಡಿ, ಈಗ ಬಹುರಾಷ್ಟ್ರೀಯ ಕಂಪೆನಿಯಲ್ಲಿ ಉದ್ಯೋಗಿ. ಬರವಣಿಗೆಯನ್ನು ಹವ್ಯಾಸವಾಗಿಸಿಕೊಂಡು, ಹಲವು ಪತ್ರಿಕೆಗಳಲ್ಲಿ ಅಂಕಣಗಳನ್ನು ಬರೆದಿದ್ದಾರೆ. ಜೊತೆಗೆ ವಿಜ್ಞಾನ, ಗಣಿತ, ವ್ಯಕ್ತಿಚಿತ್ರ, ಮಕ್ಕಳ ಕತೆ ಸೇರಿದಂತೆ ಹಲವು ಪ್ರಕಾರಗಳಲ್ಲಿ ಇದುವರೆಗೆ 13 ಪುಸ್ತಕಗಳು ಪ್ರಕಟಣೆಯಾಗಿವೆ. ಉದ್ಯೋಗ ಮತ್ತು ಬರವಣಿಗೆಯಿಂದ ಬಿಡುವು ಸಿಕ್ಕಾಗ ತಿರುಗಾಟ, ಪ್ರವಾಸ ಇವರ ಹವ್ಯಾಸ., ...
READ MORE