‘ಲಿಂಗಾಯತ ಸಂಶೋಧನ ಕೇಂದ್ರ ಗ್ರಂಥಾಲಯ’ ಕೃತಿಯು ಎಸ್. ಆರ್. ಗುಂಜಾಳ ಅವರ ಐತಿಹಾಸಿಕ ಅವಲೋಕನವಾಗಿದೆ. ಈ ಕೃತಿಗೆ ಬೆನ್ನುಡಿ ಬರೆದಿರುವ ಸಿದ್ಧರಾಮ ಸ್ವಾಮಿಗಳು, ಲಿಂಗಾಯತ ಧರ್ಮ, ಸಮಾಜ, ಸಾಹಿತ್ಯ, ಸಂಸ್ಕೃತಿ ಮತ್ತು ತತ್ತ್ವಜ್ಞಾನಗಳಿಗೆ ಸಂಬಂಧಿಸಿದ ಅಮೂಲ್ಯ ಮತ್ತು ಅಪರೂಪದ ಗ್ರಂಥಗಳನ್ನು, ಸಮೃದ್ಧ ವಚನ ಸಾಹಿತ್ಯವನ್ನು ಒಂದೆಡೆ ಸಂಗ್ರಹಿಸಿ, ಓದುಗರಿಗೆ ಒದಗಿಸಿಕೊಡುವ, ಸಂಶೋಧಕರಿಗೆ ಸಾಂದರ್ಭಿಕ ಸೇವೆಯನ್ನು ಸಲ್ಲಿಸುವ ಉದ್ದೇಶದಿಂದ ಸ್ಥಾಪಿತವಾದ ಸಂಸ್ಥೆಯೇ ಲಿಂಗಾಯತ ಸಂಶೋಧನ ಕೇಂದ್ರ ಗ್ರಂಥಾಲಯ. ಗ್ರಂಥಾಲಯ ವಿಜ್ಞಾನದ ಕ್ಷೇತ್ರದಲ್ಲಿ ಅಪೂರ್ವ ಸೇವೆ ಸಲ್ಲಿಸಿ 'ಅಭಿನವ ಎಸ್. ಆರ್. ರಂಗನಾಥ್' ಎಂಬ ಕೀರ್ತಿಗೆ ಭಾಜನರಾಗಿರುವ ಡಾ. ಎಸ್. ಆರ್. ಗುಂಜಾಳ ಅವರ ಕನಸಿನ ಕೂಸು ಈ ಗ್ರಂಥಾಲಯ. ಇಂದು ಸಾರ್ವಜನಿಕ ಸೇವೆಯಲ್ಲಿ ಇಪ್ಪತ್ತು ವಸಂತಗಳನ್ನು ಪೂರ್ಣಗೊಳಿಸಿ ಸಮೃದ್ಧವಾಗಿ ಬೆಳೆದು ನಿಂತಿದೆ. ಈ ಗ್ರಂಥಾಲಯದ ಇತಿಹಾಸ, ಸಾಂದರ್ಭಿಕ ಸೇವೆ, ಗ್ರಂಥಗಳ ವಿವರ ಮುಂತಾದ ಹತ್ತು ಹಲವು ವಿಷಯಗಳನ್ನೊಳಗೊಂಡ ಕೈಪಿಡಿಯನ್ನು ಸಾರ್ವಜನಿಕರಿಗೆ ಒದಗಿಸಬೇಕೆಂಬ ನಮ್ಮ ಆಶಯಕ್ಕೆ ಅನುಗುಣವಾಗಿ ಡಾ. ಗುಂಜಾಳ ಅವರೇ ಈ ಕೈಪಿಡಿಯನ್ನು ರಚಿಸಿ ಓದುಗರ ಕೈಗಿತ್ತಿದ್ದಾರೆ. ಲಿಂಗಾಯತ ಸಂಶೋಧನ ಕೇಂದ್ರ ಗ್ರಂಥಾಲಯದ ದ್ವಿದಶಮಾನೋತ್ಸವದ ಸಂದರ್ಭದಲ್ಲಿ ಈ ಕೃತಿಯನ್ನು ಪ್ರಕಟಿಸಲು ನಮಗೆ ತುಂಬ ಅಭಿಮಾನ ಮತ್ತು ಹೆಮ್ಮೆ ಎನಿಸುತ್ತದೆ’ ಎಂದಿದ್ದಾರೆ.
ಎಸ್.ಆರ್.ಗುಂಜಾಳ ಅವರು ಧಾರವಾಡ ಜಿಲ್ಲೆಯ ಕೋಳಿವಾಡದಲ್ಲಿ ಜನಿಸಿದರು. ತಂದೆ ರಾಯಪ್ಪ ಗುಂಜಾಳ, ತಾಯಿ ರುದ್ರಮ್ಮ. ಸ್ನಾತಕೋತ್ತರ ಪದವೀಧರರಾದ ಅವರು `ಉತ್ತಂಗಿ ಚನ್ನಪ್ಪನವರ ಜೀವನ ಮತ್ತು ಕೃತಿಗಳು : ಒಂದು ಅಧ್ಯಯನ' ಪ್ರಬಂಧ ಮಂಡಿಸಿ ಬಂಗಾರದ ಪದಕದೊಡನೆ ಪಿಎಚ್.ಡಿ. ಪದವಿಯನ್ನೂ ಗಳಿಸಿದ್ದಾರೆ. ದಿಲ್ಲಿ ವಿಶ್ವವಿದ್ಯಾಲಯದಲ್ಲಿ ಗ್ರಂಥಾಲಯ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆದ ಅವರು 1979ರಲ್ಲಿ ಗುಲಬರ್ಗಾ ವಿಶ್ವವಿದ್ಯಾಲಯದಲ್ಲಿ ಗ್ರಂಥಾಲಯ ವಿಭಾಗದ ಮುಖ್ಯಸ್ಥರ ಜವಾಬ್ದಾರಿಯನ್ನು ಹೊತ್ತರು. ಗ್ರಂಥಾಲಯಕ್ಕೆ ಸಂಬಂಧಿಸಿದಂತೆ-ಐವರು ಗ್ರಂಥಾಲಯ ವಿಜ್ಞಾನಿಗಳು, ಗ್ರಂಥಾಲಯು ವಿಜ್ಞಾನ ದರ್ಶನ, ಕರ್ನಾಟಕದಲ್ಲಿ ಗ್ರಂಥಾಲಯಗಳು, ಗ್ರಂಥಾಲಯ ದಿಗ್ಗಜರು, ಗ್ರಂಥಾಲಯ ವಿಜ್ಞಾನದ ಪಂಚಸೂತ್ರಗಳು, ಗ್ರಂಥಾಲಯದ ಅಂತರಂಗ, ಇಂಗ್ಲಿಷ್ನ 3ಕೃತಿ ಸೇರಿ ...
READ MORE