‘ಮಹಾಮಹತ್ತಿನ ಮರಗಳು ’ ಕೃತಿಯು ಜಯದೇವಪ್ಪ ಜೈನಕೇರಿ ಅವರ ಅಧ್ಯಯನ ಕೃತಿಯಾಗಿದೆ. ಈ ಕೃತಿಯಲ್ಲಿನ ಕೆಲವೊಂದು ಮಾಹಿತಿಗಳು ಹೀಗಿವೆ : ಕೆಳದಿಯ ಅರಸರ ಕಾಲದಲ್ಲಿ ನಿರ್ಮಾಣವಾದ ಮಹಾಮತ್ತಿನ ಮಠಗಳಲ್ಲಿ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಕವಲೆದುರ್ಗದ ಮಠವೂ ಒಂದು. ಇದು ವೀರಶೈವ ಪರಂಪರೆಗೆ ಸೇರಿದ ಮಠ. ಇಂಥ ಅನೇಕ ಮಠಗಳು ನಿರ್ಮಾಣವಾಗಿದ್ದರೂ ಅವುಗಳಲ್ಲಿ ಕೆಲವು ಈಗ ಇಲ್ಲವಾಗಿವೆ. ಈಗ ಬೆಂಗಳೂರು, ತುಮಕೂರು, ಕರಾವಳಿ, ಕೊಡಗಿನಲ್ಲಿರುವ ಮಹತ್ತಿನ ಮಠಗಳ ಬಗ್ಗೆ ನಡೆಸಿದ ಅಧ್ಯಯನ ಈ ಪುಸ್ತಕದಲ್ಲಿದೆ. ಇದನ್ನು ಕವಲೆದುರ್ಗದ ಮಠವೇ ಪ್ರಕಟಿಸಿದೆ. ಕರ್ನಾಟಕದ ವೀರಶೈವ ಮಠಗಳಲ್ಲಿ ಎರಡು ಪರಂಪರೆಗಳು ಇವೆ. ಒಂದು ರಾಜಾಶ್ರಯ ಪಡೆದು, ನೂರಾರು ಶಾಖೆಗಳನ್ನು ಹೊಂದಿರುವ ಮಹಾಮತ್ತಿನ ಮಠಗಳು. ಇದರಲ್ಲಿ ಕವಲೆದುರ್ಗದ ಮಠವೂ ಒಂದು. ಇನ್ನೊಂದು ರಾಜಾಶ್ರಯ ಒಲ್ಲದ ಸ್ವತಂತ್ರವಾಗಿ ಬೆಳೆದ ವಿರಕ್ತಮಠ ಪರಂಪರೆ. ಮಹಾಮತ್ತಿನ ಪರಂಪರೆ ಬೆಳೆದದ್ದು ಕೆಳದಿ ಅರಸರ ಕಾಲದಲ್ಲಿ. ಈ ಪುಸ್ತಕದಲ್ಲಿ ಕರ್ನಾಟಕದ ಮಹಾಮತ್ತಿನ ಮಠಗಳು, ಕವಲೇ ದುರ್ಗದ ಮಠದ ಚರಿತ್ರೆ, ಸಮಕಾಲೀನ ವೀರಶೈವ ಮಠಗಳು, ಅವುಗಳ ದಾನದತ್ತಿಗಳು – ಹೀಗೆ ಅವುಗಳಿಗೆ ಸಂಬಂಧಿಸಿದ ಅನೇಕ ವಿಷಯಗಳನ್ನು ಇಲ್ಲಿ ವಿವರವಾಗಿ ಕೊಡಲಾಗಿದೆ.
ಸಾಹಿತಿ, ಸಂಶೋಧಕ ಜಯದೇವಪ್ಪ ಜೈನಕೇರಿ ಅವರು ಮೂಲತಃ ಶಿವಮೊಗ್ಗದವರು. ವಚನ ಸಾಹಿತ್ಯಕ್ಕೆ ಸಂಬಂಧಿಸಿದಂತೆ ಹಲವಾರು ಕೃತಿಗಳನ್ನು ರಚಿಸಿದ್ದರು. ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸದಸ್ಯರೂ ಆಗಿದ್ದ ಇವರು ‘ಕೆಳದಿ ಅರಸರ ಯಶೋಗಾಥೆ’, ‘ಶರಣ ವೈಭವ’, ‘ವಚನಾಮೃತ’, ‘ಶರಣ ಸಂಪದ’, ‘ಸಾಹಿತ್ಯ ಸಂಪದ’ ಮುಂತಾದ ಕೃತಿಗಳನ್ನು ನೀಡಿದ್ದಾರೆ. ಅವರು 07 ಸೆಪ್ಟಂಬರ್ 2020ರಲ್ಲಿ ನಿಧನರಾದರು. ...
READ MORE