ಶಿವ ವಿಶ್ವನಾಥನ್ ಒಬ್ಬರು ಅರ್ಥಶಾಸ್ತ್ರ ಅಧ್ಯಾಪಕರಾಗಿದ್ದು, ವಿಜ್ಞಾನ ಮತ್ತು ತಂತ್ರಜ್ಞಾನಗಳಿಗೆ ಸಂಬಂಧಿಸಿದ ಆಳವಾದ ಅಧ್ಯಯನ, ಪಾಂಡಿತ್ಯದಿಂದ ಬರೆಯುವ ಲೇಖಕರು, ಇವರ ವಿಜ್ಞಾನ ವಿಮರ್ಶೆಯ ಲೇಖನಗಳನ್ನು ರಂಗಕರ್ಮಿ, ಸಂಸ್ಕೃತಿ ಚಿಂತಕ ಮತ್ತು ಸಾಹಿತಿ ಅಕ್ಷರ ಕೆ.ವಿ ಕನ್ನಡಕ್ಕೆ ತಂದಿದ್ದಾರೆ.
ಆಧುನಿಕ ವಿಜ್ಞಾನಕ್ಕೆ ಹಿನ್ನೆಲೆಯಾಗಿರುವ ತಾತ್ವಿಕತೆಯನ್ನೂ ಪಶ್ಚಿಮದಲ್ಲಿ ಆಧುನಿಕ ವಿಜ್ಞಾನವು ರೂಪುಗೊಂಡ ವಿಶಿಷ್ಟ ಸನ್ನಿವೇಶವನ್ನೂ ನಿಖರವಾಗಿ ಗುರುತಿಸುವ ವಿಮರ್ಶಾತ್ಮಕ ಲೇಖನಗಳು ’ಪ್ರತಿಭೆಯ ಒಂದು ಪ್ರವಾಹ’ ದಲ್ಲಿವೆ. ಭಾರತದಲ್ಲಿ ವ್ಯಾಪಕಗೊಳ್ಳುತ್ತಿರುವ ವಿಜ್ಞಾನ ವಿರೋಧಿ ಹೋರಾಟಗಳಿಗೊಂದು ತಾತ್ವಿಕ ಪ್ರಸ್ತಾನವನ್ನು ಒದಗಿಸುತ್ತಲೇ ಪರ್ಯಾಯ ವಿಜ್ಞಾನವೊಂದರ ಹುಡುಕಾಟಕ್ಕೆ ಒದಗಿ ಬರುವಂಥವೂ ಆಗಿವೆ.
ಅಕ್ಷರ ಚಿಂತನದ ಸ್ಥಾಪಕ ಸಂಪಾದಕರೂ, ವಿಮರ್ಶಕರೂ ಆದ ಡಾ.ಆರ್. ನಾಗರಾಜ್ ಅವರ ಹಿನ್ನುಡಿಯ ಬರಹದಲ್ಲಿ ಹೇಳಿರುವಂತೆ, ’ಆಧುನಿಕ ವಿಜ್ಞಾನದ ಸಂಸ್ಕೃತಿ – ವಿಶಿಷ್ಟ ಪೂರ್ವಗ್ರಹಗಳನ್ನು ಬಯಲುಗೊಳಿಸುವ ನಿರ್ಮಮತೆಯ ದಾಖಲೆಗಳು ಶಿವ ವಿಶ್ವನಾಥನ್ ಅವರ ಪುಸ್ತಕದಲ್ಲಿ ನಮಗೆ ಕಾಣಸಿಗುತ್ತವೆ. ಈ ಪುಸ್ತಕದಲ್ಲಿ ಒಟ್ಟು ಏಳು ಪ್ರಬಂಧಗಳಲ್ಲಿ ಮೂರು ವಿಜ್ಞಾನದ ’ಸಾರ್ವತ್ರಿಕತೆ’ಯ ಸೋಗನ್ನು ಟೀಕಿಸುವಂತದ್ದು’. ಎಂದಿದ್ದಾರೆ.
ಪ್ರಭುತ್ವ – ಪ್ರಯೋಗಶಾಲೆಯ ದಸ್ತಾವೇಜುಗಳ ವಿಚಾರ’ ಎಂಬ ಗಹನವಾದ ಮತ್ತು ಚಿಂತನಶೀಲ ಲೇಖನವು ’ಸಾರ್ವತ್ರಿಕತೆಯ ವಿಮರ್ಶೆ’ಯ ಮೊದಲ ಗುಂಪಿಗೆ ಸೇರುವಂಥದು. ಅಭಿವೃದ್ಧಿ ಬಯಕೆಯ ಪ್ರಭುತ್ವದ ಅಪಾಯಕಾರಿ ಮಾರ್ಗಗಳನ್ನು ವಿಶ್ಲೇಷಿಸುತ್ತ, ಆ ಲೇಖನದ ಕಡೆಯ ಭಾಗದಲ್ಲಿ ಅವರು, ಚಿಪ್ಕೊ ಮತ್ತು ರೈತ ಹೋರಾಟಗಳ ಅನುಭವಕ್ಕೆ ಅದನ್ನು ಮುಖಾಮುಖಿಯಾಗಿಸುತ್ತಾರೆ.
ಇಂಗ್ಲೆಂಡಿನ ಲೀಡ್ಸ್ ವಿಶ್ವವಿದ್ಯಾಲಯದಿಂದ ರಂಗಕಲೆಯಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಕೆ.ವಿ. ಅಕ್ಷರ ಅವರು ಹೆಗ್ಗೋಡಿನ ನೀನಾಸಮ್ ರಂಗಶಿಕ್ಷಣ ಕೇಂದ್ರದಲ್ಲಿ ಅಧ್ಯಾಪಕ. ಖ್ಯಾತ ರಂಗ ನಿರ್ದೇಶಕರಾಗಿರುವ ಅವರು ಸೃಜನಶೀಲ ಸಾಹಿತಿ, ನಾಟಕ, ಕವನ, ಪ್ರಬಂಧಗಳನ್ನು ರಚಿಸಿದ್ದಾರೆ. ಸಹ್ಯಾದ್ರಿಕಾಂಡ, ಚೂರಿಕಟ್ಟೆ (ನಾಟಕಗಳು), ಹದಿಹರೆಯದ ಹಾಡುಗಳು (ಕವನ ಸಂಕಲನ), ರಂಗಪ್ರಪಂಚ, ರಂಗಪ್ರಯೋಗ, ರಂಗ ಅನ್ವೇಷಣೆ, ರಂಗಭೂಮಿ- ಪೂರ್ವ ಪಶ್ಚಿಮ (ರಂಗಕೃತಿ), ಮಾವಿನ ಮರದಲ್ಲಿ ಬಾಳೆಹಣ್ಣು (ವಿಮರ್ಶೆ). ಕರ್ನಾಟಕ ನಾಟಕ ಅಕಾಡೆಮಿಯ ಫೆಲೋಶಿಪ್ (2000) ಲಭಿಸಿದೆ. ...
READ MORE