`ಶ್ಲೋಕ ಸಂಸ್ಕಾರ’ ಕೃತಿಯು ಕೆ. ಗಣಪತಿ ಭಟ್ಟ ಅವರ ಲಕ್ಷ್ಮೀ ಪೂಜಾವಿಧಾನ ಕೃತಿಯಾಗಿದೆ. ಎಂಟು ವರ್ಷಗಳ ಹಿಂದೆ ಈ ಪುಸ್ತಕವನ್ನು ಸ್ವತಂತ್ರವಾಗಿ ಪ್ರಕಟಿಸಲಾಗಿತ್ತು. ಅನಂತರ ಸಂಧ್ಯಾವಂದನೆ ಮತ್ತು ದೇವಪೂಜಾ ವಿಧಾನವನ್ನು ಸೇರಿಸಿ 2005 ರಲ್ಲಿ ಹಾಗೂ ಕೆಲವು ಪರಿಷ್ಕಾರದೊಂದಿಗೆ 2007 ರಲ್ಲಿ ಮುದ್ರಿಸಿ ಇದೀಗ ಮಹಿಳೆಯರ ಸೂಚನೆಯಂತೆ ಪ್ರತ್ಯೇಕವಾಗಿ ಪ್ರಕಟಿಸಲಾಗಿದೆ. ಎರಡನ್ನೂ ಸೇರಿಸಿ ಧ್ವನಿಮುದ್ರಿಕೆ ಸಜ್ಜುಗೊಳಿಸಲಾಗಿದೆ. ಶಿಬಿರಗಳಿಗೆ, ಉಡುಗೊರೆ ನೀಡಲು, ಅತಿಥಿಗಳಿಗೆ ಕಾಣಿಕೆ ನೀಡಲು ಪ್ರತಿಷ್ಠಾನದ ಎಲ್ಲ ಪ್ರಕಟಣೆಗಳು ಬಹೂಪಯುಕ್ತವಾಗಿವೆ ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ. ಈ ಪುಸ್ತಕದಲ್ಲಿ ಲಕ್ಷ್ಮೀ ಆರತಿ ಹಾಡು, ಕನಕಧಾರಾ, ಲಕ್ಷ್ಮೀಸ್ತೋತ್ರಗಳನ್ನು ಅಧಿಕವಾಗಿ ಮುದ್ರಿಸಲಾಗಿದೆ.
ವಿದ್ವತ್ತು, ಸಂಗೀತ, ಯೋಗ, ಅಧ್ಯಾಪನ, ಆಚರಣೆ, ಉಪನ್ಯಾಸ, ಬರವಣಿಗೆ, ಸಂಘಟನೆ, ಸಮಾಜಸೇವೆ, ಅಧ್ಯಾತ್ಮ ಮುಂತಾದ ಚಟುವಟಿಕೆಗಳಲ್ಲಿ ಗುರುತಿಸಿಕೊಂಡಿರುವವರು ಡಾ. ಗಣಪತಿ ಭಟ್ಟ. 1960ರಲ್ಲಿ ಉತ್ತರಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಸಾಂತೂರು ಗ್ರಾಮದ ಕೃಷಿ ಕುಟುಂಬದಲ್ಲಿ ಜನಿಸಿದರು. ಅವರು ಧಾರವಾಡದಲ್ಲಿ ನ್ಯಾಯಶಾಸ್ತ್ರ, ವ್ಯಾಕರಣ ಮತ್ತು ಸಂಗೀತ ಅಭ್ಯಾಸ ಪೂರೈಸುತ್ತಿರುವಾಗಲೇ 1987 ರಲ್ಲಿ ಅನಾಯಾಸವಾಗಿ ದೊರೆತ ಶಿಕ್ಷಕವೃತ್ತಿಯೊಂದಿಗೆ ನೂರಾರು ವಟುಗಳಿಗೆ ಚತುರ್ವೇದ ಮಂತ್ರಗಳನ್ನು, ಮಹಿಳೆಯರಿಗೆ ರಾಗಸಹಿತವಾಗಿ ಸ್ತೋತ್ರಗಳನ್ನು, ವಿದ್ಯಾರ್ಥಿಗಳಿಗೆ ಸುಭಾಷಿತ-ಭಗವದ್ಗೀತೆಗಳನ್ನು ವರ್ಗ-ಶಿಬಿರಗಳ ಮೂಲಕ ಸುಸ್ವರವಾಗಿ ಬೋಧಿಸಿದ್ದಾರೆ. ವೇದಿಕೆಗಳನ್ನೂ ಕಲ್ಪಿಸಿದ್ದಾರೆ. ವಿವಿಧ ಸಂಸ್ಥೆಗಳ ಮೂಲಕ 50ಕ್ಕೂ ಹೆಚ್ಚು ಪುಸ್ತಕ-ಧ್ವನಿಮುದ್ರಿಕೆಗಳನ್ನು ಪ್ರಕಟಿಸಿದ್ದಲ್ಲದೇ ಹತ್ತು ವರ್ಷಗಳಲ್ಲಿ ಸಹಸ್ರಾಧಿಕ ಕಾರ್ಯಕ್ರಮಗಳನ್ನು ಸಂಯೋಜಿಸಿದ್ದಾರೆ. ...
READ MORE