ಲೇಖಕ ಜಿ. ರಾಜಶೇಖರ ಅವರ ಇತಿಹಾಸ ಸಂಬಂಧಿ ಕೃತಿ ʼಕಾಗೋಡು ಸತ್ಯಾಗ್ರಹ”. ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಒಂದು ಚಿಕ್ಕ ಹಳ್ಳಿ ಕಾಗೋಡು. ಆದರೆ ಅಂಥದೇ ಅಸಂಖ್ಯಾತ ಹಳ್ಳಿಗಿಲ್ಲದ ಒಂದು ದೊಡ್ಡಸ್ತಿಕೆ ಈ ಊರಿಗಿದೆ. ಅದು 1950-52ರಲ್ಲಿ ನಡೆದ ಕಾಗೋಡು ರೈತ ಸತ್ಯಾಗ್ರಹ. ಗೇಣಿ ಅಳೆಯುವ ಕೊಳಗದ ಪ್ರಮಾಣದ ಬಗ್ಗೆ ಎದ್ದ ತಕರಾರು ಇಂಥ ಒಂದು ರೈತ ಸತ್ಯಾಗ್ರಹವಾಗಿ ಬೆಳೆದು ಆ ಸಂದರ್ಭದಲ್ಲಿ ರೈತರ ಪಾಲಿಗೆ ವಿಫಲವಾಗಿ ಕೊನೆಗೊಂಡಿತು. ಪ್ರಸ್ತುತ ಪುಸ್ತಕ ಇಡೀ ಸತ್ಯಾಗ್ರಹದ ಹಿನ್ನೆಲೆ, ಅದು ನಡೆದ ರೀತಿ ಮತ್ತು ಅದರ ಸಫಲತೆ ವಿಫಲತೆಗಳನ್ನು ಗಮನಿಸುತ್ತ ಭಾರತದ ಸಮಾಜವಾದೀ ಆಂದೋಲನಗಳ ಬಗ್ಗೆಯೇ ಒಂದು ಅರಿವನ್ನು ಮೂಡಿಸುತ್ತದೆ. ರೈತ ಸಮುದಾಯದಲ್ಲಿ ಕಾಗೋಡು ಸತ್ಯಾಗ್ರಹದಂಥ ಪ್ರತಿಕ್ರಿಯೆ ಹುಟ್ಟಿದ್ದು ಹೇಗೆ? ಕ್ರಾಂತಿಕಾರಕವಾಗಿ ಹುಟ್ಟಿದ ಇಂಥ ಚಳುವಳಿಗೆ ಅಂದಿನ ಸರ್ಕಾರ, ಪತ್ರಿಕೆ, ಬುದ್ಧಿಜೀವಿಗಳು ಮತ್ತು ರಾಜಕೀಯ ಪಕ್ಷಗಳು ಪ್ರತಿಸ್ಪಂದಿಸಿದ್ದು ಹೇಗೆ? ಉತ್ಸಾಹದಿಂದ ಪ್ರಾರಂಭವಾದ ಈ ಚಳುವಳಿ ನೀರಸವಾಗಿ ಕೊನೆಗೊಂಡಿದ್ದೇಕೆ? ನಮ್ಮ ರೈತ ಸಮುದಾಯಕ್ಕೆ ಪ್ರಾತಿನಿಧಿಕವಾದ ಇಂಥ ಒಂದು ಚಳುವಳಿ ರಾಜ್ಯಾದ್ಯಂತ ಯಾಕೆ ವ್ಯಾಪಿಸಲಿಲ್ಲ? ಸೀಮಿತ ಉದ್ದೇಶದಿಂದ ಆರಂಭವಾದ ಈ ಚಳುವಳಿ ವಿಸ್ತೃತವಾಗಿ ಈ ವ್ಯವಸ್ಥೆಯನ್ನೇ ಯಾಕೆ ಪ್ರಶ್ನಿಸಲಿಲ್ಲ? – ಇಂಥ ಮೂಲಭೂತ ಪ್ರಶ್ನೆಗಳಿಗೆ ಈ ಪುಸ್ತಕ ಉತ್ತರ ಹುಡುಕುತ್ತದೆ.
1946ರ ಏಪ್ರಿಲ್ 3ರಂದು ಉಡುಪಿ ಜಿಲ್ಲೆಯ ಗುಂಡ್ಮಿಯಲ್ಲಿ ಜನಿಸಿದ ಜಿ. ರಾಜಶೇಖರ ಅವರು ಪದವಿ ಪಡೆದದ್ದು ಉಡುಪಿಯಲ್ಲಿ. ಮೊದಲಿಗೆ ಕೆಲಕಾಲ ಶಿಕ್ಷಕರಾಗಿ ಕೆಲಸ ಮಾಡಿದ ಇವರು ಬಳಿಕ ಎಲ್ಐಸಿಯ ಉದ್ಯೋಗಿಯಾಗಿದ್ದರು. ಸಾಹಿತ್ಯ-ಸಮಾಜ- ರಾಜಕಾರನ ಕುರಿತಂತೆ ಹಾಗೂ ಕೋಮುವಾದವೂ ಸೇರಿದಂತೆ ಸಮಕಾಲೀನ ತುರ್ತಿನ ವಿದ್ಯಮಾನಗಳ ಬಗ್ಗೆ ಅವರು ಬಹುಸಂಖ್ಯೆಯ ಲೇಖನಗಳನ್ನು ಸತತವಾಗಿ ಪ್ರಕಟಿಸುತ್ತಲೇ ಬಂದಿದ್ದರೂ ಈ ಬರಹಗಳು ಸಂಕಲನಗೊಂಡು ಪ್ರಕಟಗೊಂಡಿದ್ದು ಕಡಿಮೆ. ಸಮಕಾಲೀನ ಕನ್ನಡದ ಪ್ರಮುಖ ವಿಮರ್ಶಕ- ಚಿಂತಕರೆಂದು ಮನ್ನಣೆ ಗಳಿಸಿರುವ ರಾಜಶೇಖರ ಅವರು ಎಡಪಂಥೀಯ ಧೋರಣೆಯನ್ನು ನಿಷ್ಠುರ ಆತ್ಮವಿಮರ್ಶೆಯೊಂದಿಗೆ ಕಸಿ ಮಾಡಿದವರು. ಕೃತಿಗಳು: ’ಕಾಗೋಡು ಸತ್ಯಾಗ್ರಹ’, ಪರಿಸರ ...
READ MORE