ಜೋಕಟ್ಟೆಯವರ ಹಿಮವರ್ಷದಲ್ಲಿರುವ 34 ಲೇಖನಗಳು ವೈವಿಧ್ಯ ವಿಷಯಗಳನ್ನು ಒಳಗೊಂಡಿವೆ. ಕುತೂಹಲಕಾರಿ ಮಾಹಿತಿಗಳನ್ನು ನೀಡುತ್ತವೆ. ಜನಪ್ರಿಯ ಮಾದರಿಯ ಬರಹಗಳು ಇದಾಗಿರುವುದರಿಂದ, ಸಂಕೀರ್ಣತೆಯಿಲ್ಲ. ಸರಳತೆ ಅವರ ನಿರೂಪಣೆಯ ಹೆಗ್ಗಳಿಕೆ. ಈ ಕೃತಿಯಲ್ಲಿ ಬೇರೆ ಬೇರೆ ಕ್ಷೇತ್ರಗಳನ್ನು ಜೋಕಟ್ಟೆ ಮುಟ್ಟಿ ನೋಡಿದ್ದಾರೆ. ಪ್ರವಾಸ ಕಥನವಿದೆ. ಡ್ಯಾನ್ಸ್ ಬಾರ್ನ ಪಿಂಕಿ, ಬಬ್ಲಿಯರ ಅಂತರಂಗವಿದೆ. ಮುಂಬಯಿಯಲ್ಲಿ ಕನ್ನಡ ಅಕ್ಷರ ಸೇವೆ ಮಾಡುವ ನವೀನ್ ಪ್ರಿಂಟರ್ಸ್ ಕುರಿತ ವಿವರಗಳಿವೆ. ಕನ್ನಡ-ಮರಾಠಿ ಸಂಬಂಧಗಳ ಚರ್ಚೆಯಿದೆ. ಮುಂಬೈ ಕನ್ನಡದ ಹಿರಿಮೆಯ ಬಗ್ಗೆ ಬರೆಯುತ್ತಾರೆ. ಬಾಲಿವುಡ್, ಬ್ಲೂಫಿಲಂ, ಬಗ್ಗೆಯೂ ಬರೆಯುವ ಇವರು ಮಗದೊಂದೆಡೆ ನೇಪಾಳ ಕರ್ನಾಟಕದ ನಡುವಿನ ಸಂಬಂಧಗಳನ್ನೂ ಕಟ್ಟಿಕೊಡುತ್ತಾರೆ. ಹಾಗೆಯೇ ಕೆಲವು ವೈಚಾರಿಕ ಬರಹಗಳೂ ಇಲ್ಲಿವೆ. ಸಾಂಸ್ಕೃತಿಕ ವಿಷಯಗಳನ್ನೂ ಅವರು ಆರಿಸಿಕೊಂಡಿದ್ದಾರೆ. ಇಲ್ಲಿರುವ ಎಲ್ಲ ಬರಹಗಳು ಬೇರೆ ಬೇರೆ ಕಾರಣಗಳಿಗಾಗಿ ನಮ್ಮಲ್ಲಿ ಓದುವ ಉತ್ಸಾಹವನ್ನು ಮೂಡಿಸುತ್ತವೆ ಎನ್ನುವುದರಲ್ಲಿ ಎರಡು ಮಾತಿಲ್ಲ.
ಸಾಹಿತಿ, ಪತ್ರಕರ್ತ 'ಶ್ರೀನಿವಾಸ ಜೋಕಟ್ಟೆ’ ಅವರು 1964 ಜುಲೈ 4 ಮಂಗಳೂರು ಜೋಕಟ್ಟೆಯಲ್ಲಿ ಜನಿಸಿದರು. ಪ್ರಸ್ತುತ ಮುಂಬಯಿ ನಗರದಲ್ಲಿ ವಾಸವಿದ್ದು, ಕನ್ನಡದ ದಿನಪತ್ರಿಕೆ 'ಕರ್ನಾಟಕ ಮಲ್ಲ'ದ ಉಪಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. 'ಜೋಶ್ರೀ', 'ಶ್ರೀಜೋ', ಎಂಬ ಕಾವ್ಯನಾಮದಿಂದಲೂ ಬರೆಯುತ್ತಿದ್ದಾರೆ. ಪ್ರವೃತ್ತಿಯಲ್ಲಿ ಬರಹಗಾರರಾಗಿಯೂ ಗುರುತಿಸಿಕೊಂಡಿರುವ ಇವರು ರಚಿಸಿದ ಪ್ರಮುಖ ಕೃತಿಗಳೆಂದರೆ ಹಿಮವರ್ಷ, ಊರಿಗೊಂದು ಆಕಾಶ, ಒತ್ತಿ ಬರುವ ಕತ್ತಲ ದೊರೆಗಳು. ಇವರ ಗದ್ದರ್ ಕವನ ಕರ್ನಾಟಕ ಸಾಹಿತ್ಯ ಅಕಾಡೆಮಿಯ ವಾರ್ಷಿಕ ಸಂಕಲನಕ್ಕೆ ಆಯ್ಕೆಯಾಗಿದೆ. ...
READ MORE