ʼಕುಲು ಕಣಿವೆಯಲ್ಲಿʼ ಲೇಖಕ ಜಿ.ಪಿ.ಬಸವರಾಜು ಅವರ ಪ್ರವಾಸ ಕಥನ. ಹಿಮಾಲಯದ ತಪ್ಪಲಿನ ನಿವಾಸಿಗಳ ವಿವರ ನೀಡುತ್ತ ಅವರ ಬದುಕಿನ ಕಷ್ಟ-ನಷ್ಟ-ಬವಣೆಗಳತ್ತ ಒಂದು ಸೂಕ್ಷ್ಮ ನೋಟ ಹರಿಸಿಯೇ ಎಲ್ಲ ಸೌಂದರ್ಯಾನುಭೂತಿ, ಚಾರಣದ ನೋವು-ನಲಿವುಗಳು, ಪ್ರಕೃತಿ-ಪರಿಸರದ ಏರುಪೇರುಗಳು, ಹಕ್ಕಿಪಿಕ್ಕಿಗಳು, ಹಿಮ-ಮಳೆ-ಗುಡುಗು-ಮಿಂಚು-ಬಿಸಿಲು, ಹೂವು ಹುಲ್ಲುಗಳ ಕಡೆ ನಮ್ಮ ಮನಸ್ಸು ಕೊಂಡೊಯ್ಯುತ್ತಾರೆ ಲೇಖಕರು. ಚಾರಣಿಗನಾಗಿ ತಮ್ಮ ಅನುಭವ, ಉತ್ಸಾಹ, ಸಡಗರ ಅದೇನೇ ಇರಲಿ, ಲೇಖಕ ಬಸವರಾಜು ಅವರು ತಮ್ಮ ಸೂಕ್ಷ್ಮವಾದ ಅವಲೋಕನ ಪ್ರಜ್ಞೆಯಿಂದ ಅಲ್ಲಿಯೇ ಬದುಕು ಭವಿಷ್ಯ ಅರಸುತ್ತಿರುವ ಬಡ ಮಂದಿಯ ನೋವು ನಲಿವಿನ, ಬವಣೆಯ ಕುರಿತು ಸ್ಪಂದಿಸದೇ ಮುಂದಡಿಯಿಡುವುದಿಲ್ಲ ಎನ್ನುವಲ್ಲೇ ಈ ಚಾರಣ ಕಥನದ ಹೆಚ್ಚುಗಾರಿಕೆ ಇದೆ. ಮಾನವೀಯ ನೆಲೆಗಟ್ಟಿನಲ್ಲಿ ನಮ್ಮೊಳಗಿನ ಮನುಷ್ಯನನ್ನು ಜೀವಂತಗೊಳಿಸುತ್ತ ಸಾಗುವ ಈ ಕಥನ ಈ ಕಾರಣಕ್ಕೇ ಹೆಚ್ಚು ಆಪ್ತವಾಗುತ್ತದೆ.
ಹಿರಿಯ ಪತ್ರಕರ್ತ, ಸಾಹಿತಿ ಜಿ.ಪಿ ಬಸವರಾಜು ಅವರು ಹುಟ್ಟಿದ್ದು 1952 ಆಗಸ್ಟ್ 3ರಂದು. ಕತೆ, ಕವಿತೆ, ಪ್ರವಾಸ ಕಥನ, ವಿಮರ್ಶೆ, ಕಾದಂಬರಿ ಹೀಗೆ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಕ್ರಿಯಾಶೀಲರಾಗಿರುವ ಜಿ.ಪಿ. ಬಸವರಾಜು ಅವರು ಮೂರು ಬಾರಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಪುಸ್ತಕ ಪ್ರಶಸ್ತಿಯನ್ನು ಪಡೆದಿದ್ದಾರೆ. ಇವರ ಪ್ರಮುಖ ಕೃತಿಗಳೆಂದರೆ ಬೆತ್ತಲೆಯ ಬೆಳಕನುಟ್ಟು, ಕೊಳ್ಳದ ಹಾದಿ, ಶಿಖರ ಸಾಲು, ಕಾಗೋಡು, ಕಾಡಿನ ದಾರಿ. ಅವರಿಗೆ ಪುತಿನ ಕಾವ್ಯ ಪ್ರಶಸ್ತಿ, ಜಿಎಸ್ಎಸ್ ಕಾವ್ಯ ಪ್ರಶಸ್ತಿ, ಬೆಸಗರಹಳ್ಳಿ ರಾಮಣ್ಣ ಕಥಾ ಪ್ರಶಸ್ತಿ, ಕಿ.ರಂ. ಪುರಸ್ಕಾರ ಮುಂತಾದ ಗೌರವ ಪ್ರಶಸ್ತಿಗಳು ಸಂದಿವೆ. ...
READ MORE