‘ಡಾ. ಎಸ್.ಎಲ್. ಭೈರಪ್ಪ ಅವರ ಕಾದಂ-ಕಥನಗಳು’ ಕೃತಿಯನ್ನು ಲೇಖಕ ಶ್ರೀನಿವಾಸ ಹಾವನೂರ ಸಂಪಾದಿಸಿದ್ದಾರೆ. ಇಲ್ಲಿ ಭೈರಪ್ಪನವರ ವಂಶವೃಕ್ಷ: ಸಾಕ್ಷಿ: ತಂತು: ದಾಟು ಮತ್ತು ಪರ್ವ ಈ ಕಾದಂಬರಿಗಳಲ್ಲಿಯ ರಸವತ್ತಾದ ಕಥಾನಕಗಳನ್ನು ಒಳಗೊಂಡಿದೆ. ಕೃತಿ ರಚನೆಯ ಕುರಿತು ತಿಳಿಸುತ್ತಾ ಕೆಲವು ವರ್ಷಗಳ ಹಿಂದೆ ಕಸ್ತೂರಿ- ಮಾಸಪತ್ರಿಕೆಯಲ್ಲಿ ಡಾ. ಭೈರಪ್ಪ ಅವರ ದ ಮೂರು ಕಾದಂಬರಿಗಳ ಕಥನಗಳನ್ನು ಪ್ರಕಟಿಸಿದ್ದೆ. ಅದಕ್ಕೆ ಇನ್ನೆರಡನ್ನು ಸೇರಿಸಿ ಈ ಸಂಕಲನವನ್ನು ಹೊರತರಲಾಗಿದೆ. ಭೈರಪ್ಪನವರ ಅಧ್ಯಕ್ಷತೆಯ ಸಾಹಿತ್ಯ ಸಮ್ಮೇಳನದ ಕಾಲಕ್ಕೆ ಇಂಥ ಸಂಕಲನವನ್ನು ಪ್ರಕಟಿಸಬೇಕು. ಅದರಿಂದ ಅವರ ಕಾದಂಬರಿಗಳನ್ನ ಆಮೇಲೆ ಓದತಕ್ಕುದು ಎಂಬುದಕ್ಕೆ ಪ್ರಚೋದನೆ ದೊರೆಯುತ್ತದೆ ಎಂಬುದಾಗಿ ಪ್ರೊ.ಜಿ. ಅಶ್ವತ್ಥನಾರಾಯಣರು ಸೂಚಿಸಿದರು. ಇನ್ನೊಬ್ಬ ಮಿತ್ರ ಡಾ.ನಾ. ದಾಮೋದರ ಶೆಟ್ಟಿ ಅವರು ದನಿಗೂಡಿಸಿ ಅದರ ಮುದ್ರಣ, ಪ್ರಕಾಶನ ಕಾರ್ಯದಲ್ಲಿ ಕೈಗೂಡಿಸಿದರು ಎಂದಿದ್ದಾರೆ. ಜೊತೆಗೆ ಕಾದಂ-ಕಥನ ಎನ್ನುವುದಕ್ಕೆ ತುಸು ವಿವರಣೆ ಕೊಡಬೇಕು ಎಂದಿರುವ ಅವರು ಇಲ್ಲಿಯವು ಮೂಲ ಕೃತಿಗಳ ಸಂಗ್ರಹ ರೂಪವೇನಲ್ಲ. ಕಾದಂಬರಿಕಾರರ ಶಬ್ದಗಳಲ್ಲಿಯೇ ಆ ಕೃತಿಗಳ ರಸವತ್ತಾದ ಭಾಗಗಳನ್ನು ಕಥನಿಸುವುದು ಇವುಗಳ ಆಶಯವಾಗಿದೆ. ಇಡಿಯಾಗಿ ಕಾದಂಬರಿಯನ್ನು ಓದುವುದಕ್ಕೆ ಇವು ಪ್ರವೇಶಿಕೆ ಇದ್ದಂತೆ ಎಂದಿದ್ದಾರೆ. ಇಲ್ಲಿ ವಂಶವೃಕ್ಷದಿಂದ ಕಾತ್ಯಾಯನಿ, ಸಾಕ್ಷಿ ಕಾದಂಬರಿಯಿಂದ ಮಂಡಿ ಸಾಹುಕಾರ, ತಂತು ಕಾದಂಬರಿಯಿಂದ ರ್ಯಾಗಿಂಗ್, ದಾಟು ಕಾದಂಬರಿಯಿಂದ ಮಾತಂಗಿ, ಪರ್ವದಿಂದ ನಿಯೋಗ ಭಾಗಗಳು ಸಂಕಲನಗೊಂಡಿವೆ.
ಕನ್ನಡ ಸಾಹಿತ್ಯಸಂಶೋಧನೆ ಮಾಡಲು ಮೊತ್ತಮೊದಲು ಕಂಪ್ಯೂಟರ್ ಬಳಸಿದವರು ಡಾ. ಶ್ರೀನಿವಾಸ ಹಾವನೂರರು (1928-2010). ಕನ್ನಡ ಸಾಹಿತ್ಯಕ್ಕೆ ಅವರ ಕೊಡುಗೆ ಅಪಾರವಾದುದು, ವೈವಿಧ್ಯಮಯವಾದುದು. ಸಣ್ಣ ಕಥೆ, ಲಲಿತ ಪ್ರಬಂಧ, ಜೀವನ ಚರಿತ್ರೆ, ಸಾಹಿತ್ಯ, ಸಂಸ್ಕೃತಿ, ಇತಿಹಾಸ ವಿಮರ್ಶೆ ಮೊದಲಾದ ಪ್ರಕಾರಗಳಲ್ಲಿ 60ಕ್ಕೂ ಮಿಕ್ಕಿ ಕೃತಿಗಳನ್ನು ಹೊರತಂದರು. ವಿದೇಶದಲ್ಲಿದ್ದ ಕನ್ನಡ ಸಾಹಿತ್ಯವನ್ನು ಮರಳಿ ತಾಯ್ನಾಡಿಗೆ ಕರೆತಂದರು. ಹೊಸಗನ್ನಡ ಅರುಣೋದಯದ ಸಾಹಿತ್ಯವನ್ನು ಮತ್ತೆ ತೆರೆದು ತೋರಿಸಿದರು, ಹಿಂದೆ ಮುಂಬಯಿಯ ಟಾಟಾ ಮೂಲಭೂತ ವಿಜ್ಞಾನ ಸಂಸ್ಥೆಯ ಗ್ರಂಥಪಾಲಕರಾಗಿದ್ದರು. ಮುಂದೆ ಮಂಗಳೂರು ಮತ್ತು ಮುಂಬಯಿ ವಿ.ವಿ.ಯ ಕನ್ನಡ ಅಧ್ಯಯನ ಸಂಸ್ಥೆಯ ಮುಖ್ಯಸ್ಥರಾದರು. ಆಮೇಲೆ ಪುಣೆಯಲ್ಲಿ ಮರಾಠಿ ಕನ್ನಡ ಸ್ನೇಹ ಸಂವರ್ಧನೆಯಲ್ಲಿ ಪಾತ್ರವಹಿಸಿದರು.. ಕೊನೆಗೆ ಕರ್ನಾಟಕ ಸರಕಾರದ ಸಮಗ್ರ ದಾಸ ಸಾಹಿತ್ಯ ಸಂಪಾದಕರಾಗಿ ೫೦ ಸಂಪುಟಗಳ ಪ್ರಕಟಣೆಯ ನೇತೃತ್ವ ವಹಿಸಿದರು. ಕನ್ನಡದ ನಾಡೋಜರೆಂದು ಹೆಸರಾದರು. ...
READ MORE