‘ಹಿಮಗಿರಿಯಾನ’ ಛಾಯಾ ಭಗವತಿ ಅವರ ಪ್ರವಾಸ ಕಥನ. ಈ ಕೃತಿಗೆ ಲೇಖಕ ಚಂದ್ರಶೇಖರ ಆಲೂರು ಅವರ ಮುನ್ನುಡಿ ಇದೆ. ಹಿಮಾಲಯ ಪ್ರವಾಸ ಎಂದಾಕ್ಷಣ ನಮಗೆ ನೆನಪಾಗುವುದು ಹೃಷಿಕೇಷ, ಕೇದಾರ, ಬದರಿನಾಥ ಮುಂತಾದ ಪವಿತ್ರ ಯಾತ್ರಾಸ್ಥಳಗಳು, ಇಂಥ ಯಾತ್ರೆಯ ಬಗ್ಗೆ ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪನವರ ಗಂಗೆಯ ಶಿಖರಗಳಲ್ಲಿ ಸೇರಿದಂತೆ ಹಲವಾರು ಸಾರ್ಥಕ ಪ್ರವಾಸಕಥನಗಳು ಬಂದಿವೆ. ಛಾಯಾ ಭಗವತಿಯವರ ಪ್ರವಾಸಕಥನ ಇಂಥ ಯಾತ್ರಾಸ್ಥಳಗಳನ್ನು ಅಥವಾ ದಾರ್ಜೆಲಿಂಗ್, ಶಿಮ್ಲಾ ಮುಂತಾದ ಪ್ರೇಕ್ಷಣೀಯ ಸ್ಥಳಗಳನ್ನು ಕುರಿತದ್ದಲ್ಲ. ಹಿಮಾಲಯದ ತಪ್ಪಲಿನಲ್ಲಿರುವ, ನಾವು ಕಂಡು ಕೇಳರಿಯದ ಹಲವು ಸಣ್ಣಪುಟ್ಟ ಹಳ್ಳಿಗಳಲ್ಲಿ, ಹಿಮದ ಹೊಟ್ಟೆಯಲ್ಲಿ ಆಡಿದ್ದು ನಡೆದಾಡಿದ್ದು, ಮೂಳೆಯೊಳಕ್ಕೆ ಇಳಿಯುತ್ತಿದ್ದ ಅಲ್ಲಿನ ಛಳಿಗೆ ಕಂಪಿಸಿದ್ದು, ಅಲ್ಲಿನ ಜನರ ಜೀವನಕ್ರಮದೊಂದಿಗೆ ಒಂದಾಗಿ ಪ್ರತಿಕ್ಷಣವನ್ನೂ ಅನುಭವಿಸಿದ್ದನ್ನು ಈ ಪ್ರವಾಸ ಕಥನ ಹೇಳುತ್ತದೆ. ಈ ಕಾರಣಕ್ಕೆ ಇದೊಂದು ಅನನ್ಯವಾದ ಪ್ರವಾಸಕಥನ ಎನ್ನುತ್ತಾರೆ ಲೇಖಕ ಚಂದ್ರಶೇಖರ ಆಲೂರು.
ಗುಲ್ಬರ್ಗ ವಿಶ್ವವಿದ್ಯಾಲಯದಿಂದ ಇಂಗ್ಲಿಷ್ ಸಾಹಿತ್ಯದಲ್ಲಿ ಸ್ನಾತಕೋತ್ತರ (ಎಂ.ಎ.) ಪದವಿ ಪಡೆದಿರುವ ಛಾಯಾ ಭಗವತಿ ಹವ್ಯಾಸಿ ಬರಹಗಾರ್ತಿ. ಬೆಂಗಳೂರು ಆಕಾಶವಾಣಿಯ ಎಫ್ಎಂ ರೈನ್ ಬೋ ವಾಹಿನಿಯಲ್ಲಿ ಆರ್ ಜೆ (ರೇಡಿಯೊ ಜಾಕಿ) ಆಗಿ ಕೆಲಸ ಮಾಡಿರುವ ಛಾಯಾ ಅವರು ಕೆಲಕಾಲ ಪ್ರಿಸಂ ಬುಕ್ಸ್ ಪ್ರೈ ಲಿ. ನಲ್ಲಿ ಸಂಪಾದಕಿ, ಅನುವಾದಕಿ ಹಾಗೂ ಲೇಖಕಿಯಾಗಿ ಕಾರ್ಯ ನಿರ್ವಹಿಸಿದ್ದರು. ವಿಜಯನಗರ ಬಿಂಬ ರಂಗಶಿಕ್ಷಣ ಕೇಂದ್ರದಲ್ಲಿ ರಂಗಭೂಮಿ ಡಿಪ್ಲೊಮಾ ಮಾಡಿರುವ ಅವರಿಗೆ ನಟನೆ, ಫೋಟೋಗ್ರಫಿ, ಪ್ರವಾಸ, ಸಂಗೀತ, ಅನುವಾದ ಆಸಕ್ತಿಯ ಕ್ಷೇತ್ರಗಳು. ವೈಕಂ, ರಸ್ಕಿನ್ ಬಾಂಡ್ ಕತೆಗಳನ್ನು ಕನ್ನಡಕ್ಕೆ ಅನುವಾದಿಸಿರುವ ಛಾಯಾ ಸ್ವಂತ ಕತೆ-ಪ್ರಬಂಧಗಳನ್ನು ಪ್ರಕಟಿಸಿದ್ದಾರೆ. ’ಪುಟಾಣಿ ...
READ MORE