‘ಒಡಲ ಕಡಲು’ ಡಿ.ಎಸ್. ವೀರಯ್ಯ ಅವರ ಸಾಹಿತ್ಯ ಅವಲೋಕನ. ಈ ಕೃತಿಯನ್ನು ಪ್ರೊ.ಕೆ. ಶಾರದಾ ಅವರು ಸಂಪಾದಿಸಿದ್ದಾರೆ. ಕೃತಿಗೆ ವಿದ್ವಾಂಸರಾದ ಪ್ರೊ.ಮಲ್ಲೇಪುರಂ ಜಿ.ವೆಂಕಟೇಶ್ ಅವರ ಬೆನ್ನುಡಿ ಬರಹವಿದ್ದು, ಕೃತಿಯ ಕುರಿತು ಬರೆಯುತ್ತಾ "ಡಿ.ಎಸ್. ವೀರಯ್ಯ ಅವರು ರಾಷ್ಟ್ರಮುಖದ ನೆಲೆಯಿಂದ ರಾಜಕೀಯ, ಸಾಮಾಜಿಕ, ಸಾಹಿತ್ಯ ಮುಖಗಳನ್ನು ನೋಡಬಲ್ಲರು. ವ್ಯಕ್ತಿಪಚ್ಚೆಯು ಸಮುದಾಯ ಪಜೆಯಲ್ಲಿ ಲೀನಗೊಂಡಾಗ ಮಾತ್ರ ವ್ಯಕ್ತಿತ್ವಕ್ಕೊಂದು ಬೆಲೆ ಬರುತ್ತದೆ. ಸನ್ಮಾನ್ಯ ಡಿ.ಎಸ್. ವೀರಯ್ಯ ಅವರು ತಮ್ಮ ಅರ್ಧಶತಮಾನದ ಹೋರಾಟ, ಸಾಧನೆಗಳಲ್ಲಿ ಸಮಗ್ರ ರಾಷ್ಟ್ರಪ್ರಜ್ಞೆ ತೀವ್ರವಾಗಿಯೇ ಕೆಲಸ ಮಾಡಿದೆ. ಇದು ಅವರು ನಡೆಸಿರುವ ಹೋರಾಟದ ಕುರುಹುಗಳಲ್ಲಿಯೂ ಸಾಕ್ಷೀಕರಿಸಿದ ಬರಹಗಳಲ್ಲಿಯೂ ಎದ್ದು ಕಾಣುತ್ತದೆ. ಡಿ.ಎಸ್. ವೀರಯ್ಯನವರ ಬರಹಗಳನ್ನು ನಿರ್ದೇಶಿಸಿದ್ದು ಅವರು ನಂಬಿದ ಅಂಬೇಡ್ಕರ್ ಎಂಬ ದಲಿತ ಸೈದ್ಧಾಂತಿಕ ರೂಪಕ. ಹಾಗಾಗಿ ವ್ಯಕ್ತಿ ನೆಲೆಯಲ್ಲಿಯೂ ಅಂಬೇಡ್ಕರ್, ತಾತ್ವಿಕ ನೆಲೆಯಲ್ಲಿಯೂ ಅಂಬೇಡ್ಕರ್ ತತ್ತ್ವಗಳು ಇವರನ್ನು ಆಡಿಸಿವೆ. ಓಲಾಡಿಸಿವೆ. ಇವೇ ಇವರ ಸಾಮಾಜಿಕ, ರಾಜಕೀಯ, ಶೈಕ್ಷಣಿಕ, ಸಾಹಿತ್ಯಕ ಬದುಕನ್ನು ಜೊತೆಜೊತೆಗೆ ಹೋರಾಟದ ಬದುಕನ್ನೂ ರೂಪಿಸಿವೆ. ಈ ಹಿನ್ನೆಲೆಯಲ್ಲಿ ವರ್ತಮಾನ ಕರ್ನಾಟಕದ ರಾಜಕೀಯ, ಸಾಮಾಜಿಕ, ಸಾಹಿತ್ಯಕ ಮಾನದಂಡಗಳನ್ನು, ಕರ್ನಾಟಕದ ದಲಿತ ಚಳವಳಿಗಳ ಇತಿಹಾಸವನ್ನು ಕಟ್ಟಿಕೊಳ್ಳುವಲ್ಲಿ ಇವರ ಸೃಜನ-ಸೃಜನೇತರ ಬರಹಗಳು ಅತಿ ಮಹತ್ತ್ವಪೂರ್ಣ ದಾಖಲೆಗಳಾಗಬಲ್ಲವು. ಇಂತಹ ದಾಖಲೆಗಳ ವಿಮರ್ಶೆ, ಪರಾಮರ್ಶೆ, ಪುನರ್ ವಿಮರ್ಶೆಗಳನ್ನು ಚಿಂತನ-ಮಂಥನಕ್ಕೊಳಪಡಿಸಿದ 'ಒಡಲ ಕಡಲು' ಕೃತಿಯ ಲೇಖನಗಳು ಡಿಎಸ್ವಿಯವರ ಪ್ರಖರ ವೈಚಾರಿಕತೆಗೆ ಹಿಡಿದ ದೀವಟಿಗೆಗಳು...!” ಎಂದಿದ್ದಾರೆ.
©2025 Book Brahma Private Limited.