ಎಮ್.ಆರ್. ಸತ್ಯನಾರಾಯಣ್ ಅವರ ‘ಕನಕದಾಸರ ವರಮೋಹನತರಂಗಿಣಿ’ ವ್ಯಾಖ್ಯಾನ-ವಿಶ್ಲೇಷಣೆ ಸಂಪುಟ-1 ಸುಮಾರು 2799 ಸಾಂಗತ್ಯ ಪದ್ಯಗಳ ಈ ಮಹಾನ್ ಕಾವ್ಯವು ವಿದ್ವಾಂಸರು ಹಾಗೂ ವಿಮರ್ಶಕರು ಇದುವರೆಗೆ ಮನಮೋಹಕವಾದ ಶೃಂಗಾರಕಾವ್ಯವೆಂದು ವರ್ಣಿಸಿ ವ್ಯಾಖ್ಯಾನಿಸಿದ ಕಾವ್ಯಶಿಲ್ಪ. ಶ್ರೀ ಕೃಷ್ಣ ರುಕ್ಮಿಣಿ, ಶ್ರೀ ಕೃಷ್ಣನ ಮಗ ಪ್ರದ್ಯುಮ್ನ- ಮಾಯಾವತಿ ಹಾಗೂ ಶ್ರೀಕೃಷ್ಣನ ಮೊಮ್ಮಗ ಅನಿರುದ್ಧ-ಉಷೆಯರ ಶೃಂಗಾರರಸಪರಿಪೂರ್ಣವಾದ ಲೀಲಾಕಥಾಮೃತವು ಈ ಕಾವ್ಯತರಂಗಿಣಿಯಲ್ಲಿ ಬತ್ತದ ನಿರಂತರ ಪ್ರವಾಹವಾಗಿ ಹರಿದು ರಸಿಕರ ಹೃದಯಸಾಗರಗಾಮಿನಿಯಾಗಿ ಸುಮಾರು ನಾಲ್ಕು ಶತಮಾನಗಳಿಂದಲೂ ಹರಿಯುತ್ತ ಬಂದಿದೆ. ಈ ಕಾವ್ಯತರಂಗಿಣಿಯಲ್ಲಿ ಯಾನ ಮಾಡುವುದು ಸುಲಭದ ಕೆಲಸವಲ್ಲ, ಯಾವುದೇ ನದೀಯಾನಕ್ಕೆ ಸುಮ್ಮ-ಸುಮ್ಮನೆ ಹೋಗಿ ಬರುವುದು ಅರ್ಥವಿಲ್ಲದ್ದು. ಅದಕ್ಕೆ ಮನಸ್ಸು, ಬುದ್ಧಿ, ಅಹಂಕಾರ ಮೊದಲಾದವುಗಳನ್ನು ಸಿದ್ಧಮಾಡಿಕೊಂಡು ತಮ್ಮನ್ನು ತಾವು ಆ ಯಾನದಲ್ಲಿ ತನ್ಮಯ ಮಾಡಿಕೊಂಡು ಹೊರಟರೆ ನದೀಯಾನವು ಅರ್ಥಪೂರ್ಣವಾಗುತ್ತದೆ ಎಂದು ಇಲ್ಲಿ ವಿವರಿಸಲಾಗಿದೆ. ಕೃತಿಯು ನಾಲ್ಕು ಭಾಗಗಳಾದ ಪ್ರವೇಶಿಕೆ, ಆಕರಗಳು, ಕಾವ್ಯಭಾಗ-ಪೀಠಿಕಾಸಂಧಿ(ಒಂದನೆಯ ಸಂಧಿ), ಸೌರಾಷ್ಟ್ರ ವರ್ಣನೆ(ಎರಡನೆಯ ಸಂಧಿ), ದ್ವಾರಕಾಪುರ ವರ್ಣನೆ(ಮೂರನೆಯ ಸಂಧಿ) ಕುರಿತ ವಿಚಾರಗಳನ್ನು ಇಲ್ಲಿ ಪಸ್ತುತಪಡಿಸಲಾಗಿದೆ. ಪ್ರತಿಯೊಂದು ಭಾಗವು ಇಲ್ಲಿ ಹಲವಾರು ವಿಚಾರಗಳೊಂದಿಗೆ ಪಠ್ಯದ ಸ್ಥೂಲ ಪರಿಚಯವನ್ನು ನೀಡುತ್ತದೆ.
ಲೇಖಕ ಎಮ್.ಆರ್. ಸತ್ಯನಾರಾಯಣ್ ಅವರು ಮೂಲತಃ ಶಿವಮೊಗ್ಗದವರು. ಬರವಣಿಗೆ ಅವರ ಆಸಕ್ತಿ ಕ್ಷೇತ್ರವಾಗಿದೆ. ಕಾಗಿನೆಲೆ ಅಭಿವೃದ್ದಿ ಪ್ರಾಧಿಕಾರದಿಂದ ಕನಕದಾಸರ ಕುರಿತ ಮೂರು ಸಂಪುಟಗಳ ಸಂಶೋಧನೆಯನ್ನು ಮಾಡಿರುತ್ತಾರೆ. ಕೃತಿಗಳು: ಕನಕದಾಸರ ವರಮೋಹನತರಂಗಿಣಿ ಸಂಪುಟ-1, ಕನಕದಾಸರ ವರಮೋಹನತರಂಗಿಣಿ ಸಂಪುಟ-2, ಕನಕದಾಸರ ವರಮೋಹನತರಂಗಿಣಿ ಸಂಪುಟ-3 ...
READ MORE