ನರರೋಗ ತಜ್ಞ ಡಾ. ಎನ್. ಕೆ. ವೆಂಕಟರಮಣ ಅವರು ಇಂಗ್ಲಿಷ್ ಭಾಷೆಯಲ್ಲಿ ‘ಬ್ರೇನ್ ಅಟ್ಯಾಕ್ಸ್: ಫ್ಯಾಕ್ಸ್ಟ್ ಆಂಡ್ ರಿಯಾಲಿಟೀಸ್’ ಶೀರ್ಷಿಕೆಯಡಿ ಬರೆದ ಕೃತಿಯನ್ನು ಡಾ. ಬಿ.ಎಸ್. ವೆಂಕಟೇಶ ಪ್ರಸಾದ ಅವರು ಕನ್ನಡಕ್ಕೆ ಅನುವಾದಿಸಿದ್ದು, ಡಾ. ಕೆ.ಆರ್. ಕಮಲೇಶ್ ಅವರು ಸಂಪಾದಿಸಿದ್ದಾರೆ. ಮಿದುಳು ಆಘಾತ ಎಂಬುದು ದೇಶದ ಜನರನ್ನು ಎಂದಿಗಿಂತ ಹೆಚ್ಚಾಗಿ ಇವತ್ತಿನ ದಿನಗಳಲ್ಲಿ ಕಾಡುವ ರೋಗ. ಒಂದು ಲಕ್ಷದ ಜನಸಂಖ್ಯೆ ಪೈಕಿ ಸರಾಸರಿಯಾಗಿ 180 ಜನರಲ್ಲಿ ಕಾಣಿಸಿಕೊಳ್ಳುತ್ತದೆ. ಪ್ರತಿ ವರ್ಷವೂ 1.75 ದಶಲಕ್ಷ ಜನರು ಮಿದುಳು ಆಘಾತದಿಂದ ಬಳಲುತ್ತಿದ್ದಾರೆ. ವ್ಯಕ್ತಿಗತ ಆರೋಗ್ಯವನ್ನು ಈ ರೋಗ ಹಾಳು ಮಾಡುತ್ತದೆ ಮತ್ತು ಆರ್ಥಿಕ ಮುನ್ನೆಡೆಗೆ ಭಾರೀ ಹೊಡೆತ ನೀಡುತ್ತಿದೆ. ಮಿದುಳು ಆಘಾತವು ವ್ಯಕ್ತಿಯಲ್ಲಿ ಅಶಕ್ತತೆ, ವಿರೂಪಗೆ ಕಾರಣವಾಗುತ್ತದೆ. ಸಕ್ಕರೆ ರೋಗ ಅಥವಾ ಮಧುಮೇಹ ರೋಗಿಗಳು ಈ ರೋಗಕ್ಕೆ ಬೇಗ ತುತ್ತಾಗುವ ಸಾಧ್ಯತೆಗಳು ಹೆಚ್ಚು. ಮಿದುಳು ಆಘಾತ ತಡೆಗೆ ಇಂದು ಸಾಕಷ್ಟು ವೈದ್ಯಕೀಯ ಚಿಕಿತ್ಸೆಗಳು ಇದ್ದು, ಈ ಕುರಿತು ಜನಮಾನಸದಲ್ಲಿ ಅರಿವು ಮೂಡಿಸಬೇಕಿದೆ. ದೇಶದಲ್ಲಿ ಮಿದುಳು ಆಘಾತ ತಡೆಯುವ ಎಲ್ಲ ಚಿಕಿತ್ಸೆಗಳು ಮತ್ತು ಪರಿಣಿತ ವೈದ್ಯರು ಇದ್ದಾರೆ. ಮಿದುಳು ಆಘಾತಕ್ಕೆ ಸಂಬಂಧಿಸಿದ ಮಾಹಿತಿ ಅಂದರೆ, ಅದಕ್ಕೆ ಮೂಲ ಕಾರಣ, ಚಿಕಿತ್ಸೆ, ತಾಂತ್ರಿಕ ಮಾಹಿತಿ, ಮುಂಜಾಗ್ರತೆ ಕ್ರಮಗಳು ಇತ್ಯಾದಿ ಕುರಿತ ಮಾಹಿತಿಯನ್ನು ಈ ಕೃತಿಯು ಒಳಗೊಂಡಿದೆ. ಮಿದುಳು ಆಘಾತ ತಡೆಗಿನ ಪ್ರಾಥಮಿಕ ಮಾಹಿತಿಯು ರೋಗಿಯಲ್ಲಿ ಆತ್ಮವಿಶ್ವಾಸ ಮೂಡಿಸುವಲ್ಲಿಯೂ, ಸೂಕ್ತ ಚಿಕಿತ್ಸೆಯ ನಿರ್ಧಾರ ಕೈಗೊಳ್ಳುವಲ್ಲಿಯೂ ಈ ಕೃತಿ ನೆರವು ನೀಡುವಂತಿದೆ.
ಡಾ. ಎನ್.ಕೆ. ವೆಂಕಟರಮಣ ಅವರು ಪ್ರಸಿದ್ಧ ನರರೋಗ ಶಸ್ತ್ರ ಚಿಕಿತ್ಸಕರು. ಉತ್ತಮ ಬರಹಗಾರರು, ಚಿಂತಕರು. ‘ಸಾಮಾಜಿಕ ನರರೋಗ ವಿಜ್ಞಾನ’ದ ಪರಿಕಲ್ಪನೆಯಲ್ಲಿ ಆಸಕ್ತರು. ವೈದ್ಯಕೀಯ ತುರ್ತು ಸೇವೆಗಳ ಪೈಕಿ ಅಪಘಾತಕ್ಕೆ ಒಳಗಾದ ಗಾಯಾಳುವನ್ನು ಕರೆದೊಯ್ಯಲು ಅಂಬ್ಯುಲನ್ಸ್ ಸೇವೆಯನ್ನು ಗ್ರೀನ್ ಕಾರಿಡಾರ್ ಮತ್ತು ಗೋಲ್ಡನ್ ಅವರ್ ಸಂಸ್ಥೆಗಳ ಮೂಲಕ ಆರಂಭಿಸಿದವರು. ಕೃತಿಗಳು: ಬ್ರೇನ್ ಅಟ್ಯಾಕ್ (ಫ್ಯಾಕ್ಟ್ಸ್ ಆಂಡ್ ರಿಯಾಲಿಟೀಸ್-ಆಂಗ್ಲ ಕೃತಿ) ಈ ಕೃತಿಯು ಡಾ. ಬಿ.ಎಸ್. ವೆಂಕಟೇಶ ಪ್ರಸಾದ ಅವರು ಕನ್ನಡಕ್ಕೆ ‘ಮಿದುಳಿನ ಆಘಾತ: ವಾಸ್ತವಾಂಶಗಳು’ ಶೀರ್ಷಿಕೆಯಡಿ ಅನುವಾದಿಸಿದ್ದಾರೆ. ...
READ MORE