ಲೇಖಕ ಜಿ. ಪಿ. ಬಸವರಾಜು ಅವರು ಸಂಪಾದಿಸಿದ ಕಥಾ ಸಂಕಲನ ಕೃತಿ ʻಲು ಷುನ್ ಕಥೆಗಳುʼ. ಪುಸ್ತಕದಿ ಶೀರ್ಷಿಕೆಯೇ ಸೂಚಿಸುವಂತೆ ಇದು ಚೀನಾದ ಊಳಿಗಮಾನ್ಯ ಶಕ್ತಿಗಳ ವಿರುದ್ದ ಯುದ್ದ ಸಾರಿದ ಲೇಖಕ ಹಾಗೂ ಕ್ರಾಂತಿಕಾರ ಲು ಷುನ್ ಬರೆದ ಕತೆಗಳ ಸಂಗ್ರಹವಾಗಿದೆ. ಈತ ಬರೆದ ಮೊದಲ ಕತೆ ʻಹುಚ್ಚನ ದಿನಚರಿʼ ಯು ಆಧುನಿಕ ಚೀನಾ ನಿರ್ಮಾಣದಲ್ಲಿ ಇತಿಹಾಸವಾಗಿ ಉಳಿದುಬಿಟ್ಟಿದ್ದು, ಚೀನೀ ಸಾಹಿತ್ಯಕ್ಕೆ ಹೊಸ ತಿರುವನ್ನೂ ಕೊಟ್ಟಿದೆ. ಚೀನಾವು ಸಾಮ್ರಾಜ್ಯಶಾಹಿಗಳ ಮುಷ್ಠಿಯಲ್ಲಿದ್ದಾಗ ಅಲ್ಲಿನ ಜನರ ಬದುಕು, ಸ್ವಾತಂತ್ರ್ಯ, ಆಸೆಗಳೆಲ್ಲವು ಛಿದ್ರವಾಗಿತ್ತು. ಇದನ್ನು ಕಣ್ಣೆದುರೇ ನೋಡಿದ ಹಾಗೂ ಅನುಭವಿಸಿದ ಲು ಷುನ್ ದಿಗ್ಭ್ರಮೆಗೊಂಡಿದ್ದ. ಬಳಿಕ ತುಳಿತದ ವಿವಿಧ ಸ್ವರೂಪಗಳನ್ನು ಅರ್ಥ ಮಾಡಿಕೊಂಡು, ಅದರ ವಿರೋಧಾಭಾಸಗಳನ್ನು ಸೂಕ್ಷ್ಮವಾಗಿ ಗಮನಿಸಿ, ಅವನತಿಯ ಕಾರಣಗಳನ್ನು ವಿವೇಚಿಸಿ ತನ್ನ ಮೊನಚಾದ ಬರವಣಿಗೆಯಿಂದ ವ್ಯಂಗ್ಯಮಾಡುತ್ತಾ ಊಳಿಗಮಾನ್ಯ ಪ್ರಭುಗಳನ್ನು ಬೆಚ್ಚಿಬೀಳಿಸಿದ. ಲು ಷುನ್ ಬಳಸುತ್ತಿದ್ದ ಹಾಸ್ಯ, ವ್ಯಂಗ್ಯ ಗೇಲಿ, ಎಲ್ಲವೂ ಕಥನ ಶೈಲಿಯ ಭಾಗವಾಗಿ ಮುಂದೆ ಚೀನೀ ಸಾಹಿತ್ಯಲೋಕದಲ್ಲೂ ಪರಿಣಾಮಕಾರಿಯಾಗಿ ಪ್ರತಿಬಿಂಬಿಸತೊಡಗಿತು. ಹೀಗೆ ಇವರು ಬರೆದ ಅನೇಕ ಕತೆಗಳು ಈ ಕೃತಿಯಲ್ಲಿವೆ.
ಹಿರಿಯ ಪತ್ರಕರ್ತ, ಸಾಹಿತಿ ಜಿ.ಪಿ ಬಸವರಾಜು ಅವರು ಹುಟ್ಟಿದ್ದು 1952 ಆಗಸ್ಟ್ 3ರಂದು. ಕತೆ, ಕವಿತೆ, ಪ್ರವಾಸ ಕಥನ, ವಿಮರ್ಶೆ, ಕಾದಂಬರಿ ಹೀಗೆ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಕ್ರಿಯಾಶೀಲರಾಗಿರುವ ಜಿ.ಪಿ. ಬಸವರಾಜು ಅವರು ಮೂರು ಬಾರಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಪುಸ್ತಕ ಪ್ರಶಸ್ತಿಯನ್ನು ಪಡೆದಿದ್ದಾರೆ. ಇವರ ಪ್ರಮುಖ ಕೃತಿಗಳೆಂದರೆ ಬೆತ್ತಲೆಯ ಬೆಳಕನುಟ್ಟು, ಕೊಳ್ಳದ ಹಾದಿ, ಶಿಖರ ಸಾಲು, ಕಾಗೋಡು, ಕಾಡಿನ ದಾರಿ. ಅವರಿಗೆ ಪುತಿನ ಕಾವ್ಯ ಪ್ರಶಸ್ತಿ, ಜಿಎಸ್ಎಸ್ ಕಾವ್ಯ ಪ್ರಶಸ್ತಿ, ಬೆಸಗರಹಳ್ಳಿ ರಾಮಣ್ಣ ಕಥಾ ಪ್ರಶಸ್ತಿ, ಕಿ.ರಂ. ಪುರಸ್ಕಾರ ಮುಂತಾದ ಗೌರವ ಪ್ರಶಸ್ತಿಗಳು ಸಂದಿವೆ. ...
READ MORE