ಕಾಂತಾವರ ಕನ್ನಡ ಸಂಘದ ನಾಡಿಗೆ ನಮಸ್ಕಾರ ಸಾಹಿತ್ಯ ಸಂಸ್ಕೃತಿ ಚಿಂತನ ಗ್ರಂಥಮಾಲೆಯ ಆರನೆಯ ಪುಸ್ತಕ ಕೆದಂಬಾಡಿ ಜತ್ತಪ್ಪ ರೈ. ಕೃಷಿಕರಾಗಿ, ಕೃಷಿಯ ರಕ್ಷಣೆಗಾಗಿ ಅನಿವಾರ್ಯವಾಗಿ ಬೇಟೆಗಾರರಾಗಿ, ತಮ್ಮ ಅರುವತ್ತನೆಯ ವಯೋಮಾನದಲ್ಲಿ ಅದೇ ಬೇಟೆಯ ನೆನಪುಗಳನ್ನು ಅಕ್ಷರಕ್ಕೆ ಇಳಿಸಿ ದಿಢೀರಾಗಿ ಪ್ರಸಿದ್ದಿಗೆ ಬಂದವರು ಜತ್ತಪ್ಪ ರೈ ಅವರು. ಮಹಾಕವಿ ಕುವೆಂಪು ಮೊದಲಾದವರಿಂದಲೇ ಬೇಟೆ ಯ ಸಾಹಿತ್ಯಕ್ಕಾಗಿ ಪ್ರಶಂಸೆಗೆ ಒಳಗಾದ ಅವರು ಬನ್ನಂಜೆಯವರಿಂದ ’ಮೃಗಯಾ ಸಾಹಿತಿ’ ಎಂದೂ ಕರೆಸಿಕೊಂಡಿದ್ದರು. ತಮ್ಮ ಕೃತಿಗಳಿಗಾಗಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಮತ್ತು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗಳಿಂದ ಪುರಸ್ಕೃತರಾಗಿದ್ದರು. ಅವರು ಸಾಹಿತ್ಯಲೋಕದಲ್ಲಿ ಏಕಕಾಲಕ್ಕೆ ಸಂಭ್ರಮ ಮತ್ತು ಬೆರಗು ಮೂಡಿಸಿದ್ದರು. ಬೇಟೆ ಸಾಹಿತ್ಯದ ನಾಲ್ಕು ಅನನ್ಯ ಅಸಾಧಾರಣ ಕೃತಿಗಳನ್ನು ನೀಡಿದ ರೈಗಳು ತುಳು, ಕನ್ನಡ, ಸಂಸ್ಕೃತ ಭಾಷೆಗಳಲ್ಲೂ ಅಪೂರ್ವ ಪಾಂಡಿತ್ಯ ಹೊಂದಿದದ್ದರು. ಈ ಕಾರಣಕ್ಕೆ ಅವರು ಸಂಸ್ಕೃತ ಮತ್ತು ಕನ್ನಡದಿಂದ ತುಳುವಿಗೆ ಇನ್ನಿಲ್ಲದಷ್ಟು ಸೊಗಸಾಗಿ ಅನುವಾದಿಸಿದ ಹೆಗ್ಗಳಿಕೆಗೂ ಪಾತ್ರರಾದರು. ದಕ್ಷಿಣ ಕನ್ನಡದ ಪ್ರತೂರು ಸಮೀಪದ ಪಾಣಾಜೆಯಲ್ಲಿ ಜನಿಸಿದ್ದ ಅವರು (11.02.1916) ಅದಮ್ಯ ಜೀವನೋತ್ಸಾಹದಿಂದ ಎಳೆಯರಿಗೆ ಮತ್ತು ಗೆಳೆಯರಿಗೆ ಮಾದರಿಯಾಗಿ ಬದುಕಿ 20-06-2003 ರಂದು ಕಾಲವಶರಾದರು. ಅವರ ಜೀವನ- ಸಾಧನೆಯನ್ನು ಈ ಕೃತಿ ನೀಡುತ್ತದೆ.
©2025 Book Brahma Private Limited.